ಸುರಿದು ಬಿಡು ಮಳೆಯೇ..
– ಸ್ಮಿತಾ ಅಮೃತರಾಜ್

ಧೋ! ಸುರಿಯುವ ಮಳೆ
ಎಲ್ಲವನ್ನೂ ತೇಲಿಬಿಟ್ಟೆ
ಹುಚ್ಚುಗಟ್ಟಿ ಕೆನೆಯುವ ಆಸೆಗಳನ್ನು
ಹುಚ್ಚುಚ್ಚು ನೂರು ಕನಸುಗಳನ್ನು..
ಹರಳುಗಟ್ಟಿ ಬಿಮ್ಮನೆ
ಕಲ್ಲಾಗಿ ಕುಳಿತಿದೆ ಮನದ
ಬಯಕೆಗಳು
ನಿರ್ದಾಕ್ಷಿಣ್ಯವಾಗಿ ಕಿತ್ತು
ಜಿಟಿಗುಟ್ಟಿ ಸುರಿಯುವ
ಮಳೆಯೆದುರಿಗೇ ಚೆಲ್ಲಿಬಿಟ್ಟೆ
ಕೊಚ್ಚಿ ಹೋಗಬಹುದು
ಬೇಸರವಿಲ್ಲ.
ಅದೃಷ್ಟವಿದ್ದರೆ ಮೆದುಗೊಂಡು
ಯಾವುದೋ ಹೆಸರಿಲ್ಲದ ದಂಡೆಯ
ಮೇಲಿನ ಬಂಡೆಯಡಿಯಲ್ಲಿ ಹುಟ್ಟಿ
ಚಿಗಿತುಕೊಳ್ಳಬಹುದು
ಅದೇ ವಾಸಿ.
ಕಾರಣವಿಲ್ಲದೇ ಬಿಡದೇ ಕಾಡುವ
ಅಸಂಖ್ಯ ಭಾವಗಳಿಗೆ
ಮನಕ್ಕಿಂತ ಮಳೆಯೇ ಸೂಕ್ತ
ಹರಿದಾಡಲು…
ಇಗೋ ಹರಿಯಬಿಟ್ಟೆ
ನಾನು ಖಾಲಿಯಾಗುತ್ತಿದ್ದೇನೆ
ಭಾಗ್ಯವಿದ್ದರೆ ಕಡಲು ಸೇರುತ್ತದೆ
ಮೌನ ಮುಗಿಲಾಗುತ್ತದೆ
ಮತ್ತೆ ಸೂರಿನಡಿಯಲ್ಲಿ
ಮಾತಾಗುತ್ತದೆ.
ಆಗ ನಾನು ಕೇಳಿಸಿಕೊಳ್ಳುತ್ತೇನೆ.






ಕವಿತೆಯಲ್ಲಿ ಭಾವನೆಗಳು ಜಿಗಿಯುತ್ತಿವೆ.ಕಾರಣವಿಲದೆ ಬಿಡದೆ
ಕಾಡುವ ಅಸಂಖ್ಯ ಭಾವನೆಗಳೇ ಮಳೆಯೇ ಸೂಕ್ತ ಚನ್ನಾಗಿದೆ.
ಕವಿತೆಯ ಪ್ರಸ್ತುತಿ ಚೆಂದವಿದೆ.ಹುಚ್ಚುಗಟ್ಟಿ ಕೆನೆಯುವ ಆಸೆಗಳನ್ನು,ಹುಚ್ಚುಚ್ಚು ನೂರು ಕನಸುಗಳನ್ನು, ಹರಳುಗಟ್ಟಿ ಕಲ್ಲಾಗಿ ಕುಳಿತ ಬಯಕೆಗಳನ್ನು ಮತ್ತು ಬಿಡದೆ ಕಾಡುವ ಅಸಂಖ್ಯ ಭಾವನೆಗಳನ್ನು ಹರಿಯ ಬಿಡಲು ಮನಕಿಂತ ಮಳೆಯೇ ಸೂಕ್ತ ಎಂದಿರುವುದು ಒಬ್ಬ ಹೆಣ್ಣಿಗೆ ಎದುರಾಗುವ ಮಳೆಯೇ ಹೆಚ್ಚು ಸಹಕಾರಿ.ಕವಯತ್ರಿ ಇಲ್ಲಿ ಮಳೆಯನ್ನು ಸಾಂಕೇತಿಕವಾಗಿ ಬಳಸಿಕೊಂಡು ಮನದ ಬಯಕೆಗಳನ್ನು ಬಟಾಬಯಲಿಗೆ ಹರಿಯ ಬಿಟ್ಟು ಖಾಲಿಯಗುವ ಸ್ಥಿತಿ ಯಲ್ಲಿ ಮತ್ತೆ ಒಂದು ಆಸೆಯನ್ನು ಹುಟ್ಟಿಸಿಕೊಳ್ಲುತ್ತಾಳೆ.ಭಾಗ್ಯವಿದ್ದರೆ ಕಡಲು ಸೇರುತ್ತದೆ,ಮೌನ ಮುಗಿಲಾಗುತ್ತದೆ.ಮತ್ತೆ ಸೂರಿನಡಿಯಲ್ಲಿ ಮಾತಾಗುವಾಗ ನಾನು ಕೇಳಿಸಿಕೊಳ್ಳುತ್ತೆನೆ ಎನ್ನುವ ಆಕೆಯ ಮಾತು ಕವಿತೆಗೆ ಜೀವತುಂಬಿದೆ.ಕವಿತೆ ಚಿಂತನೆ ಹಚ್ಚುತ್ತದೆ.
thumbaa chennaagide kavithe. suuchya prathimegalu ishtavaaythu.
ಭಾಗ್ಯವಿದ್ದರೆ ಮಾತ್ರ ಏಕೆ!?
ಕವಿತೆಯ ಭಾವ ನದಿ ಖಂಡಿತಾ
ಕಡಲು ಸೇರುತ್ತದೆ
ಮೌನ ಮುಗಿಲಾಗುತ್ತದೆ
ಮತ್ತೆ ಸೂರಿನಡಿಯಲ್ಲಿ
ಮಾತಾಗುತ್ತದೆ.
ಛಂದದ ಕವಿತೆ
ಸೂಪರ್ ಪದ್ಯ.