ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಊರು ಮನೆ ಉಪ್ಪು ಕಡಲು’ವಿನಲ್ಲಿ..

ವಸಂತ ಬನ್ನಾಡಿ ಅವರ ಎರಡು ಕೃತಿಗಳು ಕುಂದಾಪುರದ ಅವರ ‘ಶಬ್ದ ಗುಣ’ ಸಭಾಂಗಣದಲ್ಲಿ ಇತ್ತೀಚೆಗೆ ಬಿಡುಗಡೆಯಾಯಿತು.

‘ಊರು ಮನೆ ಉಪ್ಪು ಕಡಲು’ ಕೃತಿಯ ಬಗ್ಗೆ ಬನ್ನಾಡಿ ಅವರು ಬಿಚ್ಚಿಟ್ಟ ಮಾತು ಇಲ್ಲಿದೆ-

ವಸಂತ ಬನ್ನಾಡಿ

ಪ್ರಿಯರಾದ ಓ.ಎಲ್ . ನಾಗಭೂಷಣಸ್ವಾಮಿ ಅವರು ನನ್ನ ಅನೇಕ ಕವಿತೆಗಳಿಗೆ ಆಯಾ ಸಂದರ್ಭದಲ್ಲಿಯೇ ಪ್ರತಿಕ್ರಿಯಿಸುತ್ತಲೇ ಬಂದಿದ್ದಾರೆ. “ಎಥಿಕ್ಸ್, ಕಾವ್ಯ ಮತ್ತು ರಾಜಕಾರಣ ಇವು ಮೂರೂ ಹದವಾಗಿ ಬೆರೆತ ಸ್ವಸ್ಥ ಬರವಣಿಗೆ ನಿಮ್ಮದು” ಎಂಬ ಅವರ ಮಾತು ತುಂಬಾ ಬೆಲೆಯುಳ್ಳದ್ದು. ಈ ಕೆಳಗಿನ ಅವರ ಬರಹ ಹಿಜಾಬ್ ಕುರಿತ ನನ್ನ ಕಿರು ಟಿಪ್ಪಣಿಯ ಬಗ್ಗೆ ಬರೆದಿರುವುದು –

“ಹೃದಯವಂತಿಕೆ, ತಿಳಿವಳಿಕೆ, ವಿಚಾರವಂತಿಕೆ ಎಲ್ಲವೂ ಇರುವ ಬೆಳಕಿನ ಮಾತು ಆಡಿದ್ದೀರಿ. ಫ್ಯಾಸಿಸಮ್‍ ಅನ್ನುವುದು ಕೊಲ್ಲುವ ಕೈ, ಸುಡುವ ನಾಲಗೆ, ತುಳಿವ ಕಾಲು ಮಾತ್ರವಿರುವ ಆಲಿಸುವ ಕಿವಿಗಳಿರದ ಜೀವಿಗಳು ಅಧಿಕಾರ ಹಿಡಿವ ಆಳುವಾಸೆಯ ರಾಜಕಾರಣ. ಪ್ರೀತಿ ಮರುಕ ಇವೆಲ್ಲ ದೌರ್ಬಲ್ಯಗಳೆಂಬ ದೃಢ ನಂಬುಗೆಯ ಮನೋಭಾವ. ನಿಮ್ಮಂಥವರು ನಮ್ಮಂಥವರು ಏನು ಹೇಳಿ ಏನು ಪ್ರಯೋಜನ ಎಂಬ ಹತಾಶೆಯಲ್ಲೂ ನೀವು ಮಾಡಬೇಕಾದ ನಿಮ್ಮ ಕೆಲಸ ಮಾಡುತಿದ್ದೀರಿ.

ಉದಾಸೀನದಲ್ಲಿ, ಭಯದಲ್ಲಿ, ಎಂಥದೋ ಮನ್ನಣೆಯ ಲಾಭದ ಆಸೆಯಲ್ಲಿ ಮುಳುಗಿ ಹೋಗಿರುವ ಲೇಖಕರ ಬಗ್ಗೆ ನೀವು ಹೇಳುವುದು ನಿಜ. ಇದು ಇನ್ನೂ ಆಳದಲ್ಲಿ ಕನ್ನಡದ ಲೇಖಕರ ಸಂವೇದನೆಯ ಕೊರತೆಯ ಲಕ್ಷಣವೇ ಅಲ್ಲವೇ? ‘ಅನ್ಯ’ವೆಂದು ಪರಿಗಣಿಸಲಾಗುವ ಸಮುದಾಯಕ್ಕೆ ಸೇರಿದ ಪಾತ್ರದ ಕಣ್ಣಿನಿಂದ ಬದುಕನ್ನು ಕಾಣಲು ಯತ್ನಿಸಿರುವ ಉದಾಹರಣೆ ಕನ್ನಡದಲ್ಲಿ ಹುಡುಕಿದರೂ ಸಿಗದು ಅನಿಸುತ್ತದೆ. ಸಮಾನತೆ,ಪ್ರೀತಿ ಇವೆಲ್ಲ ಇಡೀ ಲೋಕದಲ್ಲಿ ಎಂದೂ ನಿಜವಾಗದ ಆದರ್ಶಗಳೇ ಸರಿ. ಆದರೆ ಅದರ ಬೆನ್ನುಹತ್ತುವುದು ಮಾತ್ರ ಘನತೆ ಇರುವ ಮನುಷ್ಯರು ಮಾಡಲೇಬೇಕಾದ ಕೆಲಸ.ನಿಮ್ಮ ಬರವಣಿಗೆ ಓದುತ್ತ ಹೀಗೆಲ್ಲ ಅನಿಸಿತು.”

ಓಎಲ್ಎನ್ ಅವರ ಅರ್ಥಪೂರ್ಣವಾದ ಈ ಮಾತುಗಳು ‘ಊರು ಮನೆ ಉಪ್ಪು ಕಡಲು’ ಸಂಕಲನಕ್ಕೆ ನೇರವಾಗಿ ಸಂಬಂಧಿಸದೇ ಇದ್ದರೂ ಅಲ್ಲಿನ ಕವಿತೆಗಳ ಒಟ್ಟಾರೆ ಆಶಯಗಳಿಗೆ ನೀಡಿದ ಸ್ಪಂದನೆಯೂ ಹೌದು ಎಂದೇ ನಾನು ತಿಳಿದಿದ್ದೇನೆ. ಹೀಗಾಗಿ ಅದನ್ನು ಇಲ್ಲಿ ಕಾಣಿಸಿದ್ದೇನೆ. ನನ್ನ ಊರು ಮತ್ತು ಅಲ್ಲಿನ ಜನಗಳು ಕೂಡ ನಾಗಭೂಷಣಸ್ವಾಮಿಯವರು ಹೇಳಿರುವ ಸಮಾನತೆ, ಪ್ರೀತಿ ಬತ್ತಿ ಹೋಗಿರುವ ವಿಷಮ ವಾತಾವರಣದಲ್ಲಿ ಸಿಕ್ಕಿ ಬಿದ್ದಿದ್ದಾರೆ ಎಂದೇ ನನಗೆ ಅನಿಸಿದೆ.

‍ಲೇಖಕರು admin j

17 July, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading