ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ ಆರ್ ರಮೇಶ ಕವಿತೆ – ಯುದ್ಧ ಕಾಲದಲ್ಲಿ…

ಎಚ್ ಆರ್ ರಮೇಶ

ಯುದ್ಧ ಕಾಲದಲ್ಲಿ
ಹೂವುಗಳ ನೋಡಬಾರದು,
ನೋಡಿದರೆ
ಜಿನುಗುವುದು ನೆತ್ತರು,
ಕೇಳಬಾರದು ಸಂಗೀತ,
ಕೇಳಿದರೆ ಕೇಳುವುದು ಆಕ್ರಂದನ,
ಯುದ್ಧ ಕಾಲದಲ್ಲಿ ಚಿತ್ರವ ಬಿಡಿಸಬಾರದು,
ಬಿಡಿಸಿದರೆ ರಣರಂಗವೇ ಚಿತ್ರವಾಗುವುದು ಎಂದಿಗೂ ಅಳಿಯದೆ ಅಣಕಿಸುತ್ತ
ಇರುವ ಕಾಲವನ್ನು
ಬರುವ ಕಾಲವನ್ನು,
ಯುದ್ದ ಕಾಲದಲ್ಲಿ ತತ್ವವ ಹೇಳಬಾರದು,

ಹೇಳಿದರೆ ಜೀವ ಹಿಂಡಿದಂತಾಗುವುದು,
ಕವಿತೆಯ ಬರೆದರಂತೂ ಪ್ರೀತಿ ಪಾತ್ರರು ಇಮೇಜುಗಳಾಗಿ
ಕಾಡುವರು,
ಹಾಡಿದರಂತೂ ಎದೆ ನಡುಗುವುದು,
ನೆರಳೇ ಪ್ರೇತಗಳಾಗಿ
ಸುತ್ತುವರೆವುವು,
ಯುದ್ಧ ಕಾಲದಲ್ಲಿ
ಮನಸ ಬಿಚ್ಚಿ ಮಾತಾಡಬೇಕು
ಭಾಷೆ ಆಯುಧಗಳ ತುಕ್ಕು ಹಿಡಿಸುವ ತನಕ,
ಭಾಷೆಗೆ ಬಗ್ಗದದು ಯಾವುದಿದೆ,
ಭಾಷೆಗೆ ನಿಲುಕದದು ಯಾವುದಿದೆ,
ಯುದ್ದ ಕಾಲದಲ್ಲಿ ನುಡಿಸಬೇಕು ಮಾತನು.

‍ಲೇಖಕರು Admin

1 March, 2022

1 Comment

  1. T S SHRAVANA KUMARI

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading