ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದು ಸಮಕಾಲೀನ ಸಂಗತಿಗಳ ಸುತ್ತ ಹೆಣೆದಿರುವ ಒಂದು ಕಥಾನಕ…

‘ಅವಧಿ’ ಮಾಧ್ಯಮ ಸಹಯೋಗದಲ್ಲಿ ಶಿವಮೊಗ್ಗದ ‘ಹೊಂಗಿರಣ’ ತಂಡ ಬೆಂಗಳೂರಿನಲ್ಲಿ ಹೊಸ ನಾಟಕವನ್ನು ಅಭಿನಯಿಸುತ್ತಿದೆ.

ಖ್ಯಾತ ಕಥೆಗಾರ ಶಿವಕುಮಾರ ಮಾವಲಿ ಅವರು ಬರೆದ ಈ ನಾಟಕವನ್ನು ಕಾಮಿಡಿ ಕಿಲಾಡಿಗಳು ಖ್ಯಾತಿಯ ಹೊಂಗಿರಣ ಚಂದ್ರು ನಿರ್ದೇಶಿಸಿದ್ದಾರೆ.

ಈ ತಿಂಗಳ 31 ರಂದು ಬೆಂಗಳೂರಿನ ಕಲಾಗ್ರಾಮದಲ್ಲಿ ಸಂಜೆ 7ಕ್ಕೆ ನಾಟಕ ಪ್ರದರ್ಶನ ಇದೆ.

ಟಿಕೆಟ್ ಕಾದಿರಿಸಲು-ಇಲ್ಲಿ ಒತ್ತಿ

ಹೊಂಗಿರಣ ಚಂದ್ರು

ದೇಶ ಮತ್ತು ರಾಜ್ಯದಲ್ಲಿ ಭಾರೀ ಚರ್ಚೆಗೆ ಬಂದ ಅನೇಕ ಸಂಗತಿಗಳು ಇಲ್ಲಿ ನೋಡುಗರಿಗೆ ಮುಖಾಮುಖಿಯಾಗುತ್ತವೆ. ಯಾವುದೇ ಸರ್ಕಾರಗಳು ಮಾನವೀಯ ನೆಲೆಗಟ್ಟನಲ್ಲಿ ಯೋಚಿಸದೇ ಹೋದಾಗ ಎಂಥಾ ಅಮಾನವೀಯವಾಗಿ ಕಾಣಿಸಿಕೊಳ್ಳುತ್ತವೆ ಎಂಬುದನ್ನು ಸೂಕ್ಷ್ಮವಾಗಿ ಕುಟುಕಿರುವುದನ್ನು ಕಾಣಬಹುದಾಗಿದೆ. ಹೊಸ ಹೊಸ ಸಾಧ್ಯತೆಗಳನ್ನ ರಂಗಕ್ಕೆ ತರುವಲ್ಲಿ ನಮ್ಮ ತಂಡ ಹೊಸತನದ ಪ್ರಯೋಗಗಳಿಂದ ಸಾಬೀತು ಮಾಡುತ್ತಲೇ ಬಂದಿದೆ. ಇದು ಅದರ ಮುಂದುವರಿದ ಭಾಗವೇ ಈ ನಾಟಕ.

ಇದು ನನ್ನ ನಿರ್ದೇಶನದ ಒಂಭತ್ತನೆಯ ನಾಟಕ, ಹೊಂಗಿರಣದಲ್ಲಿಯೇ ನಟನೆಯ ಜತೆಗೆಯೇ ನಿರ್ದೇಶನದಲ್ಲೂ ಗುರುತಿಸಿಕೊಂಡ ಬಂದ ನನಗೆ ಇತ್ತೀಚೆಗೆ ಸಮಕಾಲೀನವಾದಂತಹ ಸಮಸ್ಯೆಗಳಿಗೆ, ವಿಚಾರಗಳಿಗೆ, ವಾಸ್ತವತೆಗೆ ತೆರೆದುಕೊಳ್ಳುವ ಪ್ರಯೋಗಳು ಅಲ್ಲದೇ ನಾಟಕಗಳು ಅಷ್ಟಾಗಿ ಬರುತ್ತಿಲ್ಲ ಎಂಬ ಕೊರಗಿತ್ತು. ಮತ್ತು ಹೊಸ ನಾಟಕಕಾರರು ಬರುತ್ತಿಲ್ಲ ಎಂಬ ಮಾತುಗಳನ್ನೂ ಕೇಳುತ್ತಲೇ ಇದ್ದೇವೆ ಆದರೆ ಈ ಕೊರಗನ್ನು ಶಿವು ಈ ನಾಟಕದ ಮೂಲಕ ನೀಗಿಸಿದ್ದಾರೆ.

ಒಮ್ಮೆ ಶಿವು ಈ ನಾಟಕವನ್ನ ಹಾಗೆ ಸುಮ್ಮನೆ ಒಂದು ಸಲ ಓದಿ ನೋಡು ಅಂತ ಕೊಟ್ಟಾಗ ಓದು ಓದುತ್ತಾ ಅದನ್ನು ಕಲ್ಪಿಸಿಕೊಳ್ಳತೊಡಗಿದೆ ಒಂದೇ ಓದಿಗೆ ಮುಗಿಸಿದ ನನಗೆ ಈ ನಾಟಕವನ್ನ ನಾನೇ ರಂಗಕ್ಕೆ ತರಬೇಕೆನಿಸಿತು, ಒಂದು ಹಂತದಲ್ಲಿ ಶಿವು ಜೊತೆ ಜಗಳವಾಡಿ, ನಾನು ನಿರ್ದೇಶನಕ್ಕೆ ತೆಗೆದು ಕೊಂಡೆ ಎನ್ನಬಹುದು. ಸಮಕಾಲಿನ ಸಂಗತಿಗಳನ್ನು ಇದ್ದಂತೆಯೇ ಹೇಳುವ ಪರಿಸ್ಥಿತಿಯಲ್ಲಿ ನಾವಿಲ್ಲ ಹಾಗಂತ ನಾವು ಅನಿಸಿದ್ದನ್ನು ಹೇಳದೆ ಇರೋದಿಕ್ಕೆ ಆಗೋದಿಲ್ಲ ನಮ್ಮದೇ ಮಾಧ್ಯಮದ ಮೂಲಕ ಅನಿಸಿದ್ದನ್ನು ಹೇಳಬಹುದು ಎಂದು ಅಂತ ಯೋಚಿಸುತ್ತಿದ್ದಾಗ ನನಗೆ ಈ ನಾಟಕ ಸಿಕ್ಕಿತು.

ಶಿವು ಅವರಿಗೆ ತಕ್ಷಣವೇ ಪೋನ್ ಮಾಡಿ, ಈ ನಾಟಕವನ್ನು ನಾನು ನಿರ್ದೇಶನ ಮಾಡುತ್ತೇನೆ ಅಂತ ಅನುಮತಿ ಪಡೆದು ಕೊಂಡೆ, ನಂತರದ್ದೇ ಸವಾಲಿನ‌ ಕೆಲಸ, ನಾಟಕ ಕಟ್ಟುವ ಕಾಯಕ. ಯಾಕೆಂದರೆ ಒಬ್ಬ ನಾಟಕಕಾರನ ಕಲ್ಪನೆಯಲ್ಲಿ ಕಟ್ಟಿದ ನಾಟಕ ನಿರ್ದೇಶಕ ಅದನ್ನು ಅರ್ಥಮಾಡಿಕೊಂಡು ಅವನದೇ ಶೈಲಿಯಲ್ಲಿ ಪ್ರಯೋಗಿಸುತ್ತಾನೆ. ಬಾಲ್ಯದಿಂದಲೂ ಸ್ನೇಹಿತರಾದ ನಾನು ಶಿವು. ನಮ್ಮಿಬ್ಬರ Wave length match ಆಗಿದ್ದರಿಂದ. ಮತ್ತು ನನ್ನ ರಂಗ ಪಯಣವನ್ನು ಅತ್ಯಂತ ಹತ್ತಿರದಿಂದ ಕಂಡ ಶಿವುಗೆ ನನ್ನ ಮೇಲೆ ಇದ್ದ ನಂಬಿಕೆ ಈ ನಾಟಕ ಆಗುವಂತೆ ಮಾಡಿತು‌. ತೀರಾ ಸಹಜ ಅಭಿನಯ ಬೇಡುವ ಈ ನಾಟಕಕ್ಕೆ ತುಂಬಾ ನೈಜವಾಗಿ ಅಭಿನಯಿಸುವ ಕಲಾವಿದರು ಬೇಕಿದ್ದರು.

ನಂತರ ಶುರು ನನ್ನ ಕಲಾವಿದರ Hunting. ನಮ್ಮ ತಂಡದ ಮತ್ತು ಶಿವಮೊಗ್ಗದ ನಟರ ಪಟ್ಟಿ‌ ಮಾಡತೊಡಗಿದೆ. ಈ ಮಧ್ಯೆ ಶಿವು ಜೊತೆ ನಾಟಕದ ಕುರಿತ ಚರ್ಚೆ ಹೀಗೆ ಅಂತಿಮವಾಗಿ ಕಲಾವಿದರನ್ನ final ಮಾಡಿ ನಾಟಕವನ್ನ ರಂಗದ ಮೇಲೆ ತಂದದ್ದಾಯಿತು. ವಿಭಿನ್ನವಾಗದ ವಿನ್ಯಾಸವನ್ನು ಮಾಡಬೇಕೆಂದ ಯೋಚಿಸಿ, ಯೋಚಿಸಿ ಒಂದು ಡಿಸೈನನ್ನ ಫೈನಲ್ ಮಾಡಿ ಸಿದ್ಧಮಾಡಲಾಯ್ತು ಆನಂತರ ಕಲಾವಿದರ ಅಭಿನಯವನ್ನು ಆದಷ್ಟು ನೈಜತೆಗೆ ಬರುವಂತೆ ಹೆಣಗಾಡಬೇಕಿತ್ತು. ಹಾಗಾಗಿ ನನ್ನ ಕಲಾವಿದರು ನನಗೆ ಈ ಆತಂಕವನ್ನು ದೂರ ಮಾಡಿದರು, ಅವರ ಅತ್ಯುತ್ತಮ ನಟನೆಯಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡು ನಾಟಕವನ್ನ ಯಶಗೊಳಿಸಿದ್ದಾರೆ. ಟೋಟಲಿ ನಾಟಕವನ್ನು ನೋಡುವ ಪ್ರೇಕ್ಷಕನಿಗೆ ಇದೊಂದು ಬರೀ ಟಕ ಎನಿಸದೆ, ತಮ್ಮ ಕಣ್ಣೆದುರಿಗೆ ನಡೆಯುತ್ತಿರುವ ಘಟನೆ ಎನ್ನಿಸಬೇಕೆಂಬ ಪ್ರಯತ್ನವಾಗಿತ್ತು.

ಇಡೀ ನಾಟಕದ ಆತ್ಮ “ಕೊಂದವರುಳಿದರೇ ಕೂಡಲ ಸಂಗಮ” ಎನ್ನುವ ವಚನ. ಕೊಲೆ ಎನ್ನುವುದು ಕೇವಲ ಕೊಲೆ ಅಲ್ಲ ಬದಲಿಗೆ ಅದು ಮಾನವೀಯತೆಯ ಕೊಲೆ, ನಾವು ನಮ್ಮವರು ಎಂದುಕೊಂಡು ಜಾತಿ,ಧರ್ಮ, ಹಣ‌, ಅಧಿಕಾರದಿಂದ ಮಾಡವ ದರ್ಪದ ಫಲವಾಗಿ ಮಾಡಿಕೊಳ್ಳು ತಮ್ಮ ಆತ್ಮದ ಕೊಲೆ. ಹೀಗೆ ಮನುಷ್ಯ ಒಂದಲ್ಲ‌‌ ಒಂದು ರೀತಿಯಲ್ಲಿ ಕೊಂದು (ತುಳಿದು, ಹತ್ತಿಕ್ಕಿ, ಸ್ವಾರ್ಥಕ್ಕೆ) ಬದುಕುವ ಚಾಳಿಯವನಾಗಿರುವ ಕಾಲದಲ್ಲಿರುವ ನಮಗೆ ಒಂದಷ್ಟು ಆತ್ಮ ವಿಮರ್ಶೆ ಆಗಬೇಕಿದೆ. ಈ ಅಂಶವು ಆಳದಲ್ಲಿ ದಕ್ಕುತ್ತದೆ.

ನಂತರ ಉಳಿದಂತೆ ವ್ಯಂಗ್ಯದ ಮೂಲಕ ಪ್ರೇಕ್ಷಕನನ್ನೂ ಕುಟುಕಿ “ಹೌದಲ್ಲ” ಅನ್ನಿಸುವ ಕೆಲಸ ಈ ನಾಟಕ ಮಾಡುತ್ತದೆ. ಮೂರು ಪದರಗಳಲ್ಲಿ ಈ ನಾಟಕ ದಕ್ಕುತ್ತದೆ. ವ್ಯಂಗ ಭರಿತ ಹಾಸ್ಯವನ್ನು ಖುಷಿ‌ಪಟ್ಟು ನೋಡವ, ಪ್ರಸ್ತುತ ಸಾಮಾಜಿಕ, ರಾಜಕೀಯ ಘಟನಾವಳಿಗಳ ಅರಿವಿರುವ, ಇದತಲ್ಲಿನ್ನ ಮನೋವೈಜ್ಞಾನಿಕ ಅಂಶ ತಿಳಿದಿರುವ ಹೀಗೆ ಮೂರೂ ತರದ ಪ್ರೇಕ್ಷಕರನ್ನು ಬೇರೆ ಬೇರೆ ಆಗಿ ತಲುಪುವುದು ಈ ನಾಟಕದ ವಿಶೇಷ.

‍ಲೇಖಕರು Admin

28 July, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading