ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇನ್ನಿಲ್ಲವಾದಾಗ…

ರೇವಣಸಿದ್ದಪ್ಪ ಜಿ ಆರ್

ಇಂದು,ನಾಳೆ,
ಇಲ್ಲಾ ನಾಳಿದ್ದು,
ಈ ಕ್ಷಣ,ಮರುಕ್ಷಣ,
ಅಥವಾ
ಆ ಒಂದು ಕ್ಷಣ
ನಾನು ಇಲ್ಲವಾದಾಗ
ಎಲ್ಲಾ ಇರುವಂತೆ
ಎಲ್ಲವೂ ಸಾಂಗವಾಗಿ
ಸಾಗುತ್ತವೆ.

ಲೋಕದ ಮೋಟಾರು
ಯಾರೊಬ್ಬರ ಉಸಿರು
ಹೋದಾಗಲೂ
ಪಂಕ್ಚರ್ ಆಗುವುದಿಲ್ಲ;
ಯಾರೊಬ್ಬರ ಕಣ್ಣೀರಿಗೂ
ಪ್ರವಾಹವಾಗುವ ಶಕ್ತಿಯಿಲ್ಲ;
ಯಾರೊಬ್ಬರ ನಿಟ್ಟುಸಿರು
ಬಿರುಗಾಳಿ ಎಬ್ಬಿಸುವುದಿಲ್ಲ;
ಯಾರೊಬ್ಬರ ಹೃದಯ
ಛಿದ್ರವಾಗಿ
ಭೂಕಂಪನವಾಗುವುದಿಲ್ಲ.

ಗತಿಸಿದವರಿಗೆ
ಬದುಕಿದವರು
ಸಾಥ್ ಕೊಡುವಂತಿದ್ದರೆ
ಪಂಚಭೂತಗಳೂ
ಗುದ್ದು ಸೇರುತ್ತಿದ್ದವು.
ಎಷ್ಟಂತ ಹನಿಯ ಹನಿಸಿ
ಕಣ್ಣ ಕಡಾಯಿಯ
ಬತ್ತಿಸಿಕೊಳ್ಳುವೆ?
ಎದೆ ನಗಾರಿಯ
ಎನಿತು ಬಡಿದು
ರೋಧಿಸುವೇ?
ಎಷ್ಟು ಕಾಲ
ನಿನ್ನೊಳಗಿನ
ನನ್ನ ನೆನಪಿನ ಗಿಡಕ್ಕೆ
ನೀರೆರೆದು
ಹಸಿರಾಗಿಡುವೆ?
ಸತ್ತವರಿಗೆಲ್ಲಾ
ಸ್ಮಾರಕ ಕಟ್ಟಿಸುವಂತಿದ್ದರೆ
ಬದುಕುವವರಿಗೆ
ಜಾಗವೇ ಇರುತ್ತಿರಲಿಲ್ಲ.

ತನುತೊರೆದವನ
ಆಸೆ ನಿರಾಸೆ
ನೋವು ನಲಿವು
ದುಗುಡ ದುಮ್ಮಾನ
ಅವನೊಂದಿಗೇ
ಮಸಣ ಸೇರಿ
ಇರುವವರ
ಆಡಿಸುತ್ತವೆ
ಇನ್ನಿಲ್ಲದಂತೆ.
ಇದ್ದೂ ಇಲ್ಲದಂತೆ
ಇಲ್ಲದೆಯೂ ಇರುವಂತೆ
ಭಾಸವಾಗುವ
ಮಾಯಕ ಜಗದಿ
ಅಂತೆಯೇ
ಒಪ್ಪಿಕೊಂಡು
ಅಪ್ಪಿಕೊಂಡು
ಮುಪ್ಪುರಿಯಬೇಕು.

ಜ್ಯೋತಿರ್ವರ್ಷಗಳ ದೂರದಲ್ಲಿ
ಇರುವುದ
ಅರುಹುಹರಿಲ್ಲ;
ಜ್ಯೋತಿರ್ವರ್ಷಗಳು
ಉರುಳುರುಳಿ ಪೋಗಲು
ಏನಿರ್ಪುದೋ ಬಲ್ಲವರಿಲ್ಲ;
ಇಂದಿರುವುದೇನೋ ಒಂದು
ಆ ಒಂದರೊಳಗೊಂದಾಗಿ
ಬಾಳಬೇಕು ಎಂದೂ.

‍ಲೇಖಕರು Admin

20 February, 2022

1 Comment

  1. T S SHRAVANA KUMARI

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading