ಸಂಜ್ಯೋತಿ ನಿರ್ದೇಶನದ ‘ಅನಲ’
ದಿಲಾವರ್ ರಾಮದುರ್ಗ
ಪ್ರತಿ ಜೀವಿಯ ಅಂತರಂಗದ ಒಳಗೊಂದು ಜೀವಜಲದ ಕೊಳವಿದೆ. ಸುತ್ತ ಕಷ್ಟದ ಕಲ್ಲುಬಂಡೆಗಳೂ ಇರಬಹುದು. ಮುಳುಗೇಳುತ್ತಲೇ ಇರಬಹುದಲ್ಲೂ ಭರವಸೆಯ ಸೂರ್ಯ. ಜೀವಸಂಕುಲಕ್ಕೊಂದೇ ಇದೆಯಲ್ಲ ಅದಲ್ಲ. ತನಗೆಂದೇ ತನ್ನೊಳಗಿರುವಂಥ ನಕ್ಷತ್ರವದು. ಎಲ್ಲರೊಳೊಂದಾಗಿಯೂ ತನ್ನದೇ Space ಹೊಂದಲು ಮನುಷ್ಯಜೀವ ಹಂಬಲಿಸುತ್ತದೆ. ಹಂಬಲಿಸುವುದು ಹಕ್ಕು. ಇದು ಎಲ್ಲರ ಆಪ್ತ ಕ್ಯಾನವಾಸ್.
* * *
ಮದುವೆಯಾಗಿ ಪರಸ್ಪರ ಅಗತ್ಯಗಳನ್ನು ಪೂರೈಸಿಕೊಳ್ಳುವುದರ ನಡುವೆಯೂ ಗಂಡ–ಹೆಂಡತಿಗೆ ಅವರವರವದೇ ಆದ ಒಂದು Space ಇರುತ್ತದೆ. ಅಲ್ಲಿ ಅವರದೇ ಕನಸುಗಳ, ಆನಂದಗಳ ನೆಲೆಗಳ ಹುಡುಕಾಟವಿರುತ್ತದೆ. ಅದು ಅಂತರಂಗದ ಅನುಸಂಧಾನ. ಸಹಜವಾದ ಸಣ್ಣ ಸಣ್ಣ ಖುಷಿಯೂ.
ತಾನು ಗಂಡನಿಗೆ ಹೆಂಡತಿ. ತನ್ನದೇ ನೌಕರಿಯ ಜಂಜಟಗಳ ನಡುವೆ ಕುಟುಂಬದ ಎಲ್ಲ ಜವಾಬ್ದಾರಿಗಳನ್ನೂ ನಿರ್ವಹಿಸಬೇಕು.
ಇದಷ್ಟೇ ಹೆಣ್ಣಿನ ಪರಪಂಚವೇ? ಅರೇ! ತನ್ನೊಳಗೂ ಸುಪ್ತ ಭಾವನೆಗಳಿವೆ. ತಾನು ಮಾತ್ರ ಅನುಭವಿಸಬಹುದಾದ ಸಣ್ಣ ಸಣ್ಣ ಖುಷಿಗಳಿವೆ. ಸಂಭ್ರಮಗಳಿವೆ. ತನ್ನ ಜೊತೆ ತಾನು ಮಾತ್ರ ಇರಬಹುದಾದ ತುಂಬ ಆಪ್ತ Space ಇದೆ…
ಇಷ್ಟನ್ನೇ ಕಲ್ಪಿಸಿಕೊಂಡ ಹೆಣ್ಣೊಬ್ಬಳು ತಾನು ತಾನಾಗಿರಲು, ತನ್ನ ನಿತ್ಯದ ಕುಟುಂಬ ಜವಾಬ್ದಾರಿಗಳನ್ನು ಸ್ವಲ್ಪ ಸಮಯಕ್ಕಾದರೂ ಗಂಡ ನಿರ್ವಹಿಸಲಿ ಎಂದು ಬಯಸುತ್ತಾಳೆ. ಅಷ್ಟಕ್ಕೇ ಗಂಡ ತಡಬಡಾಯಿಸುವುದೇ? ಅವಳಿಗೆ ಮಾನಸಿಕ ಕಾಯಿಲೆ ಆವರಿಸಿತೆಂದು ಹುಚ್ಚಾಸ್ಪತ್ರೆ ಸಂಪರ್ಕಿಸಿಬಿಡುವುದೇ?
ಗಂಡನ ಈ ಅಸೂಕ್ಷ್ಮತೆಯಿಂದ ಹೆಣ್ಣು ಬಿಕ್ಕಳಿಸುತ್ತಾಳೆ ಒಳಗೂ–ಹೊರಗೂ.
ಅವಳ ಅಂತರಂಗದಲ್ಲಿ ರೂಪು ಪಡೆದ ಅದ್ಭುತ ಕ್ಯಾನವಾಸ್ ಬಣ್ಣಗಳು ಚಿಲ್ಲಾಪಿಲ್ಲಿಯಾಗುತ್ತವೆ. ರೂಪುಗೊಂಡ ಚಿತ್ತಾರ ಚೂರಾಗುತ್ತದೆ. ಒಳಗಣ್ಣ ಹನಿಗಳು ತೊಟ್ಟಿಕ್ಕುತ್ತವೆ. ಕಲ್ಪಿಸಿಕೊಂಡ ಬೇಡಿಗಳು ನಿಜವಾಗಿ ಅವಳು ಮತ್ತದೇ ಸದ್ಗೃಹಿಣಿ ಎನ್ನುವ ಮಜಬೂತು ಕಾರಾಗೃಹದ ಬಂಧಿ! ನೀರೊಳಗೂ ಚಣ ಧಗಿಸಿದ ಕಿಚ್ಚು ಮತ್ತೆ ತಣ್ಣಗೆ..
ಭಾನುವಾರ ಕೆ.ವಿ. ಸುಬ್ಬಣ್ಣ ಆಪ್ತರಂಗದ ಪರದೆಯ ಮೇಲೆ ಮೂಡಿದ ‘ಅನಲ’ ಕಿರುಚಿತ್ರದಲ್ಲಿ ಹೆಣ್ಣಿನ ಅಂತರಂಗದ ಕ್ಯಾನವಾಸ್ ಅನಾವರಣಗೊಂಡು ಸ್ತ್ರೀ ಸಂವೇದನಗಳ ಅರಳಿಸಿತು. ಸಂಜ್ಯೋತಿ ನಿರ್ದೇಶನದಲ್ಲಿ ಮೂಡಿದ ಈ ಚಿತ್ರದ ನಿರೂಪಣೆ ಸೊಗಸಾಗಿದೆ.ಅದರಲ್ಲಿ ನಾವಿನ್ಯತೆ ಇದೆ. ಮೂರ್ತವಾಗಿಯೂ ಅಮೂರ್ತವನ್ನು ಮತ್ತು ಅಮೂರ್ತವಾಗಿಯೂ ಮೂರ್ತವನ್ನು ಸ್ಪರ್ಶಿಸುವ ಯತ್ನವಿದೆ. ಇದೊಂದು ಉತ್ತಮ ಪ್ರಯತ್ನ ಸಂಜ್ಯೋತಿ.
Thank you Dilawar ji…