ಪ್ರಜಾಪ್ರಭುತ್ವ ಮತ್ತು ಪ್ರತಿಪಕ್ಷಗಳು
“ಜವಾಬ್ದಾರೀ ಸರ್ಕಾರದ ವ್ಯವಸ್ಥೆಯಲ್ಲಿ ರಾಜ್ಯ ನಡಸತಕ್ಕ ಮಂತ್ರಿಪಕ್ಷ ದೃಢವಾಗಿರುವುದು ಹೇಗೆ ಅವಶ್ಯವೋ ಮಂತ್ರಿಕಾರ್ಯಗಳನ್ನು ಪರೀಕ್ಷೆಗೆ ಗುರಿಪಡಿಸತಕ್ಕ (ಅಪೊಸಿಷನ್) ವಿರೋಧಪಕ್ಷವೂ ಬಲಿಷ್ಠವಾಗಿರುವುದು ಹಾಗೆ ಅವಶ್ಯಕ. ಸಕರ್ಾರದ ಯೋಗ್ಯತೆಯು ಉಭಯ ಪಕ್ಷಗಳ ಬಲಾಬಲಗಳನ್ನೂ ಅನುಸರಿಸಿಕೊಂಡಿರುತ್ತದೆ. ಶಾಸನ ಸಭೆಯಲ್ಲಿ ವಿರೋಧಿಪಕ್ಷ ದುರ್ಬಲವಾಗಿದ್ದಾಗ ಮಂತ್ರಿಪಕ್ಷವು ಬಲಾಧಿಕ್ಯದಿಂದ ನಿರ್ಭಯವಾಗಿ ಸ್ವೇಚ್ಛಾವರ್ತಿಯಾಗುತ್ತದೆ. ಮಂತ್ರಿಪಕ್ಷವನ್ನು ಹದ್ದಿನಲ್ಲಿಟ್ಟಿರುವುದಕ್ಕಾಗಿಯಾದರೂ ಒಂದು ಸಮರ್ಥವಾದ ವಿರೋಧಿ ಪಕ್ಷ ಅನಿವಾರ್ಯವಾಗಿ ಬೇಕಾಗುತ್ತದೆ. ಹೀಗೆ ದೇಶಕ್ಕೆ ಅತ್ಯಾವಶ್ಯಕವಾದ ಈ ವಿರೋಧಿ ಪಕ್ಷವನ್ನು ಒದಗಿಸಬೇಕಾದವರು ಯಾರು? ಅದೂ ಚುನಾವಣೆದಾರರ ಕರ್ತವ್ಯವೇ.” ಇದು ಡಿ.ವಿ.ಜಿ.ಯವರು 1952ರಷ್ಟು ಹಿಂದೆ ತಮ್ಮ ‘ರಾಜ್ಯಶಾಸ್ತ್ರ’ ಎಂಬ ಗ್ರಂಥದಲ್ಲಿ ಮಂಡಿಸಿರುವ ಅಭಿಪ್ರಾಯ.
ಜಗತ್ತಿನಲ್ಲಿ ಬಹು ದೊಡ್ಡ ಪ್ರಜಾಪ್ರಭುತ್ವವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಮ್ಮ ದೇಶದಲ್ಲಿ ವಿರೋಧಪಕ್ಷದ ಅಥವಾ ಪ್ರತಿಪಕ್ಷದ ಪಾತ್ರವೆಂದರೆ ಹೊಸದಾಗಿ ಅಧಿಕಾರಕ್ಕೆ ಬಂದ ಸರಕಾರ ಮಂಡಿಸುವ ಅಥವಾ ಸೂಚಿಸುವ ಪ್ರತಿಯೊಂದನ್ನೂ ವಿರೋಧಿಸುವುದಕ್ಕಷ್ಟೇ ಸೀಮಿತವೆಂಬ ತಪ್ಪು ಅಭಿಪ್ರಾಯವಿದೆ. ಆದರೆ ಇದಕ್ಕೆ ಪ್ರತಿಯಾಗಿ ಹೊಸದಾಗಿ ರೂಪುಗೊಳ್ಳುತ್ತಿರುವ ಪ್ರಜಾತಂತ್ರಗಳಲ್ಲಿ ವಿರೋಧ ಪಕ್ಷಗಳು ಸರಕಾರದ ನೀತಿಯನ್ನು ರೂಪಿಸುವಲ್ಲಿ, ನಾಗರಿಕ ಶಿಕ್ಷಣವನ್ನು ನೀಡುವಲ್ಲಿ, ಭ್ರಷ್ಟಾಚಾರದ ವಿರುದ್ಧ ಹೋರಾಡುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಬೇಕು. ಆದರೆ ಈ ಸಂಗತಿ ನಮ್ಮ ಪ್ರತಿಪಕ್ಷಗಳಿಗೆ ಅರ್ಥವಾದಂತಿಲ್ಲ. ಅಧಿಕಾರಾರೂಢ ಪಕ್ಷಗಳು ಪ್ರತಿಪಕ್ಷಗಳನ್ನು ಬಗ್ಗುಬಡಿಯುವುದಕ್ಕಾಗಿಯೇ ರಾಷ್ಟ್ರೀಯ ಸಂಪನ್ಮೂಲಗಳನ್ನು ತಮಗೆ ಬೇಕಾದಂತೆ ಬಳಸುವುದುಂಟು. ಪ್ರತಿಪಕ್ಷಗಳು ಸರಕಾರ ರೂಪಿಸುವ ಕಾನೂನು ಮತ್ತು ರಾಜಕೀಯ ನಿರ್ಬಂಧಗಳಿಗೆ ಗುರಿಯಾಗಿ ಬಲಿಪಶುಗಳಾಗುವುದೂ ಉಂಟು.
ಹೀಗಿರುವಾಗ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಪಕ್ಷಗಳ ಪಾತ್ರವೇನು? ಅದರಿಂದ ಏನು ಉಪಯೋಗ? ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಉತ್ತೇಜಿಸಲು ಅವು ಏನು ಮಾಡಬಹುದು? ಈ ಪ್ರಶ್ನೆಗಳಿಗೆ ಉತ್ತರ ಹೇಳುವುದಕ್ಕಾಗಿ ಪ್ರಜಾಪ್ರಭುತ್ವ ಎಂದರೇನೆಂದು ಸ್ವಲ್ಪ ವಿವರಿಸಬೇಕು. ಗೋಪಾಲಕೃಷ್ಣ ಅಡಿಗರು ಒಂದು ಕಡೆ ಬರೆದಂತೆ, “ಪ್ರಜಾತಂತ್ರದ ಜೀವಾಳ ಯಾವುದು ಎಂದು ಯೋಚಿಸುವಾಗ ಅದು ಭಿನ್ನಮತ, ಅನ್ಯಮತ, ಅಭಿಪ್ರಾಯಭೇದಗಳನ್ನು ಸಹಿಸುವುದು ಮಾತ್ರವಲ್ಲ, ಗೌರವಿಸಲೂ ಸಮರ್ಥವಾದ ಒಂದು ವಿಶಿಷ್ಟ ಮನಃಸಂಸ್ಕಾರ ಎಂದು ಹೇಳಬೇಕಾಗುತ್ತದೆ. ಅದ್ವಿತೀಯವಾದ ಪ್ರತಿಯೊಬ್ಬ ಪ್ರಜೆಯ ವ್ಯಕ್ತಿತ್ವವನ್ನು ಮನ್ನಿಸಿ ಪೋಷಿಸುವುದರ ಮೇಲೆ, ಆ ವ್ಯಕ್ತಿತ್ವದ ಅಂತರಂಗದಲ್ಲಿ ನಮ್ಮ ಗೌರವಕ್ಕೆ ಯೋಗ್ಯವಾದ ನಿಗೂಢ ರಹಸ್ಯವೊಂದು ಅಡಗಿದೆ ಎಂಬ ಶ್ರದ್ಧೆಯ ತಳಹದಿಯ ಮೇಲೆ ಮಾತ್ರ ಪ್ರಜಾಪ್ರಭುತ್ವವನ್ನು ಸ್ಥಾಪಿಸಿ ರಕ್ಷಿಸುವುದು ಸಾಧ್ಯ…. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸಾರ್ವಭೌಮತ್ವದ ಒಂದು ಅಂಶವನ್ನು ಕಾಣುವುದೇ ಪ್ರಜಾಪ್ರಭುತ್ವ…. ವಿರೋಧ ಪಕ್ಷಗಳು, ಸ್ವತಂತ್ರ ಪತ್ರಿಕೆಗಳು, ಸಾರ್ವಜನಿಕ ಚರ್ಚಾವೇದಿಕೆಗಳು, ವಿಶ್ವವಿದ್ಯಾಲಯ, ನ್ಯಾಯಾಲಯ ಮುಂತಾದ ಹತ್ತಾರು ಶಕ್ತಿಮೂಲಗಳ ಸಮತೋಲನದಿಂದ ಮಾತ್ರ ಪ್ರಜಾರಾಜ್ಯ ನೆಲೆಗೊಳ್ಳುವುದು ಸಾಧ್ಯ.” ಪ್ರಜಾತಂತ್ರ ವ್ಯವಸ್ಥೆ ಜನತೆಗೆ ರಾಜಕೀಯ ಪಕ್ಷಗಳಂಥ ಸಂಸ್ಥೆಗಳನ್ನು ಪ್ರಾರಂಭಿಸುವ, ಅಂಥ ಪಕ್ಷಗಳಿಗೆ ಸೇರಿಕೊಳ್ಳುವ ಸ್ವಾತಂತ್ರ್ಯ ನೀಡುತ್ತದೆ.

ಅಭಿಪ್ರಾಯ ಸ್ವಾತಂತ್ರ್ಯವನ್ನು, ರಾಜ್ಯಾಧಿಕಾರದಿಂದ ಸಂಪೂರ್ಣವಾಗಿ ಮುಕ್ತವಾಗಿರುವ ಮಾಧ್ಯಮಗಳ ಮೂಲಕ ಪರ್ಯಾಯ ಮಾಹಿತಿ ಪಡೆದುಕೊಳ್ಳುವ ಹಕ್ಕನ್ನು, ಮತದಾನ ಮಾಡುವ, ಮತದಾನದಿಂದ ಅಭ್ಯರ್ಥಿಗಳನ್ನು ಚುನಾಯಿಸುವ, ಕ್ರಮವಾಗಿ ಚುನಾವಣೆಗಳನ್ನು ನಡೆಸುವ, ಖಾಸಗಿ ಆಸ್ತಿ ಹೊಂದುವ ಹಕ್ಕನ್ನು ನೀಡುತ್ತದೆ. ಜೊತೆಗೆ ಒಳ್ಳೆಯ ಆಡಳಿತವನ್ನು ಬಯಸುವ ಹಕ್ಕು ಕೂಡ. ಈ ಅಂಶ ಪ್ರತಿಪಕ್ಷಗಳು ಪ್ರಜಾತಂತ್ರ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಇನ್ನಷ್ಟು ಅವಕಾಶಗಳನ್ನು ತೆರೆಯುತ್ತದೆ.
ನಮ್ಮ ದೇಶದಲ್ಲಿ ಪ್ರಜಾತಂತ್ರವೆಂದರೆ ಐದು ವರ್ಷಕ್ಕೊಮ್ಮೆ ಸಾರ್ವಜನಿಕ ಚುನಾವಣೆಯಲ್ಲಿ ಮತ ಹಾಕುವುದು, ಆರಿಸಿ ಬಂದ ಸರಕಾರ ತನ್ನ ಪಾಡಿಗೆ ತಾನು ಅಧಿಕಾರ ನಡೆಸುವುದು, ಇಷ್ಟೇ ಎಂಬ ನಂಬಿಕೆಯಿದೆ. ಅದು ಹಾಗಲ್ಲ. ಪ್ರಜಾತಂತ್ರವನ್ನು ಜೀವಂತವಾಗಿರಿಸುವ ದಿಸೆಯಲ್ಲಿ ಈ ಕೆಳಕಂಡ ಕೆಲವು ಅಂಶಗಳು ಪ್ರತಿಪಕ್ಷಗಳಿಗೆ ನೆರವಾಗಬಲ್ಲವು.
1. ಚುನಾವಣೆಯ ನಂತರ ಪ್ರತಿಪಕ್ಷಕ್ಕೆ ಜವಾಬ್ದಾರಿಯುತವಾದ, ಅರ್ಥಪೂರ್ಣವಾದ ಚರ್ಚೆ ನಡೆಸುವ ಸಾಮರ್ಥ್ಯವಿರಬೇಕು. ಈ ಚರ್ಚೆ ಮುಖ್ಯ ಸಮಸ್ಯೆಗಳನ್ನು ಜೀವಂತವಾಗಿರಿಸಬೇಕು; ಅದಕ್ಕಾಗಿ ಒಗ್ಗಟ್ಟನ್ನು ಪ್ರದರ್ಶಿಸಬೇಕು. ಚರ್ಚೆಯೆಂದರೆ ಒಬ್ಬರು ತಮ್ಮ ಅಭಿಪ್ರಾಯವನ್ನು ಇನ್ನೊಬ್ಬರಿಗೆ ಕಿರಿಚಿ ಹೇಳುವುದಲ್ಲ. ಅದು ಒಂದು ಬಗೆಯ ‘ರಾಷ್ಟ್ರೀಯ ಮಾತುಕತೆಯನ್ನು’ ಪ್ರೋತ್ಸಾಹಿಸುವಂಥ, ರಾಜಕೀಯ ಅಭಿವೃದ್ಧಿ ಮತ್ತು ಪರಿಪಕ್ವತೆಯ ಮಟ್ಟವನ್ನು ಹೆಚ್ಚಿಸುವಂಥ ಆರೋಗ್ಯಕರ ಚರ್ಚೆ.
2. ನಮ್ಮಲ್ಲಿ ಚುನಾವಣೆಗಳು ಮುಗಿದೊಡನೆ ರಾಜಕಾರಣಿಗಳು ಮಾಯವಾಗುತ್ತಾರೆ. ಇನೊಂದು ಚುನಾವಣೆ ಬರುವವರೆಗೂ ಅವರು ಅದೃಶ್ಯರಾದರೆ ಆಶ್ಚರ್ಯವೇನಿಲ್ಲ. ಚುನಾವಣೆಯಲ್ಲಿ ಗೆದ್ದು ಆಡಳಿತದ ಚುಕ್ಕಾಣಿ ಹಿಡಿದವರು ತಮ್ಮ ಪಕ್ಷದ ಪ್ರಣಾಳಿಕೆಯನ್ನು ಸಂಪೂರ್ಣ ಮರೆತುಬಿಟ್ಟರೂ ಸರಿಯೇ. ಸುಸಂಗತ ರೀತಿಯಲ್ಲಿ ರೂಪುಗೊಂಡ ಪ್ರತಿಪಕ್ಷ ಮುಂದೆ ಬಂದು ನಾಗರಿಕರೊಡನೆ ಸಂಪರ್ಕವಿಟ್ಟುಕೊಂಡು, ಸಾಮಾನ್ಯರು, ದೀನದಲಿತರು, ಅಂಚಿನಲ್ಲಿರುವವರು, ಮತಚಲಾಯಿಸುವ ಹಕ್ಕಿಲ್ಲದವರು, ಹೀಗೆ ಎಲ್ಲರನ್ನೂ ಸಂಘಟಿಸಿ ಅವರಿಗೆ ಸರಕಾರ, ಆಡಳಿತ ಮೊದಲಾದವುಗಳ ಬಗ್ಗೆ ಶಿಕ್ಷಣ ನೀಡಬೇಕು.
3. ಪ್ರತಿಪಕ್ಷ ಭವಿಷ್ಯದ ಹುರಿಯಾಳುಗಳಿಗೆ ತರಬೇತಿ ನೀಡುವ ವೇದಿಕೆಯಾಗಬೇಕು. ಪಕ್ಷವೊಂದು ಅಧಿಕಾರಕ್ಕೆ ಬಂದಾಗ ಸಚಿವಸ್ಥಾನಗಳನ್ನು ಪಡೆದುಕೊಳ್ಳುವ ಸದಸ್ಯರಿಗೆ ಏನು ನಡೆಯುತ್ತಿದೆ, ಯಾವ ಕೆಲಸಕ್ಕೆ ಎಂಥ ವಿವೇಕ ಅಗತ್ಯ ಎಂಬುದೊಂದೂ ಗೊತ್ತಿರುವುದಿಲ್ಲ.
4. ಪ್ರತಿಪಕ್ಷ ಸರಕಾರದ ಸಾಧನೆಗಳನ್ನು ಹೇಗೋ ಹಾಗೆ ಅದರ ಸೋಲುಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು; ಸರಕಾರ ಭ್ರಷ್ಟಾಚಾರದಲ್ಲಿ ತೊಡಗದಂತೆ, ಸ್ವಜನ ಪಕ್ಷಪಾತಕ್ಕೆ ಎಡೆಕೊಡದಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಸರಕಾರ ತನ್ನ ಆಡಳಿತದಲ್ಲಿ ಹೆಚ್ಚು ಪಾರದರ್ಶಕತೆಯನ್ನು ತೋರುವುದು ಸಾಧ್ಯ. 5. ಪ್ರತಿಪಕ್ಷ ತನ್ನ ಪಕ್ಷದೊಳಗೇ ಪ್ರಜಾಪ್ರಭುತ್ವ ಸಂಸ್ಕೃತಿಯನ್ನು ದೃಢಗೊಳಿಸಬೇಕು. ಆಂತರಿಕ ಜಗಳಗಳಿಂದ ಜರ್ಜರಗೊಂಡಿರುವ ಯಾವ ಪಕ್ಷವೂ ಅಧಿಕಾರದ ಚುಕ್ಕಾಣಿ ಹಿಡಿದು ಯಶಸ್ವಿಯಾಗಲಾರದು.
ಸರಕಾರ ಜನರ ಆಣತಿಗನುಗುಣವಾಗಿ, ಸಮರ್ಪಕವಾಗಿ ಕೆಲಸಮಾಡಬೇಕಾದರೆ ಒಂದು ಬಲವಾದ ಪ್ರತಿಪಕ್ಷ ಅತ್ಯಗತ್ಯ. ನಮ್ಮಲ್ಲಿ ಸಮರ್ಥವಾದ, ಒಗ್ಗಟ್ಟಿನಿಂದ ಕೆಲಸಮಾಡುವ ಆರೋಗ್ಯಕರ ಪ್ರತಿಪಕ್ಷಗಳೇ ಅಪರೂಪ. ಅಸ್ತಿತ್ವದಲ್ಲಿರುವ ಪ್ರತಿಪಕ್ಷಗಳು ಸದಾ ತಮ್ಮತಮ್ಮಲ್ಲೇ ಕಚ್ಚಾಡುತ್ತಿರುತ್ತವೆ. ಅವುಗಳಿಗೆ ಸ್ಪಷ್ಟವಾದ ನೀತಿಯಿರುವುದಿಲ್ಲ, ಕಾರ್ಯಕ್ರಮಗಳಿರುವುದಿಲ್ಲ. ಜಾತೀಯತೆಗೆ, ಪ್ರಾಂತೀಯತೆಗೆ ಪರೋಕ್ಷವಾಗಿ ಒತ್ತುಕೊಡುವ, ಭಿನ್ನ ಪಂಥಗಳನ್ನು ಅನುಸರಿಸುವ ಪ್ರತಿಪಕ್ಷಗಳು ಅಧಿಕಾರಕ್ಕಾಗಿ ಪರಸ್ಪರ ಕಚ್ಚಾಡುವ, ಮತ್ತೆ ಮತ್ತೆ ಹೋಳಾಗುವ ಪಕ್ಷಗಳೇ ಆಗಿವೆ. ಅವುಗಳಿಗೆ ರಾಷ್ಟ್ರೀಯ ಹಿತಾಸಕ್ತಿಗಿಂತ ಪಕ್ಷದ ಹಿತಾಸಕ್ತಿಯೇ ಮುಖ್ಯವಾಗಿರುತ್ತದೆ.
ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷಗಳ ಪಾತ್ರ ಆರೋಗ್ಯಕರವಾಗಿರಬೇಕು. ಸರಕಾರವನ್ನು ಟೀಕಿಸಬಲ್ಲ ಪ್ರತಿಪಕ್ಷಕ್ಕೆ ದೇಶದ ಹಿತಾಸಕ್ತಿಯೇ ಮುಖ್ಯವಾಗಬೇಕು. ಅದು ಸರಕಾರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನೆಲ್ಲ ಈಡೇರಿಸಬೇಕೆಂದು ಒತ್ತಾಯಿಸಬೇಕು. ಅಲ್ಲದೆ ಸರಕಾರಕ್ಕೂ ಪ್ರತಿಪಕ್ಷಗಳಿಗೂ ಇರಬೇಕಾದ್ದು ಒಂದೇ ಉದ್ದೇಶ. ಅದು ಜನತೆಯ ಒಳಿತಿಗೆ ಸಂಬಂಧಿಸಿದ್ದು.
ಡಿ.ವಿ.ಜಿ.ಯವರು ಕಳೆದ ಶತಮಾನದ 50ರ ದಶಕದಲ್ಲಿ ಕಾಂಗ್ರೆಸ್ಸನ್ನು ಕುರಿತು ಬರೆದಿರುವುದನ್ನು ನೋಡಿ: “ಕಾಂಗ್ರೆಸ್ಸಿಗೆ ಸಮಸ್ಪಧರ್ಿಯಾಗಿ ನಿಲ್ಲಬಲ್ಲ ರಾಜಕೀಯ ಪಕ್ಷ ಇನ್ನೊಂದಾದರೂ ದೇಶದಲ್ಲಿ ಇದ್ದಿದ್ದರೆ, ಆಗ ಕಾಂಗ್ರೆಸ್ಸಿಗರ ಅತಿವಾದಗಳೂ ಅತಿವರ್ತನೆಗಳೂ ಸರಕಾರದ ಮೇಲೆ ಈಗಿನಷ್ಟು ಹೆಚ್ಚಾಗಿ ಪರಿಣಾಮ ಮಾಡುವುದು ಅಸಂಭವವಾಗುತ್ತಿತ್ತು. ಯಾವ ಒಂದು ರಾಜಕೀಯ ಪಕ್ಷದ ನೀತಿಗೂ ಆರೋಗ್ಯ ಸ್ಥಿತಿಗೂ ಇನ್ನೊಂದು ಪಕ್ಷದ ಭೀತಿಯೇ ಅವಶ್ಯವಾದ ಪೂರ್ವ ಸಂದರ್ಭ. ಪ್ರತಿಪಕ್ಷವಿಲ್ಲದ ರಾಜಕೀಯ ಪಕ್ಷವು ನಿರಂಕುಶಾಧಿಕಾರಿಯಂತೆ ವರ್ತಿಸುವುದು ಸ್ವಾಭಾವಿಕ.” ಈ ಮಾತುಗಳು ಇಂದಿಗೂ ಸಲ್ಲುತ್ತವೆಯೆಂಬುದಕ್ಕೆ ನಮ್ಮ ದೇಶದ ಇವತ್ತಿನ ರಾಜಕೀಯ ವಿದ್ಯಮಾನವೇ ಒಂದು ನಿದರ್ಶನವೆನ್ನಬಹುದು.
128 ವರ್ಷಗಳಷ್ಟು ಹಳೆಯದಾದ ಕಾಂಗ್ರೆಸ್ ಪಕ್ಷ ಇವತ್ತು ಜರ್ಜರಿತವಾಗಿದೆ. ಕಳೆದ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿ.ಜೆ.ಪಿ. ಅದೆಷ್ಟು ಬಹುಮತ ಪಡೆಯಿತೆಂದರೆ ಅರವತ್ತು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ಸಿಗೂ ಸಂವಿಧಾನಾತ್ಮಕವಾಗಿ ಪ್ರತಿಪಕ್ಷವಾಗುವ ಅದೃಷ್ಟ ಲಭಿಸಲಿಲ್ಲ. ಹಾಗಾಗಿ ಈಗ ಆಳುವ ಸರಕಾರವೇ ‘ಗಾಡ್ ಫಾದರ್’ನಂತಾಗಿದೆ.
ಭಿನ್ನಮತವನ್ನು ಪರಿಗಣಿಸಿ ಅದು ಬೆಳೆಯುವುದಕ್ಕೆ ಅವಕಾಶಮಾಡಿಕೊಡುವುದೇ ಪ್ರಜಾಪ್ರಭುತ್ವದ ಜೀವಾಳ. ಪ್ರತಿಪಕ್ಷವಿಲ್ಲದ ಪ್ರಸಕ್ತ ಸನ್ನಿವೇಶ ನೆಹರೂ ಅಧಿಕಾರಾವಧಿಯಲ್ಲಿದ್ದ ಸನ್ನಿವೇಶಕ್ಕಿಂತ ಭಿನ್ನವಾಗೇನೂ ಇಲ್ಲ. ಆದರೆ ನೆಹರೂಗೆ ಪ್ರತಿಪಕ್ಷದ ಮಹತ್ವವೆಷ್ಟೆಂದು ಗೊತ್ತಿತ್ತು. ಅವರ ಪ್ರಕಾರ ಸಮರ್ಥ ಪ್ರತಿಪಕ್ಷವಿಲ್ಲದಿದ್ದರೆ ಪ್ರಜಾಪ್ರಭುತ್ವ ಪದ್ಧತಿಯೇ ನಾಶವಾದ ಹಾಗೆ.
ಮೊನ್ನೆಯಷ್ಟೇ ಮುಗಿದ ಸಂಸತ್ತಿನ ಮುಂಗಾರು ಅಧಿವೇಶನದ ಬಗ್ಗೆ ಏನು ಹೇಳೋಣ? ಪಕ್ಷಗಳಿರುವುದು ಜನರಿಗೆಂದಲ್ಲದೆ ಜನರು ಪಕ್ಷಕ್ಕಾಗಿ ಅಲ್ಲ ಎಂಬ ಮೂಲ ಸತ್ಯವನ್ನೇ ಮರೆಮಾಚುವಂತೆ ನಮ್ಮ ಆಡಳಿತ ಪಕ್ಷದ ಜೊತೆ ಪ್ರತಿಪಕ್ಷಗಳೂ ಅಬ್ಬರಿಸಿದುವಷ್ಟೆ. ಏನು ಸಾಧಿಸಿದ ಹಾಗಾಯಿತು? ಅಗತ್ಯ ಶಾಸನಗಳನ್ನು ಮಂಡಿಸಲು, ವಿವಿಧ ಕ್ಷೇತ್ರಗಳ ಸಮಸ್ಯೆಗಳನ್ನು ಕುರಿತು ಚರ್ಚಿಸಲು, ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ ನೀಡಲು ವೇದಿಕೆಯಾಗಬೇಕಾಗಿದ್ದ ಸಂಸತ್ತು ವ್ಯರ್ಥ ವಾಗ್ಯುದ್ಧಕ್ಕೊಂದು ಅಖಾಡವಾದಂತಾಯಿತು. ಆಡಳಿತ ಪಕ್ಷದ ಚಿಂತನೆ ಪ್ರತಿಪಕ್ಷಗಳ ಚಿಂತನೆಗಿಂತ ವಿಭಿನ್ನವಾಗೇನೂ ಇರಲಿಲ್ಲ.
ಕೊನೆಯ ಮಾತು: ಪ್ರಖ್ಯಾತ ಅಮೆರಿಕನ್ ಪತ್ರಕರ್ತ ವಾಲ್ಟರ್ ಲಿಪ್ಮನ್ ಉವಾಚ: “ಎಲ್ಲರೂ ಒಂದೇ ರೀತಿ ಚಿಂತಿಸುತ್ತಾರೆಂದರೆ ಯಾರೂ ಚಿಂತಿಸುತ್ತಿಲ್ಲವೆಂದೇ ಅರ್ಥ”.






0 Comments