ರೇಖಾ ಗೌಡ
ನಮ್ಮದೇ ಲೋಕದಲ್ಲಿದ್ದಾಗ ಗಿಡವೇನು, ಮರವೇನು, ಕಾಡೇನು, ಕಡಲೇನು?
ಅವು ಏಕಿವೆ, ಏನು ಹೇಳ್ತಿವೆ, ಅವುಗಳ ಅಸ್ತಿತ್ವದ ಅರ್ಥವೇನು, ಅವುಗಳೊಂದಿಗೆ ನಮ್ಮ ಸಂಬಂಧವೇನು?
ನಮ್ಮೊಂದಿಗೆ ಅವುಗಳ ಬಂಧವೇನು?
ಇದ ತಿಳಿಯುವ ಅವಶ್ಯವೇನು, ಎಂದಾದರೂ ಯೋಚಿಸಿರುವೆಯೇನು?
ಯಾವಾಗಲೋ ಒಮ್ಮೆ, ಯಾವ ಕಾರಣಕ್ಕೋ ಅಥವಾ ಇದ್ದ ಪರಿಸರ ಉಸಿರುಗಟ್ಟಿಸಿದಾಗಲಷ್ಟೇ, ನಾವು ಕಟ್ಟಿಕೊಂಡ ನಮ್ಮದೇ ಚಿಕ್ಕ ಲೋಕದಿಂದ ಹೊರಬಂದು ಅದರಾಚೆಯ ಲೋಕಕ್ಕೆ ಕಣ್ಣು ಹಾಯಿಸುತ್ತೇವೆ.
ಮತ್ತೆ, ಸಾಕಷ್ಟು ಅರಿತು ಮೇಲೆ ಹಾರುವ ಮುನ್ನವೇ,
ಹಾರಿ ಇಳಿದು ಬಿಡುತ್ತೇವೆ ಮತ್ತದೇ ಚಿಕ್ಕ ಲೋಕಕ್ಕೆ!
ದಿನನಿತ್ಯದ ಕಾಯಕಗಳಿಗೆ ತಮ್ಮನ್ನೇ ತಾವು ಕಟ್ಟಿ ಕೊಂಡವರಿಗೆ, ಒಪ್ಪಿಸಿಕೊಂಡವರಿಗೆ,
ಆ ಸಣ್ಣ ಬದುಕೇ ಸಾಕೆಂದುಕೊಂಡವರಿಗೆ, ಅದೇ ತೃಪ್ತಿ ಎಂದು ಕೊಂಡವರಿಗೆ, ಮಿತಿ ಹಾಕುವ ಯೋಚನೆಗಳಿಂದಾಚೆ ಬರಲಾಗದವರಿಗೆ, ಚಿಂತೆಗಳ ಸುಳಿಯಲ್ಲಿ ಸಿಕ್ಕಿಕೊಂಡವರಿಗೆ, ಇವನ್ನೆಲ್ಲಾ ಮೀರಿದ ಅದ್ಭುತ ಲೋಕದ ಅನುಭವ, ಸಂತಸ, ತೃಪ್ತಿ ಇರುವ ಸುಳಿವು ಸಿಗುವುದೇ?
ಈ ಲೋಕದ ಜನರ ಸಹವಾಸ ಸಾಕಾಗಿ, ಅವರ ರೀತಿ ನೀತಿಯಲ್ಲಿ ಇಷ್ಟ ಇಲ್ಲವಾಗಿ, ಅವರಿಂದ ವಿಮುಖವಾಗಿ ಏಕಾಂತ ಅಪ್ಪಿದಾಗ…
ನೋಡಿ, ಕೇಳುವುದು, ಕಾಣುವುದು ಇನ್ನೊಂದು ಲೋಕದ ದನಿ, ಅಸ್ತಿತ್ವ!
ಅನುಭವಕ್ಕೆ ಬರುವುದು ಇನ್ನೊಂದು ಸಂಬಂಧ!
ಮಾತಾಡುತ್ತಲೇ ಇರುತ್ತದೆ ಪ್ರಕೃತಿ, ಆದರೆ ನಮ್ಮ ಭಾಷೆಯಲ್ಲಲ್ಲ!
ಜ್ಞಾನ, ಪ್ರೇಮದ ಧಾರೆ ನಿರಂತರ ಅಲ್ಲಿ,
ತೆರೆದ ಮನಸುಗಳಿಗೆ, ಅಪ್ಪಿ ಒಪ್ಪಿಕೊಳ್ಳುವ ಹೃದಯಗಳಿಗೆ, ಶುದ್ಧ, ಪ್ರಬುದ್ಧ ಆತ್ಮಗಳಿಗೆ!
ಸಣ್ಣ ಬುದ್ಧಿ ಬಿಟ್ಟವ ಪ್ರಬುದ್ಧ,
ಪ್ರೇಮ ತುಂಬಿ ಕೊಂಡವ ಶುದ್ಧ!
ಜೀವನಕ್ಕೂ, ಪ್ರೇಮಕ್ಕೂ, ಕಾವ್ಯಕ್ಕೂ, ಬಿಡುಗಡೆಗೂ ಸ್ಫೂರ್ತಿ ಪ್ರಕೃತಿ, ಮೂಲವದರ ಸಂಸ್ಕೃತಿ!
ಪ್ರಕೃತಿಯಿಂದ ವಿಮುಖನಾದವ ಪ್ರೇಮಿ ಹೇಗಾದಾನು? ಜೀವನ ಎಲ್ಲಿ ಕಂಡಾನು? ಕಾವ್ಯ ಕಾಣುವನೇನು? ಬಿಡುಗಡೆ ಹೊಂದುವನೇನು?
ಹೋಗಬೇಕು ಪ್ರಕೃತಿಯ ಮಡಿಲಿಗೆ,
ಮಂದೆಯಂತಲ್ಲ,
ಮಗುವಿನ ಮನದ ತೆರದಿ!
ಭಾವಿಸಿ, ಧ್ಯಾನಿಸಿ,
ಪ್ರೇಮಕ್ಕೆ ಸಾಕ್ಷಿಯಾಗಿ ಹೊಸ ಬದುಕ ಅನುಭವಿಸಲು!
0 ಪ್ರತಿಕ್ರಿಯೆಗಳು