ವೆಂಕಿ
ಭಾರತದ ಕುರಿತು ಅತ್ಯಂತ ಸಾಮಾನ್ಯವಾಗಿ ಜನಜನಿತವಾಗಿರುವ ರೂಪಕವೆಂದರೆ ಆನೆ. ಆನೆ ಎಚ್ಚರಾಗುತ್ತದೆ, ಬರುತ್ತದೆ ಮತ್ತು ಹುಲಿಗೆ (ಹುಲಿ ಎಂಬುದು ಚೀನಾದ ರೂಪಕ) ಸವಾಲು ಹಾಕುತ್ತದೆ… ಇವು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರತಿನಿತ್ಯವೂ ಕಾಣುವ ಸಾಮಾನ್ಯ ಉಲ್ಲೇಖಗಳು. “ದ ಎಲೆಫಂಟ್, ದ ಟೈಗರ್ ಅಂಡ್ ದ ಸೆಲ್ ಫೋನ್” ಎಂಬ ಪುಸ್ತಕ ಈ ರೂಪಕಗಳನ್ನು ಮತ್ತಷ್ಟು ಪುಷ್ಟಿಗೊಳಿಸಿದೆ. ಈ ಪುಸ್ತಕದ ಲೇಖಕ ಮತ್ತಾರೂ ಅಲ್ಲ, ನ್ಯೂಯಾರ್ಕಿನ ಬಹು ದೊಡ್ಡ ಅಧಿಕಾರದ ಗದ್ದುಗೆಗಳಲ್ಲೊಂದಾದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಇನ್ನೇನು ಏರಿಯೇಬಿಟ್ಟಂತೆ ಕಂಡಿದ್ದ ಶಶಿ ತರೂರ್.
ನ್ಯೂಯಾರ್ಕಿನಲ್ಲಿ ಭಾರತದ ೬೦ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಹರಡಿಕೊಂಡಾಗ ಈ ಆನೆ ವಿವಿಧ ಬಗೆಯಲ್ಲಿ ಜೀವಂತವಾಗೇ ಬಂದಿತ್ತು. ವಿಶ್ವಸಂಸ್ಥೆಯ ಮಹಾ ಅಧಿವೇಶನ, ಕ್ಲಿಂಟನ್ನನ ಗ್ಲಾಮರ್ ಇದೆಲ್ಲದರ ನಡುವೆಯೂ ಭಾರತದ ೬೦ರ ಹಬ್ಬದ ಅಬ್ಬರ ಜೋರಿತ್ತು!
ಭಾರತದ ಬಗೆಗಿನ ಗ್ರಹಿಕೆಯಲ್ಲಿ ಕ್ರಮೇಣ ಬದಲಾವಣೆಯಾಗಿದೆ. ಭಾರತವನ್ನು ಕಂಡ ಇಲ್ಲಿನ ಹೆಚ್ಚಿನವರಿಗೆ ತಾಜ್ ಮಹಲು ಇನ್ನೂ ಮರೆಯಲಾರದ ಚಿತ್ರ. ಹಾಗಾಗಿಯೇ, ಜಗತ್ತಿನಲ್ಲೇ ಅತ್ಯಂತ ದಟ್ಟಣೆಯ ಬಸ್ ನಿಲ್ದಾಣ ಎಂದೇ ಹೆಗ್ಗಳಿಕೆಯಿರುವ ನ್ಯೂಯಾರ್ಕಿನ ಪ್ರಸಿದ್ಧ ಸ್ಥಳಗಳಲ್ಲಿ ನಮ್ಮ ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ತಾಜ್ ನ ಮರಳು ಶಿಲ್ಪ ನಿರ್ಮಿಸಿದರೆ ಅಚ್ಚರಿಯೆಂದೇನೂ ಅನ್ನಿಸುವುದಿಲ್ಲ.
ಇಲ್ಲಿನ ಫಿಫ್ತ್ ಅವೆನ್ಯೂ, ಸೆಂಟ್ರಲ್ ರೈಲು ನಿಲ್ದಾಣ ಮೊದಲಾದೆಡೆಗಳಲ್ಲಿ ಕಣ್ಣು ತುಂಬುವ ಹಾಗೆ ಹಾಕಲಾಗಿದ್ದ ಬ್ಯಾನರುಗಳು, ಪೋಸ್ಟರುಗಳು ನ್ಯೂಯಾರ್ಕಿಗರ ಮನಸ್ಸಲ್ಲಿ ಭಾರತವನ್ನು ನಿಚ್ಚಳವಾಗಿ ದಾಖಲಿಸತೊಡಗಿದ್ದವು. ಬಸ್ಸುಗಳು, ಬಸ್ ತಂಗುದಾಣಗಳು ಮತ್ತು ಟ್ಯಾಕ್ಸಿಗಳೆಲ್ಲ ಭಾರತ ಕುರಿತ ಜಾಹೀರಾತುಗಳಿಂದಲೇ ಕಂಗೊಳಿಸುತ್ತಿದ್ದವು. ಭಾರತೀಯ ಉದ್ಯಮ ಜಗತ್ತಿನ ಪ್ರಮುಖರೆಲ್ಲ ಎಲ್ಲೆಲ್ಲೂ ಕಾಣಿಸಿಕೊಳ್ಳತೊಡಗಿದ್ದರು. ಬದಲಾದ ಭಾರತದ ಬಗ್ಗೆ ಮಾತಾಡುತ್ತಿದ್ದರು. ಭಾರತದ ಉದ್ಯಮ ಲೋಕ ನೋಡಬಯಸುವವರಿಗೆ, ಅದರಲ್ಲಿ ತೊಡಗಿಸಿಕೊಳ್ಳಬಯಸುವವರಿಗೆ ಕೆಂಪುಹಾಸಿನ ಸ್ವಾಗತದ ಭರವಸೆ ಬಡಿಸುತ್ತಿದ್ದರು. ಮೋಂಟೆಕ್ ಸಿಂಗ್ ಅಹ್ಲುವಾಲಿಯ, ಸೋಮ್ ಮಿತ್ತಲ್, ನಂದನ್ ನೀಲೇಕಣಿ -ಹೀಗೆ ಹಲವಾರು ಪ್ರಮುಖರು ಇಲ್ಲಿನ ಔದ್ಯಮಿಕ ಸಮ್ಮೇಳನಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಮತ್ತು ಪ್ರದರ್ಶನ ಮೇಳಗಳಲ್ಲಿ ಮಿಂಚಿದ್ದರು. ಭಾರತ ನಿಜವಾಗಿಯೂ ತನ್ನ ವಿರಾಟ್ ರೂಪದಲ್ಲಿ ಕಣ್ಣು ಕೋರೈಸಿತ್ತು.
ಪೂರ್ವದ ಬಗ್ಗೆ, ಅದರಲ್ಲೂ ಭಾರತದ ಬಗ್ಗೆ ಇಲ್ಲಿನವರ ತಿಳಿವಳಿಕೆ ಬದಲಾಗಲು ವರ್ಷಗಳೇ ಬೇಕು. ಇಂಥ ಹಂತದಲ್ಲಿ, ಆಧ್ಯಾತ್ಮಿಕತೆಯೊಂದಿಗೆ ತಳುಕು ಹಾಕಿಕೊಂಡಿರುವ ಭಾರತೀಯ ಸನ್ನಿವೇಶ ತಂತ್ರಜ್ಞಾನಕ್ಕೆ ಅತ್ಯಂತ ಆಭಾರಿಯಾಗಿರಬೇಕು.
ಆದರೆ ಇದೊಂದೇ ಎಲ್ಲವನ್ನೂ ಬದಲಿಸಿಬಿಡುತ್ತದೆ ಎಂದೇನೂ ಅಲ್ಲ. ಭಾರತದೆಡೆಗೆ ಆಕರ್ಷಿತರಾಗುವ ಪ್ರವಾಸಿಗರು ಮಾತು ಹೂಡಿಕೆದಾರರು ಇಂದಿಗೂ ಕಟು ವಾಸ್ತವಗಳನ್ನು ಎದುರಿಸುವ ಪ್ರಸಂಗಗಳೂ ಇವೆ. ಇಂಥ ಸನ್ನಿವೇಶದಲ್ಲಿ, ಜಾಗತಿಕ ವೇದಿಕೆಯಲ್ಲಿ ಭಾರತ ಕುರಿತ ಘನತೆಯುತವಾದ ಚಿತ್ರವನ್ನು ಕಟ್ಟುವಾಗ ಸ್ವಾವಲಂಬನೆಯನ್ನು ಬಹುದೊಡ್ಡ ಪ್ರಮಾಣದಲ್ಲಿ ಸಾಧಿಸಿಕೊಳ್ಳಬೇಕಾದ ಅವಶ್ಯಕತೆಯನ್ನೂ ಸ್ಪಷ್ಟವಾಗಿ ಮನಗಾಣಬೇಕಿದೆ.





0 Comments