ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ಚೆಸ್ವಿ ಮನೆಯ ಕನ್ನಡಿಯಲ್ಲಿ ಸೂರ್ಯ

ಬೆಳ್ಳಾಲ ಗೋಪಿನಾಥ ರಾವ್

‘ಕನ್ನಡ ಬ್ಲಾಗರ್ಸ್’ ನಿಂದ

ಪ್ರತಿ ವರುಷ ತಮ್ಮ ಹುಟ್ಟಿದ ಹಬ್ಬದ ದಿನ ಪುಸ್ತಕ ಬಿಡುಗಡೆ ಮಾಡುವ ವಿಶಿಷ್ಟ ಸಂಪ್ರದಾಯವನ್ನು ಹುಟ್ಟು ಹಾಕಿದ ಅವರು ಅದರಂತೆ ಈ ಸಾರಿಯೂ ತಮ್ಮ ” ಕನ್ನಡಿಯ ಸೂರ್ಯ” ಮತ್ತು ” ಹೊಸ ಕನ್ನಡ ಕಥನ ಕವನ” ಎಂಬ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಿದರು.

ಹಿರಿಯ ಚೇತನ ರಾಷ್ತ್ರ ಕವಿ ಶ್ರೀಯುತ ಶಿವರುದ್ರಪ್ಪನವರು , ಡಾ ಚಂದ್ರ ಶೇಖರ ಕಂಬಾರರು ಮತ್ತು ಅವರ ಸಹಧರ್ಮಿಣಿಯವರು, ಶ್ರೀಮತಿ ಮತ್ತು ಶ್ರೀಯುತ ಬಿ ಆರ್ ಲಕ್ಷ್ಮಣ ರಾವ್, ಶ್ರೀಯುತ ಎಸ್ ಮಂಜುನಾಥ್ ರವರು, ಅಪಾರ, ವಸ್ತಾರೆ, ದತಾತ್ರಿಯವರೆಲ್ಲರೂ ನೆರೆದಿದ್ದು,

ಮುನ್ನುಡಿಯ ಸ್ವಾಗತ ಭಾಷಣ ಆನಂದ ಕಂದ ಗ್ರಂಥಮಾಲೆ ಯ ಪ್ರಕಾಶಕರು ಮಲ್ಲಾಡಿ ಹಳ್ಳಿ ರಾಘವೇಂದ್ರ ಪಾಟೀಲರು ಎಚ್ಚೆಸ್ವೀಯವರ ಸಾಹಿತ್ಯದ ಕ್ರಷಿಯ ಹರಹನ್ನು ಬಯಲು ಮಾಡಿದರೆ ಕವಿತಾ ಸಂಕಲನದ ಪರಾಮರ್ಶೆ ಕವಿ ಎಸ್ ಮಂಜುನಾಥ ಅವರು ಮಾತನಾಡುತ್ತಾ ” ಅವರ ವ್ಯಕ್ತಿತ್ವ ಸ್ವಭಾವ , ಅವರ ಸಹಜ ಸರಳತೆಯ ಬಗ್ಗೆ, ವ್ಯುತ್ಪತ್ತಿಯ ಬಗ್ಗೆ ತನಗೆ ತುಂಬಾ ಅಚ್ಚರಿಯಿದೆ. ಅವರ ಶಬ್ದ ಭಂಢಾರದಿಂದ ಹಿಡಿದು ಅವರ ಭಾವನೆಗಳ ವ್ಯಕ್ತತೆ, ಸಿದ್ಧತೆ , ಅನುಭವದ ಸಮಂಜತೆ, ಮೊದಲ ಪದ್ಯ ಹಕ್ಕಿ ಮತ್ತು ನಳ ತಮ್ಮದೇ ಅಂದಾಜಿನಲ್ಲಿ ಓದಿ ಹೇಳಿದರು ಅದರ ಕೊನೆಯ ಎಂಟು ಪಂಕ್ತಿ ಗಳ ವ್ಯಕ್ತತೆ ಬಗೆಗೆ ತನ್ನದೇ ಒಂದು ಸಂಶಯ ವ್ಯಕ್ತ ಪಡಿಸಿದರೂ ಇವರು ಕುಮಾರವ್ಯಾಸನ ಸಂತತಿಯವರೂ ಆನ್ನಿಸುತ್ತಿದೆ ಎಂದರು.”ಮಕ್ಕಳಿರಲವ್ವ ಮಕ್ಕಳ ಹಾಗೆ ” ನ್ನೂ ಓದಿ ಹೇಳಿದರು. .ಕೊನೆಯ ಕವಿತೆ ಹರಿಣಾವತರಣವನ್ನೂ ಉದ್ಧರಿಸಿದರು, ಸಾಂಪ್ರದಾಯಕತೆಯಲ್ಲೂ ಈಗಿನ ಸಾಂಧರ್ಬಿಕ ಕಿಂಚಿತ್ ಬದಲಾವಣೆಯ ಪ್ರಶ್ನೆಯನ್ನು ಹುಟ್ಟುಹಾಕಿದೆಯೆನ್ನಿಸುತ್ತವೆ ಅವರ ಕವಿತೆಗಳು .”

ಎಚ್ಚೆಸ್ವೀಯವರು ಮಾತನಾಡುತ್ತಾ ” ಆಧುನಿಕ ಜಗತ್ತಿನಲ್ಲಿ ಕವಿತೆಯ ಆಶ್ರಯ ಮನೆಯಲ್ಲಿಯೇ ಇದ್ದು ಮತ್ತು ಅದು ಮುಟ್ಟ ಬೇಕಾದದ್ದೂ ಮನೆಯಲ್ಲೇ , ಅದು ಸಂತೆಯ ಅಥವಾ ಬೀದಿ ಭಾಷೆ ಅಥವಾ ದೇವಾಲಯದ ಭಾಷೆ ಯಾಗಿರದೇ ಸಹಜವಾದ ಮಾತು ಆಗಿರಬೇಕು. ಆಪ್ತವಾದ ಮಾತು ಸಹಜವಾದ ಮಾತು ಮನೆಯಲ್ಲಿಯೇ ಹುಟ್ಟುತ್ತದೆ. ಸಂಸ್ಕಾರ ಮನೆಯಲ್ಲಿಯೇ ಸಿಗುವುದು . ಕನ್ನಡದ ಅತ್ಯಂತ ಒಳ್ಳೊಳ್ಳೆಯ ಕಾವ್ಯವೆಲ್ಲವೂ ಮನೆಯಲ್ಲಿಯೇ ಹುಟ್ಟಿದವು , “ಮನೆಯಿಂದ ಮನೆಗೆ” ಅದಕ್ಕೆಂದೇ ನನ್ನ ಕವಿತೆ ಎಲ್ಲವನ್ನೂ ಮನೆಯಲ್ಲಿಯೇ ಬಿಡುಗಡೆ ಮಾಡುತ್ತಿದ್ದೇನೆ ಎಂದರು. , ವಾಸ್ತವವನ್ನು ಸಹಜವಾಗಿಯೇ ಹುಟ್ಟಿಸಬೇಕು, ಕವಿಗಳ ಮಾತು ಸಹಜವಾಗಿದ್ದು ರೂಪಕದ ನೆಲೆಗೇರಬೇಕು. ಎಂದರು. ಮಂಜುನಾಥರ ಬಗೆಗೆ ಮಾತನಾಡುತ್ತಾ ಅವರು ಸದಾ ಕವಿತೆಯ ಧ್ಯಾನದಲ್ಲಿದ್ದು ಕವಿತೆಯ ಆಳಕ್ಕೆ ನಮ್ಮನ್ನು ಕೊಂಡೊಯ್ಯುವ ಶಕ್ತಿ ಇರುವವರು ಎಂದರು.ನಿಜವಾದ ಕವಿತೆಗೆ ಎಲ್ಲರ ಮನಸ್ಸನ್ನು ಮುದಗೊಳಿಸುವ ಆಪ್ತಗೊಳಿಸುವ ಶಕ್ತಿಯಿದೆ ಎಂದರು, ಅದರಲ್ಲಿ ತನ್ಮಯತೆ ಬರಬೇಕಾದರೆ ಅಂತರಂಗದ ಮಾತೇ ಆಗಿರಬೇಕು,ಅದರ ಅಗತ್ಯವೂ ಇರಬೇಕು ಅದೇ ನಮ್ಮ ಮಾರ್ಗದರ್ಶಕ ಸೂತ್ರ. ಮನೆವಾಳ್ತನ ಕವಿತೆಗೆ ದಕ್ಕಲಿ ಎಂದರು.

ಕಂಬಾರರು ಮಾತನಾಡುತ್ತಾ ಮನೆಯ ಪರಿಸರದಲ್ಲಿ ವ್ಯಂಗ್ಯ ವಲ್ಲದ ಇನ್ಯಾವ ಆಡಂಬರವಿಲ್ಲದ ಈ ಬಿಡುಗಡೆಯ ಸಮಾರಂಭವೇ ನನಗೆ ತುಂಬಾ ಸಂತಸ ತಂದಿದೆ ಎಂದರು. ರಸ ವಿದ್ಯೆ ಕಲಿತ ನಾಗಾರ್ಜುನನ ಕಥೆಯನ್ನು ತಿಳಿ ಹೇಳುತ್ತಾ, ಅದನ್ನು ಸ್ವಾರ್ಥಕ್ಕಾಗಿ ಉಪಯೋಗಿಸಿ ತನ್ನ ಜೀವನವನ್ನು ಹಾಳು ಮಾಡಿಕೊಂಡ ರೀತಿ ವಿವರಿಸುತ್ತಾ, ಕವಿತೆ ಹೇಗಿರಬೇಕು ಎಂದರೆ ರಸಾನುಭವವಿರಬೇಕು ಅದಿಲ್ಲದ್ದು ಕವಿತೆಯಲ್ಲ ಎಂದರು. ಅಂದರೆ ತಾವು್ ಬರೆದ ಕವಿತೆಗಳು ನೆನಪಿನ ಸಹಾಯದಿಂದ ರಸವತ್ತಾಗಿ ಕಥೆ ಕಟ್ಟುವ ವಿಧ್ಯೆ ಎಚ್ಚೆಸ್ವೀಯವರಿಗೆ ತುಂಬಾ ಚೆನ್ನಾಗಿ ಬಂದಿದೆ ಎನ್ನುತ್ತಾ ಅವರ ಕವಿತೆಯನ್ನು ಓದಿ ಹೇಳಿದರು.

ನಂತರ ಕುಮಾರಿ ಮಾಲಾಶ್ರೀ ಮತ್ತು ಕುಮಾರ್ ಅವರಿಂದ ಅತ್ಯುತ್ತಮ ಕವಿಗಳ ಭಾವಪೂರ್ಣ ಭಾವಗೀತೆಗಳ ಭಾವ ನಮನವಿದ್ದು ಎಲ್ಲರ ಮನಸೂರೆಗೊಂಡವು.

ಎಚೆಸ್ವೀಯವರು ಹೀಗೆನ್ನುತ್ತಾರೆ

ಹಿಮಾಲಯದಲ್ಲಿ ಹಾದಿಗಳಿಲ್ಲ… ಸಾಹಿತ್ಯವೆನ್ನುವುದು ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಗಾಡಿ ಬಿಡುವುದಲ್ಲ.ತಮ್ಮ ತಮ್ಮ ದಾರಿಯನ್ನು ತಾವೇ ಕಡಿದು ಕೊಳ್ಳುವುದು; ತಮ್ಮ ತಮ್ಮ ಅನುಭೂತಿಯನ್ನು ತಾವೇ ಕಂಡುಕೊಳ್ಳುವುದು. ನಮ್ಮ ಹಿಂದೆ ನಿಂತ ಧಾರ್ಮಿಕ ಪಠ್ಯಗಳೋ, ವೈಚಾರಿಕ ಪಠ್ಯಗಳೋ, ಸಾಮಾಜಿಕ ಪಠ್ಯಗಳೋ ನಮ್ಮ ನೋಡುವ ಕ್ರಮವನು ನಿರ್ದೇಶಿಸುವುದಾದರೆ ನಾವು ನೋಡಿದ್ದು ಸ್ವಾನುಭೂತಿಯ ಫಲ ಹೇಗಾಗುತ್ತದೆ? ಏನನ್ನೂ ನಾವು ಒಳಗೊಳ್ಳಬಹುದು ನಿಜ, ಹಾಗೆ ಒಳಗೊಂಡದ್ದು ದೇಹದ ಅಂತರಿಕ ಕ್ರೀಯಾಶೀಲತೆಯಲ್ಲಿ ಶುಕ್ಲ ಬಿಂದುವಾಗಿ ಪರಿವರ್ತಿತವಾಗದೇ ನಮ್ಮ ಸೃಷ್ಠಿ ನಮ್ಮದಾಗಲಿಕ್ಕಿಲ್ಲ. ಇವು ಈಗ ಮತ್ತೆ ನಾವು ಸೂಕ್ಷ್ಮ ಮತ್ತು ಆಳದ ನೆಲೆಯಲ್ಲಿ ಯೋಚಿಸಬೇಕಾದ ಸಂಗತಿಗಳು. ಸಾಹಿತ್ಯಕ್ಕೆ ಪೂರ್ವ ಸಿದ್ಧವಾದ ರಾಜಮಾರ್ಗವೆಂಬುದಿಲ್ಲ.ಪರಂಪರೆ ನಮಗೆ ಕಲಿಸುವುದು ನಡೆಯುವ ಕ್ರಮವನ್ನು ಮಾತ್ರ. ನಮ್ಮ ದಾರಿ ನಾವು ಹಿಡಿದು ನಮ್ಮ ನಮ್ಮ ಗುರಿಯತ್ತ ನಾವೇ ಪಯಣಿಸ ಬೇಕಾಗುತ್ತದೆ……

 

‍ಲೇಖಕರು G

27 June, 2011

1 Comment

  1. h. r. laxmivenkatesh

    ಈ ಮಹತ್ವದ ಸಾಹಿತಿಗಳ ಸಂಗದಲ್ಲಿ ನಾವು ಇದ್ದಿದ್ದರೆ ಚೆನ್ನಾಗಿತ್ತು; ಎಂದು ಒಮ್ಮಿ ಅನ್ನಿಸಿದರೆ, ಸರಿ, ಇದ್ದಿದ್ದರೆ, ಅವರ ಮಧ್ಯೆ ನಾವೆಲ್ಲಿ ಅವರೆಲ್ಲಿ. ಎಲ್ಲಾ ಘಟಾನುಘಟಿಗಳು. ಜಿ.ಎಸ್.ಎಸ್. ಕಂಬಾರರು, ಎಲ್ಲರಿಗಿಂತ ಮಿಗಿಲಾಗಿ ‘ಬೆಣ್ಣೆ ಕದ್ದಿಲ್ಲಮ್ಮ ಕವಿ’ ಎಚ್ಚೆಸ್ವಿಯವರು !

    ಮಂಗಳವಾಗಲಿ.

    -ಹೊರಂಲವೆಂ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading