ದೈವದ ಭಯ
ಶಿವಾನಂದ್ ಕರೂರ್ ಮಠ್
ಶ್ರೇಷ್ಠ ಭಾರತೀಯನಿಗೆ
ಮನದಲ್ಲೆಕೋ ತುಸು ಆತಂಕ
ಸರ್ವಧರ್ಮದ ನೆಲೆವೀಡು
ಇಂದು ಅಧರ್ಮದ ಕುಣಿಕೆಗೆ
ಸಿಲುಕಿತೇನೋ ಕಳವಳ…
ಸಹೋದರ ಭಾವನೆಗಳಿಗೆ
ಬೆಂಕಿಯಿಟ್ಟು ಯಾವುದೋ
ಬೇಯದ ಬೇಳೆ ಬೇಯಿಸುವ
ಕಾರ್ಯಕ್ಕೆ ಅಡಿಗಲ್ಲು ಇಟ್ಟರೆಂಬ ಆತಂಕ !..
ಮರ ಕಡಿದಾಗ ಗಿಡನೆಡದೆ
ಮಂದಿರ ಮಸೀದಿ ಮನೆ ಕಟ್ಟಿ
ಭೂರಮೆಯ ಬಸಿರು ನಡುಗಿಸಿ
ಉಸಿರಿಗೆ ಪರದಾಡುವ
ಗೊಂದಲ ಮುಂದುವರೆದರೇನು ಗತಿ…
ಬೆಲೆ ಏರಿಕೆ ಜೀವ ಗಗನಕೆ
ಹಾಸಿಗೆ ವಿಚಾರವಂತೂ ಹೇಸಿಗೆ
ಇದೆಲ್ಲದಕ್ಕೂ ಸೃಷ್ಟಿ ಮೂಲ ಶೋಧಿಸಿ
ನಿನ್ನದೇ ಕೊಡುಗೆ ಅಪಾರವಲ್ಲವೇ
ಅನುಭವಿಸು ಎಂದಾನೇನೋ ಎಂಬ ದೈವಭಯ…
ಕೊಡುವ ಮದ್ದಿಗೂ ಸುದ್ದಿ
ಕಾಳಸಂತೆಗೆ ಕೊಟ್ಟವ, ಪಡೆಯುವವ,
ಎಲ್ಲರೂ ನನ್ನವರೇ ಆದರೂ
ನಾವೇ ಇದೆಲ್ಲವನ್ನು
ಈ ಮೊದಲು ಒಪ್ಪಿಕೊಂಡಿದ್ದಕ್ಕೆ
ಇದನ್ನೇ ಮುಂದುವರೆಸು ಎಂಬ ಶಿಕ್ಷೆಯೇ..?
ಈ ಕೆಟ್ಟ ಇತಿಹಾಸಕ್ಕೆ ಹೊಣೆಗೇಡಿ ಯಾರು?
ಯಾರನ್ನೂ ದೂರದೆ ಒಮ್ಮೆ ಅವಲೋಕಿಸು
ನೀನೆಷ್ಟು ಎಚ್ಚರ ವಹಿಸಿದೆ,
ಯಾವ ನಿಯಮದಲ್ಲಿ ಎಡವಿದೆ?
ಇಂತಹ ಪ್ರಶ್ನೆಗಳ ಮಳೆಸುರಿದರೆ ಗತಿಯೇನು..?!
ಅವರಿದ್ದರೆ ಚಂದ ಇವರಿದ್ದರೆ ಚಂದ
ಎಂದು ಕೂಗಿದೆವು ಅಲ್ಲವೇ..?
ಎಲ್ಲರಿಗೂ ಬೇಕು ರಾಮರಾಜ್ಯ ನಿಜ,
ಅಲ್ಲೂ ರಾವಣನ ಕಾಟ ಹೊರತಾಗಿಲ್ಲವೆಂಬ
ಸತ್ಯ ಮರೆತೆವಲ್ಲ ಯಾಕೆ ಎಂಬ
ಪ್ರಶ್ನೆಯನಿತ್ತನೆಂಬ ದೈವ ಭಯ..!
ಸಹಜತೆಯತ್ತ ಜಗವು ಬರಬೇಕಾದರೆ
ಪರಿಸರದ ಪಾಠವ ಇನ್ನಾದರೂ ಪಠಿಸು
ಇಲ್ಲವಾದರೆ ಅನುಭವಿಸೆಂದು
ಕೈತೊಳೆದರೆ ಗತಿಯೇನು..?!
ಅದ್ಭುತವಾಗಿದೆ