ಕನ್ನಡ ಟೈಮ್ಸ್ ಮತ್ತು ನಟರಾಜ್ ಹುಳಿಯಾರ್…
ಇಂಥದೊಂದು ಕೊರಗು ಅಥವಾ ಅಸಮಾಧಾನ ನಮ್ಮ ತಲೆಮಾರಿಗೆ ಇರುವುದು ಸಹಜ. ಅದೇನು ಕಾರಣವೋ, ಹಿರಿಯರು ನಮ್ಮ ಚಿಂತನೆಗಳನ್ನ ಒಪ್ಪಿಕೊಳ್ಳುವ ಮನಸ್ಸು ಮಾಡುತ್ತಿಲ್ಲ. ಇಂದಿನ ಪೀಳಿಗೆಯ ಬಹುತೇಕ ಲೇಖಕರು ಯಾವುದೇ ಒಂದು ನಿರ್ದಿಷ್ಟ ಸಿದ್ಧಾಂತಕ್ಕೆ (ಇಸಂ) ಒಳಗಾಗದೆ ಎಲ್ಲೆಲ್ಲಿ ಏನೇನು ಸರಿ ಎಂದು ಕಾಣುತ್ತದೆಯೋ ಆ ಎಲ್ಲ ಒಳ್ಳೆಯ ಅಂಶಗಳನ್ನು ಹೀರಿಕೊಂಡು ನಡೆಯುತ್ತಿರುವುದರಿಂದ ಬಹುಶಃ ಹಿರಿಯರಿಗೆ ‘ಇಂದಿನ ಪೀಳಿಗೆಗೆ ಬದ್ಧತೆ ಇಲ್ಲ’ ಅಂತನಿಸಿರಲಿಕ್ಕೂ ಸಾಕು.
ಆದರೆ….…..ಆದರೆ ಈ ದೂರಿಗೆ ಅಪವಾದವೆನ್ನುವಂತೆ ಹಿರಿಯ ಲೇಖಕ- ವಿಮರ್ಶಕರಾದ ಡಾ. ನಟರಾಜ್ ಹುಳಿಯಾರ್ ಇಂದಿನ ಪೀಳಿಗೆಯ ಸಾಮರ್ಥ್ಯವನ್ನು ಗುರುತಿಸಿ ಅದನ್ನು ಪ್ರೋತ್ಸಾಹಿಸಿ ಬೆಳೆಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಸಂಪಾದಕತ್ವದ ಕನ್ನಡ ಟೈಮ್ಸ್ ಅನ್ನುವ ಪ್ರಗತಿಪರ ಪತ್ರಿಕೆ ತನ್ನ ಆರಂಭದ ದಿನಗಳಿಂದಲೂ ಹೊಸ ತಲೆಮಾರಿನ ಲೇಖಕರನ್ನ ಗುರುತಿಸಿ ಅವರಿಗೊಂದು ‘ಸ್ಪೇಸ್’ ನೀಡುವ ಮೂಲಕ ವೇದಿಕೆ ಒದಗಿಸಿಕೊಟ್ಟಿದೆ. ಅವರನ್ನು ಬರಹ ಲೋಕಕ್ಕೆ ದೊಡ್ಡ ಮಟ್ಟದಲ್ಲಿ ಪರಿಚಯಿಸುವ ಮೂಲಕ ತನ್ನ ‘ಪ್ರಗತಿಪರ’ತೆಯನ್ನು ಸಾಬೀತು ಪಡಿಸಿದೆ.
ಮಾರ್ಚ್ ಎರಡರಂದು ಟೈಮ್ಸ್ ಕನ್ನಡದ ಹುಟ್ಟುಹಬ್ಬವಿತ್ತು. ಅದನ್ನು ಪತ್ರಿಕೆ ಆಚರಿಸಿಕೊಂಡಿದ್ದು, “ಹೊಸತಲೆಮಾರಿನ ಸ್ಪಂದನ” ಮತ್ತು “ಹೊಸ ತಲೆಮಾರಿಗೆ ಹಿರಿಯರ ಸ್ಪಂದನ” ಅನ್ನುವ ವಿನೂತನ ವಿಚಾರ ಸಂಕಿರಣದ ಮೂಲಕ. ಈ ಕಾರ್ಯಕ್ರಮದಲ್ಲಿ ಲೇಖಕರನ್ನಷ್ಟೆ ಅಲ್ಲ, ಯುವ ರಾಜಕಾರಣಿ, ಯುವ ಉದ್ಯಮಿ, ಯುವ ಚಿತ್ರ ನಿರ್ದೇಶಕ ಇವರನ್ನೆಲ್ಲ ಸಂವಾದಕ್ಕೆ ಆಹ್ವಾನಿಸಲಾಗಿತ್ತು. ಇದರಲ್ಲಿ ಭಾಗವಹಿಸಲಿಕ್ಕೆಂದೇ ಬೇರೆಬೇರೆ ಊರುಗಳಿಂದ ಆಸಕ್ತರು ಬಂದಿದ್ದರು, ಮೂರು ಗೋಷ್ಟಿಗಳಲ್ಲಿ ನಡೆದ ಆರೋಗ್ಯಪೂರ್ಣ ಚರ್ಚೆಯಲ್ಲಿ ಪಾಲ್ಗೊಂಡು ತಮ್ಮ ಪ್ರಶ್ನೆಗಳಿಗೆ ಸಮಾಧಾನ ಕಂಡುಕೊಳ್ಳುವ ಯತ್ನ ನಡೆಸಿದರು…
ಇನ್ನು ಉಳಿದಿದ್ದು ರಿಪೋರ್ಟು. ಅದನ್ನ ಬರೆಯೋದು ನನ್ನ ಉದ್ದೇಶವಲ್ಲ.
ಇದನ್ನೆಲ್ಲ ನಾನು ನಿಮ್ಮೊಂದಿಗೆ ಹಂಚಿಕೊಳ್ತಿರೋದಕ್ಕೆ ಕಾರಣವಿದೆ. ಎಷ್ಟೇ ಬ್ಲಾಗ್ ಅಂತೆಲ್ಲ ಮಾಡಿಕೊಂಡರೂ ಪ್ರಿಂಟೆಡ್ ಮೀಡಿಯಾದಲ್ಲಿನ ಪ್ರಕಟಣೆ ಕೊಡುವ ಸುಖವನ್ನು ಅದು ಕೊಡಲಾರದು. (ಇದು ನನ್ನ ಅನಿಸಿಕೆ). ಇಂಥದೊಂದು ಅವಕಾಶ ನನಗೆ ಕೊಟ್ಟಿದ್ದು ಕನ್ನಡ ಟೈಮ್ಸ್. ಬ್ಲಾಗ್ ಲೋಕದಲ್ಲಿ ಅಚ್ಚರಿಯ ವೇಗದಿಂದ ಸಾಗುತ್ತಿರುವ ‘ಅವಧಿ’ಯಲ್ಲಿ ಪ್ರಕಟವಾಗುವ ನನ್ನ ‘ಭಾಮಿನಿ ಷಟ್ಪದಿ’ಗೆ ಕನ್ನಡ ಟೈಮ್ಸ್ ಮುದ್ರಣ ರೂಪ ನೀಡಿ ಪ್ರತಿವಾರ ಪ್ರಕಟಿಸುತ್ತಿದೆ. ನಾನು ಮಾತ್ರ ಅಲ್ಲ, ಇನ್ನೂ ಹಲವಾರು ಯುವ ಲೇಖಕರು ಪತ್ರಿಕೆಯ ಮೂಲಕ ನೆಲೆ ಕಂಡುಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ನಟರಾಜ್ ಹುಳಿಯಾರರ ಕಾಳಜಿ ಮತ್ತು ಪ್ರೀತಿ ಕಾರಣ. ಅದನ್ನು ಮತ್ತೆ ಮತ್ತೆ ಮೆಚ್ಚಿಕೊಳ್ಳುತ್ತ, ಈ ವರದಿಯೂ ಅಲ್ಲದ, ಲೇಖನವೂ ಅಲ್ಲದ, ನಿಮ್ಮೊಂದಿಗೆ ಹೇಳಿಕೊಳ್ಳಲೇಬೇಕು ಅನ್ನುವ ತುಡಿತಕ್ಕೆ ಬಿದ್ದು ಬರೆದ ಬರಹವನ್ನು ಮುಗಿಸುತ್ತಿದ್ದೇನೆ.
ನೀವೂ ವರ್ಷ ಪೂರೈಸಿದ ಕನ್ನಡ ಟೈಮ್ಸ್ ಗೊಂದು ಅಭಿನಂದನೆ ಹೇಳಿಬಿಡಿ.
ಹೇಳ್ತೀರಲ್ಲ?
ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿ
I completely agree. I wish the very best and support to the great things Nataraj is doing. It is an excellent initiative and the effort behind that I’m sure is no less!