ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಎಚ್ಚರಗೊಳ್ಳುವುದು' ಸಂಕ್ರಾಂತಿಯ ಮುಖ್ಯ ಲಕ್ಷಣ

ಎಳ್ಳು ಬೆಲ್ಲ ತಿಂದು ಹೇಳಿ ‘ಯುರೇಕಾ ಯುರೇಕಾ ‘
=ಜರ್ಮನಿಯಿಂದ ವಿವೇಕ ರೈ
ಪರಿವರ್ತನೆಯ ಗಡಿಯಾರದ ಮುಳ್ಳೊಂದು ಮೇಲೆ ಕೆಳಗೆ, ಬೆಳಕಿನಲ್ಲಿ ಕತ್ತಲೆಯಲ್ಲಿ,ನ್ಯಾಯ ಅನ್ಯಾಯಗಳ ನಡುವೆ, ಒಳಿತು ಕೆಡುಕುಗಳ ಸುತ್ತ ತೊನೆದಾಡುತ್ತಾ, ಕೊನೆಗೂ ಒಂದುಕಡೆ ತನ್ನ ಸ್ಥಾನವನ್ನು ನಿರ್ದೇಶಿಸುತ್ತದೆ. ‘ಸಂಕ್ರಾಂತಿ’ ಅಂಥ ಬದಲಾವಣೆಯ ಒಂದು ಕಾಲಘಟ್ಟ. ಅದು ಒಂದು ದಿನ ಆಗಬಹುದು, ಒಂದು ಕ್ಷಣ ಆಗಬಹುದು. ಅದಕ್ಕೆ ಒಂದು ಕಾಲದ ಮತ್ತು ಸ್ಥಳದ ನೆಲೆ ಬೇಕಾಗುತ್ತದೆ.ಆರ್ಕಿಮಿಡೀಸ್ ಕಂಡುಕೊಂಡ ಶೋಧ ಈ ಬಗೆಯದ್ದು.’ಯುರೇಕಾ ಯುರೇಕಾ  ,ನಾನು ಕಂಡುಕೊಂಡೆ’ಎನ್ನುವ ಉದ್ಗಾರ ಆಕಸ್ಮಿಕ ಅರಿವಿನ ಒಂದು ಮಾದರಿ. ಬದುಕಿನ ಯಾವುದೇ ಕ್ಷೇತ್ರದಲ್ಲಾದರೂ ಇಂತಹ ಹೊಸ ಕ್ಷಣದ ಒಡನಾಟವು ಸಂಕ್ರಾಂತಿಯ ಮೂಲಕ ಪರಿವರ್ತನೆಗೆ ಕಾರಣವಾಗಿ ಹೊಸ ಜಗತ್ತನ್ನು ನಿರ್ಮಾಣ ಮಾಡಬಹುದು. ‘ಎಚ್ಚರಗೊಳ್ಳುವುದು ‘ಎನ್ನುವುದು ಸಂಕ್ರಾಂತಿಯ ಮುಖ್ಯ  ಲಕ್ಷಣ . ನಿದ್ರೆಯಿಂದ ಎಚ್ಚರಗೊಳ್ಳುವ ಹಾಗೆಯೇ ಸ್ಥಗಿತಗೊಂಡ, ಚಲನಶೀಲತೆಯನ್ನು ಕಳೆದುಕೊಂಡ ಸ್ಥಿತಿಯಿಂದ ಹೊಸತನ್ನು ಕಾಣುವ, ಎಚ್ಚರಗೊಳ್ಳುವ ಅದ್ಭುತ ಅನುಭವ, ಹೊಸ ಜಗತ್ತನ್ನು ಕಾಣುವ ಮಾರ್ಗ.
ಆರ್ಕಿಮಿಡೀಸನಿಗೆ ನೀರಿನ ತೊಟ್ಟಿಯಲ್ಲಿ ಉಂಟಾದ ಜ್ಞಾನೋದಯ, ಅದು ಕೇವಲ ಒಂದು ಕ್ಷಣದ ಎಚ್ಚರದ ಸ್ಫೋಟ ಅಲ್ಲ; ಅದರ ಹಿಂದೆ ಜಡತ್ವದ ಪ್ರತಿರೋಧದ ಅನೇಕ ಚಟುವಟಿಕೆಗಳ ಮೊತ್ತ ಇತ್ತು. ಹಾಗಾಗಿ’ ಎಚ್ಚರಗೊಳ್ಳುವುದು ಎನ್ನುವುದು ಸಂಕ್ರಾಂತಿಯ ಮುಖ್ಯ ಲಕ್ಷಣ. ಇದೊಂದು ಕಾಮನಬಿಲ್ಲು ಇದ್ದ ಹಾಗೆ. ಕಾಮನಬಿಲ್ಲು ಕಾಣಿಸಿಕೊಂಡಾಗ ಹೊಸತೇನೋ ಸಾಧ್ಯ ಆಗುತ್ತದೆ ಎನ್ನುವ ಆಶಾ ಭಾವನೆ ಹುಟ್ಟುತ್ತದೆ. ಹೊಸ ಕಾಲ ಹೊಸ ಬದುಕು ಸಾದ್ಯ ಎನ್ನುವ ವಿಶ್ವಾಸವೇ ನಮಗೆ ಶಕ್ತಿ ಮತ್ತು ಧೈರ್ಯವನ್ನು ತಂದುಕೊಡುತ್ತದೆ.
ಇಟಾಲಿಯನ್ ಸಮಾಜಶಾಸ್ತ್ರಜ್ಞ  ಫ್ರಾನ್ಸಿಸ್ಕೋ ಆಲ್ಬೇರೋನಿ ಎನ್ನುವವನು ಪ್ರೀತಿಸುವುದು ಮತ್ತು ಸಾಮಾಜಿಕ ಆಂದೋಲನ -ಇವೆರಡೂ ಒಂದೇ ವರ್ಗಕ್ಕೆ ಸೇರಿದ ಪರಿವರ್ತನೆಗಳು ಎನ್ನುತ್ತಾನೆ. ಭಿನ್ನ ಮನಸ್ಸುಗಳು, ಭಿನ್ನ ವ್ಯಕ್ತಿತ್ವಗಳು ಒಂದಾಗುವ ಸನ್ನಿವೇಶವು ಸಾಮೊಹಿಕತೆಯ ಮೂಲಕ ಸಂಕ್ರಾಂತಿಯನ್ನು ತರುತ್ತದೆ. ಆಗ ಹೊಸತು ನಿರ್ಮಾಣವಾಗುತ್ತದೆ. ಇದು ಸಾಧ್ಯ ಆಗಬೇಕಾದರೆ, ಕೇವಲ ಆಚರಣೆಯಿಂದ ಸಾಧ್ಯವಾಗುವುದಿಲ್ಲ. ಹೊಸತನ್ನು ಕಲಿಯುವ ಹೊಸಬರನ್ನು ಬರಮಾಡಿಕೊಳ್ಳುವ ಮತ್ತು ಆಮೂಲಕ ಇರುವ ಸ್ಥಿತಿಯಿಂದ ಆಗುವ ನೆಲೆಗೆ ಸಾಗುವ ಪ್ರಯಾಣ ಆರಂಭಿಸಬೇಕು.

ಯುರೋಪ್ ಜರ್ಮನಿಗೆ ಸಾಕಷ್ಟು ಬಾರಿ ಬಂದಿದ್ದರೂ, ಜನವರಿಯಲ್ಲಿ ಹಿಮಪಾತದ ಕಾಲದಲ್ಲಿ, ಇಲ್ಲಿ ಇದು ನನ್ನ ಮೊದಲ ಅನುಭವ. ಕಳೆದ ತಿಂಗಳು ದಶಂಬರ ಮೊದಲ ವಾರದಲ್ಲಿ ವೂರ್ಜಬರ್ಗಿನಿಂದ ಮಂಗಳೂರಿಗೆ ಹೋದವನು, ಮೊನ್ನೆ ಸೋಮವಾರ ಮತ್ತೆ ಇಲ್ಲಿಗೆ ಬಂದು ಎರಡು ದಿನದಲ್ಲಿ ಹೊಸ ಜಗತ್ತೊಂದನ್ನು ಕಲಿಯುತ್ತಿದ್ದೇನೆ. ಹಿಮದ ಮೇಲೆ ನಡೆಯುವುದರಿಂದ ತೊಡಗಿ, ಬೆಳಗ್ಗೆ ಎಂದಿನಂತೆ ಎಂಟು ಗಂಟೆಗೆ ವಿಶ್ವವಿದ್ಯಾಲಯ ಕೆಲಸ ಆರಂಭಿಸುವ ಸಂಭ್ರಮದಿಂದ ಮುಂದುವರಿದು, ಎಲ್ಲ ಪ್ರತಿರೋಧಗಳ ನಡುವೆಯೂ ಹೊಸತನ್ನು ಮಾಡಿಯೇ ತೀರುತ್ತೇನೆಂಬ ಆತ್ಮವಿಶ್ವಾಸದ ಬದುಕಿನ ಕ್ರಮ -ಇದು ಈ ಬಾರಿಯ ನನ್ನ ಸಂಕ್ರಾಂತಿಯ ಪಾಠ. ಬೆಳಗಾಗ ನಾನೆದ್ದು ಯಾರ್ಯಾರ ನೆನೆಯಲಿ ,ಎಳ್ಳು ಜೀರಿಗೆ ಬೆಳೆಯೋಳ’ ಎನ್ನಬೇಕೆನ್ನುವಷ್ಟರಲ್ಲಿ ಎಲ್ಲೆಲ್ಲು ಚೆಲ್ಲಿದೆ ಬಿಳಿಯ ಎಳ್ಳು ಬಿಳಿಯ ಬೆಲ್ಲ !ಹೌದು ,ಹಾಗೆಯೇ ಕಾಣಿಸುತ್ತಿದೆ ಮನೆಗಳ ಮಾಡುಗಳ ಮೇಲೆ, ಮಾರ್ಗಗಳ ಮೇಲೆಲ್ಲಾ , ಮರಗಿಡಗಳ ಬೋಳು ಮೈಗೆ ಸ್ನೋ ಹಚ್ಚಿದ್ದಾರೆ. ಸಂಕ್ರಾಂತಿಯ ದಿನ ಇಲ್ಲಿ ಎಲ್ಲೆಲ್ಲಿ ಚೆಲ್ಲಿದರೋ ಮಲ್ಲಿಗೆಯಾ…..

‍ಲೇಖಕರು avadhi

14 January, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

3 Comments

  1. Raghavendra Mahabaleshwara

    ಹೊಸವರ್ಷದ ದಿನ ಒಳ್ಳೆಯ ಸ್ಪೂರ್ತಿಯುತವಾದ ಲೇಖನವನ್ನು ಓದಿದಂತಾಯಿತು.. ಅವಧಿ ಬಳಗಕ್ಕೆ ಸಂಕ್ರಾಂತಿಯ ಶುಭಾಶಯಗಳು…

  2. pailoor

    Olleya maathu

  3. chandamaamaa

    naanu odalu tadavaadaroo addiyilla.olleya lekhana manakke hosa chaitanya tumbide.avadhi santosha aagali samruddhi………..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading