ಕು ಸ ಮಧುಸೂದನ
ನೋಡಿ ಮುಗುಳ್ನಕ್ಕು
ಪ್ರೇಮ ನಿವೇದಿಸಿ
ಆಲಂಗಿಸಿ
ಮುದ್ದಿಸಿದ್ದು
ನಿಜ!ನಿಜ!
ಬಿರು ಬೇಸಿಗೆಯ
ಸ್ವಯಂ ನಿರ್ಭಂದಿತ ದಿನದೊಂದು
ಮಧ್ಯಾಹ್ನ.
ಶಬ್ದಗಳ ಭರ್ಜಿಗಳ
ಒಬ್ಬರ ಮೇಲೊಬ್ಬರು ಎಸೆದು
ಪರಸ್ಪರರ ಗಾಯಗೊಳಿಸಿಕೊಂಡಿದ್ದು
ಸಂಬಂಧವನ್ನು ಘಾಸಿಗೊಳಿಸಿದ್ದೂ
ನಿಜ! ನಿಜ!
ಗಾಯದ ಮೆಲೆ ಉಪ್ಪುಸವರುವಂತೆ
ಮತ್ತದೆ ಜಗಳದ ಹಗ್ಗದ
ತುದಿಗಳ ಹಿಡಿದು ಜಗ್ಗಾಡುತ
ಕಾಲು ಜಾರಿ ನೆಲಕ್ಕುರುಳಿಬಿದ್ದು
ಬೆನ್ನಿಗೇಟು ಮಾಡಿಕೊಂಡಿದ್ದೂ
ನಿಜ!ನಿಜ!
ಕೊನೆಗೀಗ
ಅಷ್ಟು ನಿಜಗಳ ನಡುವೆ
ನನ್ನ ನಿಜ ಯಾವುದು
ನಿನ್ನ ನಿಜ ಯಾವುದೆಂಬುದನ್ನು
ಸಾಭೀತು ಪಡಿಸಲು
ಮಾಡಿದ ತಪ್ಪುಗಳ ಪಟ್ಟಿ ಮಾಡಿ
ನಾನು ನಿನ್ನಮುಖಕ್ಕೆ
ನೀನು ನನ್ನ ಮುಖಕ್ಕೆ
ಹಿಡಿದು ಗೆದ್ದ ಭ್ರಮೆಯಲ್ಲಿ
ಬೆನ್ನುತಿರುಗಿಸಿನಡೆದೆವೆಲ್ಲ
ಇದು ಮಾತ್ರ ನಿಜವೆನಿಸುತ್ತಿದೆ.






ಪ್ರೇಮ ನಿವೇದನೆ ಅಷ್ಟು ಸುಲಭವಲ್ಲ..
ಅರಿತು ಬರೆಯೋ ಹೊತ್ತಿಗೆ ಕವಲುದಾರಿ…ತುಂಬಾ ಚೆನ್ನಾಗಿದೆ ಕವಿತೆಯ ಸಾಲುಗಳು….
ತುಂಬಾ ಚೆನ್ನಾಗಿದೆ ಸರ್