ಉಮಾ ಮುಕುಂದ್
ರೇಖೆ: ಸತೀಶ್ ಆಚಾರ್ಯ
ಕನಸುಗಳ ಪಟ್ಟಣ ಕಟ್ಟಿ ನಡೆನಡೆದು ಊರು ಸೇರಿ
ಅಲ್ಲಿಯೂ ಸಲ್ಲದೆ ಇಬ್ಬಂದಿಯಾದವರ ನೆನೆದು
ಹಣತೆ ಹಚ್ಚುತ್ತೇನೆ
ಬೆಳೆದ ಬೆಳೆಗೆ ಬೆಲೆಯಿಲ್ಲದೆ
ಬಿಸುಟು ನಡೆದ ಜನರ ನೆನೆದು
ಹಣತೆ ಹಚ್ಚುತ್ತೇನೆ
ಕರೆದ ಕೊಪ್ಪರಿಗೆ ಹಾಲ ಕೇಳುವರಿಲ್ಲದೆ
ನಾಲೆಗೆ ಸುರಿದು ಕೈ ಚೆಲ್ಲಿ ಕೂತವರ ನೆನೆದು
ಹಣತೆ ಹಚ್ಚುತ್ತೇನೆ
ಕೈಗವಸು, ಮಾಸ್ಕು,ಮೇಲಂಗಿ ಇಲ್ಲದೆ
ಕಾಯಕ ಕೈಲಾಸದಿ ದಣಿವ ದೇವರ ನೆನೆದು
ಹಣತೆ ಹಚ್ಚುತ್ತೇನೆ
ಮನೆ ಹತ್ತಿ ಉರಿವಾಗ ಹಿರಿಹಿರಿದು ಗಳ
ಧರ್ಮದ ಕೂಳು ಬೇಸುವರ ನಡುವೆ
ಹಣತೆ ಹಚ್ಚುತ್ತೇನೆ
ಕಣ್ಣಿಗೆರಡುಕಣ್ಣು ಕುರುಡಾದರೂ ಸೈ
ಎನ್ನುವವರು ನಾಳೆ ಬದಲಾಗಲೆಂದು
ಹಣತೆ ಹಚ್ಚುತ್ತೇನೆ
ಒಂದು ಬಿಗಿಯಪ್ಪುಗೆ, ಒಂದು ಹೂಮುತ್ತು,
ಸ್ಪರ್ಷ ಸುಖವೆಷ್ಟೆಂದು ಕಲಿಸಿದ ಕಾಲಕ್ಕೆ ನಮಿಸಿ
ಹಣತೆ ಹಚ್ಚುತ್ತೇನೆ
ಮುಟ್ಟದೆಯೂ ಮುಟ್ಟುವ, ದೂರವಿದ್ದೂ
ಸನಿಹವಾಗುವ, ವಿವೇಕದ ಜಾಗೃತಿಗೆ
ಹಣತೆ ಹಚ್ಚುತ್ತೇನೆ.
ಎಷ್ಟು ಚೆಂದವಿತ್ತು ಕಾಲ, ಕೆಲವೇ ದಿನಗಳ ಕೆಳಗೆ
ಬೆಳಗಾಗ ಮಕ್ಕಳು, ತಾಯಂದಿರ ನಗು
ತರಕಾರಿ, ಹೂವಿನವರ ತರತರದ ಕೂಗು
ಹಾಲು, ಪೇಪರ್, ಕಸದ ಗಾಡಿಯವರ ಬೆಲ್ಲು
ಅಕ್ಕಪಕ್ಕದ ಮನೆಯವರ ಮಾತು, ಗುಲ್ಲು
ಸಂಜೆಯಾದರೆ ಬೇಕಷ್ಟು ದೂರ ನಡೆದು, ಒಟ್ಟಾಗಿ
ಬೇಕೆನಿಸಿದಲ್ಲಿಗೆ ಹೋಗಿ, ಹೊಡೆದು ಪಟ್ಟಾಂಗ,
ಗಾಸಿಪ್ಪಿನೊಂದಿಗೆ ಕಾಫೀ.. ಗೀಫೀ..
ಜೊತೆಯಾಗಿಯೇ ಇರುತಿದ್ದ ಕಾಲ!!
ಥಟ್ಟಂತ ಬದಲಾಗಿದೆ ಎಲ್ಲ, ಎಲ್ಲಾ..
ಮಕ್ಕಳು, ಜನವಿಲ್ಲದೆ ಸತ್ತ ಬೀದಿಯಲ್ಲಿ
ಸುತ್ತಿ ಮಲಗಿದೆ ಕೆಲಸವಿಲ್ಲದೆ ನಾಯಿ
ದುಃಖಿಸುವರ ತಬ್ಬಿ ಸಂತೈಸುವಂತಿಲ್ಲ
ಖುಷಿಯಾಗಿ ಕೈತಟ್ಟಿ ನಗುವಂತಿಲ್ಲ
ಬಂದವರ ಕರೆದು ಉಣಲಿಕ್ಕುವಂತಿಲ್ಲ
ಬೆಂಗಾವಲಾಗಿದ್ದ ನಮ್ಮನಮ್ಮಲ್ಲೇ
ಸೀನಿದರೆ ಭಯ, ಸೋಕಿದರೆ ಭಯ
ಕಳೆದೇ ಹೋಗಿದೆ ಸ್ಪರ್ಷ ಸುಖ
ಬೆದರಿದ ಕಣ್ಣು ಮುಸುಕು ಮುಖ
ಜೊತೆಗೆ ಹಂಬಲಿಸುವ ನಾನು, ನೀನು, ಅವರು
ಕಾಯ್ದುಕೊಳ್ಳಲೇಬೇಕು ಅನಿವಾರ್ಯ ಅಂತರ.
ಇಂದೂ ಎಂದಿನಂತೆಯೇ ಚಿಲಿಪಿಲಿಸುತಿವೆ ಹಕ್ಕಿ
ಸರಭರ ಮರ ಹತ್ತಿಳಿಯುತಿದೆ ಚೀವ್ ಗುಡುವ ಇಣಚಿ
ಚಿಗಿಚಿಗಿಸುತಿದೆ ಗಿಡ ಮರ
ಸುಳಿಯುತಿದೆ ಹೂಗಂಧ
ಮುಚ್ಚಿದ್ದರೂ ಬಾಗಿಲು, ತೆರೆದೇ ಇದೆ ಎದೆ ಕದ
ಮುದ್ದಿಸಬೇಕು ಮೊದಲಿನಂತೆ
ಬಿಗಿದಪ್ಪಬೇಕು ಎಂದಿನಂತೆ
ಮತ್ತೆ ಬಂದಿದೆ ವಸಂತ
ಬರುವುದೇ ಮತ್ತೆ ಆ ಸಂತಸ?
ಸಿಗುವುದೇ ಮತ್ತೆ ಸಂಗಾತ?
ಕಟ್ಟಿ ಕಡೆಯ ಮನುಷ್ಯನ ನೋವು,ಈಗಿನ ತಲ್ಲಣವನ್ನು ಕವಿತೆ ಕಟ್ಟಿಕೊಟ್ಟಿದೆ
ತುಂಬ ಚನ್ನು. ಭರವಸೆಯ ಕಾಲ ಬಂದೇ ಬರುತಾದ.
ಒಳ್ಳೆಯ ಕವಿತೆ. ಇಷ್ಟವಾಯಿತು.
ಕವಿತೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.. ಈಗಿನ ಪರಿಸ್ಥಿತಿಯನ್ನು ಸರಿಯಾಗೆ ಚಿತ್ರಿಸಿದ್ದಾರೆ ಎಂದರೆ ತಪ್ಪಾಗಲಾರದು