ಕಪ್ಪು – ಬಿಳುಪು
ಕೃಷ್ಣ ಮೂರ್ತಿ

ಅವಳಿಗೆ
ಚದುರಂಗದಾಟ ಹೇಳಿಕೊಟ್ಟೆ
ಅವಳದು ಬಿಳೀ ಕಾಯಿಗಳು
ನನ್ನದು ಕಪ್ಪು ಕಾಯಿಗಳು
ಅವಳೇ ಗೆದ್ದಳು, ಆದರೂ
ಸಪ್ಪಗಿದ್ದಳು ಏನೋ ಯೋಚಿಸುವಂತೆ
“ಈ ಆಟದಲ್ಲಿ ಎಲ್ಲಾ ಸರಿ ಕಣೋ
ಆದರೆ ಬಿಳೀ ಕಾಯಿಯವರು
ಮೊದಲ ನಡೆ ನಡೆಸಬೇಕಿನ್ನುವುದು ಹಿಡಿಸಲಿಲ್ಲ
ಬಿಳೀ ಯಜಮಾನ,ಸೌಂದರ್ಯ… ಮೊದಲು
ಕಪ್ಪು ಆಳು, ಕುರೂಪ…… ಆನಂತರ
ಎಂಬಂತೆ…
ಈ ಆಟದ ನಿಯಮ ಮಾಡಿದ್ದಾರೇನೋ
ಅನ್ನಿಸುತ್ತದಲ್ಲೋ”……..!!
ಎಂದು ನನ್ನ ಕಪ್ಪು ಕೆನ್ನೆಗೆ ಮುತ್ತಿಟ್ಟಳು
ಈಗೀಗ ಎಲ್ಲಾ ಆಟದಲ್ಲೂ
ಅವಳು ನನಗೆ ಬೇಕಾಗೆ
ಸೋಲುತ್ತಿದ್ದಾಳೆ ಅನ್ನಿಸುತ್ತಿದೆ…….






uttam kavana