ಅಶೋಕ ಹೊಸಮನಿ
ಈ ಕಡು ಬಿಸಿಲ ಕಣ್ಣಾದರೊ ಬುದ್ಧನಾಗಬೇಕಿತ್ತು
ಕಾಲ್ಕೀಳುವ ಹೊತ್ತಿಗಾದರೊ ಹಾಜರಿರಬೇಕಿತ್ತು
ಈ ಹಿಡಿ ಮಾಂಸ ಮಜ್ಜೆಯಾದರೊ ಹೂವಾಗಬೇಕಿತ್ತು
ಹಣ್ಣೊಂದಾದರೊ ತಾಯಿಯಾಗಬೇಕಿತ್ತು
ಈ ಜಗವಾದರೊ ಹುಟ್ಟಬಾರದಿತ್ತು
ಮನುಷ್ಯನಾದರೊ ಬೇಡವಾಗಿತ್ತು
ಈ ನೇತಾಡೊ ದನಿಯಾದರೊ ಕವಿತೆಯಾಗಬೇಕಿತ್ತು
ಕಂಪನದ ಪರ್ವತವಾದರೊ ರೂಢಿಯೊಳಿರಬೇಕಿತ್ತು
ಈ ಕಣ್ಣೀರಲಿ ನೆಂದ ಬಟ್ಟೆಗಾದರೊ ರೂಪವಿರಬೇಕಿತ್ತು
ಲೋಕಕ್ಕಾದರೊ ತಥಾಗತನಂಥ ಕೀಲಿಕೈ ಬೇಕಿತ್ತು
ಈ ತನುವನ್ನಾದರೊ ಚಾಚುತ್ತಲೇ ಬೆಂಕಿಗೀಡಾಗಬೇಕಿತ್ತು
ಕಡು ಕೋಟೆಯಾದರೊ ಅಟ್ಟಹಾಸಗೈಯಬೇಕಿತ್ತು
ಈ ವಜ್ಜೆಕಲ್ಲಲ್ಲಾದರೊ ಕಾರುಣ್ಯವಿರಬೇಕಿತ್ತು
ಮುರಿದಿಹ ಬೆರಳಾದರೊ ದೂಡಬೇಕಿತ್ತು
ಈ ಕಾಲಾಳುಗಳೊ ಹಕ್ಕಿಗಳಾಗಬೇಕಿತ್ತು
ತುಂಡರಿಸಿಹ ಮರಗಳಿಗಾದರೊ ಜೀವವಿರಬೇಕಿತ್ತು
ಈ ಬಿಸಿಲ ಬುದ್ಧನಾದರೊ ಧಾವಿಸಬೇಕಿತ್ತು
ಚಿಟಿಕೆ ಅಸ್ಥಿಯನ್ನಾದರೊ ಚುಂಬಿಸಬೇಕಿತ್ತು
ಹೃದಯಕ್ಕಾದರೊ ಮದ್ದು ಅರಿಯಬೇಕಿತ್ತು
ಈ ಗೂಢ ಕಟ್ಟುಗಳನ್ನಾದರೊ ತೆರೆಯಲು
ಉರಿ ಬಿಸಿಲ ಬೆರಳುಗಳಾದರೊ ಬೇಕಿತ್ತು
ಈ ಕಡು ಗಾಳಿಯಾದರೊ ಕಾಮನಬಿಲ್ಲಂತಾಗಬೇಕಿತ್ತು
ಹೆಜ್ಜೆಗಳಲ್ಲಾದರೊ ಚಿಟ್ಟೆಗಳ ಕಲರವವಿರಬೇಕಿತ್ತು
ಈ ಬಿಸಿಲಾದರೊ ಗೋಗರೆದಿತ್ತೇನೊ
ಜಮ್ಮನ್ನಲಿಲ್ಲವೇನೊ
ಕಡು ಬುದ್ಧನಾದರೊ
0 ಪ್ರತಿಕ್ರಿಯೆಗಳು