ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂತಿ, ನಿನ್ನಪ್ಪ..

 

 

 

ಶೇಖರ ಪೂಜಾರಿ

 

 

 

ಕಂದ..ನೀನ್ ಖುಷಿಯಾಗಿರು. ನಗ್ ನಗ್ತಾ ಇರು. ಜಗತ್ತು ನಿನ್ನನ್ನ ಅಳಿಸೋದಕ್ ನೋಡುತ್ತೆ. ನಿನ್ ಅತ್ತರೆ ಜಗತ್ ನಿನ್ ನೋಡಿ ನಗುತ್ತೆ. ನೀನು ನಕ್ಕರೆ ಜಗತ್ತು ಹೊಟ್ಟೆಕಿಚ್ ಪಡುತ್ತೆ. ಯಾಕಂದ್ರೆ, ನಿನ್ನ ಆ ನಿಸ್ವಾರ್ಥ ನಗುವಲ್ಲಿ ಜಗವನ್ನೆ ಗೆಲ್ಲೋ ಶಕ್ತಿ ಇದೆ.

ನಂಗೊತ್ತಿದೆ ಈ ಜಗತ್ ಹೇಗಿದೆ ಅಂತ. ನಂಗೊತ್ತಿದೆ ನಿನಗೆ ಈ ಜಗತ್ತು ಎಷ್ಟು ಟಫ್ ಕಾಂಪಿಟೇಷನ್ ಕೊಡುತ್ತೆ ಅಂತ. ಯಾಕಂದ್ರೆ ಇದು ಕಾಂಪಿಟೇಷನ್ ಯುಗ.

ನೀನು ಚೆನ್ನಾಗಿ ಓದು. IIT ಪಾಸಾಗು. Google ಕಂಪೆನಿಗೋ, Microsoft ಕಂಪೆನಿಗೋ ಸಿಇಓ ಆಗು. ಕಾಂಪಿಟೇಟಿವ್ ಜಗತ್ತನ್ನ ಗೆಲ್ಲು ಅಂತ ಒತ್ತಡ ಹಾಕಲ್ಲ.

ಆದರೂ ನನ್ನದೊಂದು ಸ್ವಾರ್ಥವಿದೆ. ನೀನು ಗೆಲ್ಲಲೇಬೇಕು ಅನ್ನೊ ಮಹದಾಸೆ ಇದೆ. ಆದ್ರೆ ಅದು ಎಗ್ಸಾಂ ಅನ್ನೋ ಕೊಠಡಿಯಲ್ಲಿನ ಮೂರು ಗಂಟೆಯಲ್ಲಿ ಅಲ್ಲ.. ಹಣಗಳಿಕೆಯ ಹಾದಿಯಲ್ಲೂ ಅಲ್ಲ. ಪ್ರೀತಿಯಲ್ಲಿ.

ನಿನಗೆ ಎಗ್ಸಾಂನಲ್ಲಿ, ಸ್ಕೂಲಲ್ಲಿ, ಕಾಲೇಜುಗಳಲ್ಲಿ, ಕೆಲಸದಲ್ಲಿ, ಎಲ್ಲಾ ಕಡೆ ಸ್ಪರ್ದಿಗಳು ಇರ್ತಾರೆ. ಅದ್ರೆ ಜಗತ್ತನ್ನ ನಿಸ್ವಾರ್ಥತೆಯಿಂದ ಪ್ರೀತಿಸೋ ಹಾದಿಯಲ್ಲಿ ಸ್ಪರ್ಧಿಗಳೆ ಇಲ್ಲ. ಯಾಕಂದ್ರೆ ಜಗತ್ತಿನಲ್ಲಿ ಪ್ರೀತಿಯಿಂದ ಮಾತಾಡೋರು ಸಿಗೋದು ತುಂಬಾ ಕಡಿಮೆ. ಈ ಜಗತ್ತಿನಲ್ಲಿ ಹಣಕ್ಕೆ ಕೊರತೆ ಇಲ್ಲ. ಆಸ್ತಿ ಅಂತಸ್ತಿಗೆ ಕೊರತೆ ಇಲ್ಲ. ಸಂಪತ್ತಿಗೂ ಕೊರತೆ ಇಲ್ಲ. ವಿಜ್ಞಾನ ತಂತ್ರಜ್ಞಾನಕ್ಕೂ ಕೊರತೆ ಇಲ್ಲ. ಕೊರತೆ ಇರೋದು ಮಾನವೀಯತೆಗೆ. ಆ ಮಾನವೀಯತೆಗೆ ಒಡೆಯ ನೀನಾಗು. ಜಗತ್ತಿಗೆ ಖುಷಿ ಹಂಚುವ ಕಾಯಕ ನೀ ಮಾಡು.

ಇಡೀ ಜಗತ್ತನ್ನ ನೀನು ಉದ್ಧರಿಸು. ಎಲ್ಲರ ಬದುಕನ್ನೂ ನೀನು ಬದಲಾಯಿಸು ಎಂದೂ ನಾನು ಹೇಳಲಾರೆ. ಯಾಕಂದ್ರೆ ನಮ್ಮ ಹಣದಲ್ಲಿ ಐಶಾರಾಮಿ ಜೀವನ ನಡೆಸೋರೆ ನಮ್ಮ ಜನರ ಬದುಕನ್ನು ಬದಲಾಯಿಸುತ್ತಿಲ್ಲ. ಜಗತ್ತನ್ನ ಬದಲಿಸಲಾಗದಿದ್ದರೂ, ನಿನ್ನನ್ನೇ ಜಗತ್ತು ಎಂದುಕೊಂಡವರ ಬದುಕನ್ನು ಬದಲಿಸು ಸಾಕು.

ಇಡೀ ಸಮಾಜವನ್ನು ಬದಲಿಸು ಎಂದು ಹೇಳಿದರೆ ಅದು ಅಸಾಧ್ಯವಾಗಬಹುದೇನೋ.. ಆದರೆ ಕನಿಷ್ಟ ನಿನ್ನ ಸುತ್ತಮುತ್ತಲಿರುವ ಜನರ ಬದಕಿಗೆ ಆಸರೆಯಾಗು.

ಇಷ್ಟೆಲ್ಲಾ ಹೇಳುವಾಗ ನೀನು ಕೇಳಬಹುದು. ಹಾಗಿದ್ರೆ ನನ್ನನ್ನು international school ನಲ್ಲಿ ಓದಿಸು. Foreign university ನಲ್ಲಿ ಓದಿಸು ಅಂತ. ಖಂಡಿತ ನಿನ್ನನ್ನು ಓದಿಸುತ್ತೇನೆ. ಅದು Oxford universityನಲ್ಲಿ ಅಲ್ಲದೆ ಇರಬಹುದು. ಆದ್ರೆ ಉತ್ತಮ ಶಿಕ್ಷಣ ನೀಡೋದ್ರಲ್ಲಿ ಹಿಂದೇಟು ಹಾಕಲ್ಲ.

ನೀನು Science, Mathematics ನಲ್ಲಿ 100 or 99 ತಗೋಳ್ಳೋ ಥರ ನಾನು ನಿನಗೆ ಮನೆ ಪಾಠ ಹೇಳಿಕೊಡದೇ ಇರಬಹುದು. ಆದ್ರೆ ಬದುಕಿನ ಪಾಠವನ್ನ, ಬದುಕನ್ನು ಎದುರಿಸುವ ಆತ್ಮಸ್ಥೈರ್ಯದ ಪಾಠವನ್ನ ನಾನು ನಿನಗೆ ಖಂಡಿತ ಹೇಳಿಕೊಡುತ್ತೇನೆ.

ನನಗೆ ಗೊತ್ತಿದೆ. ಮೂರು ಗಂಟೆಯ ಪರೀಕ್ಷೆ, ಪೇಪರ್ ಮೇಲಿನ ಅಂಕ ಯಾರ ಬದುಕನ್ನು ನಿರ್ಧರಿಸಲ್ಲ. ನಿನ್ನನ್ನು ಆ ಕಠಿಣ ಬಂಧನದಲ್ಲಿ ನೂಕೋದೂ ಇಲ್ಲ.

ಯಾಕಂದ್ರೆ ಜಗತ್ತನ್ನ ಗೆಲ್ಲೋದು ಕಾಗದದ ಮೇಲೆ ಬರೆಯೋ ಪರೀಕ್ಷೆಗಳಿಂದಲ್ಲ.. ಮಾನವೀಯತೆ, ಪ್ರೀತಿಯನ್ನ ಹಂಚೋದ್ರಿಂದ.

ಕೊನೆಯದಾಗಿ ಒಂದು ಮಾತು. ನೀನು ಈ ಜಗತ್ತಿಗೆ ಏನೇ ಕೊಟ್ಟರೂ ಅದಕ್ಕೆ ಪ್ರತಿಫಲವನ್ನ ನಿರೀಕ್ಷಿಸಬೇಡ. ಯಾಕಂದ್ರೆ ಜಗತ್ತು ಎಲ್ಲವನ್ನೂ ಮರೆತುಬಿಡುತ್ತೆ. ಸ್ವತಂತ್ರ ತಂದು ಕೊಟ್ಟ ಗಾಂಧಿಯನ್ನೇ ಏನು ಮಾಡಿದನಾತ ಎಂದು ಪ್ರಶ್ನಿಸಿದರು. ಅಂದು ದೇಶಕ್ಕಾಗಿ ಹೋರಾಡಿ ಮಡಿದವರನ್ನೇ ಜನ ಮರೆತು ಬಿಟ್ಟರು. ಹಗಲಿರುಳು ನಮ್ಮನ್ನು ಕಾಯೋ ಸೈನಿಕರ ಮೇಲೆಯೇ ಕರುಣೆ ಇಲ್ಲದೇ ಕಲ್ಲು ಬೀಸಿವರು. ಇಂಥಾ ಜಗತ್ತಿನಲ್ಲಿ ನೀನು ಪ್ರತಿಫಲ ನಿರೀಕ್ಷಿಸಬೇಡ. ಜಗತ್ತು ನಿನಗೆ ಏನೂ ಕೊಡಲ್ಲ. ಆದ್ರೆ ನೀನು ಜಗತ್ತಿಗೆ ಕೊಡಬೇಕಾದದ್ದನ್ನ ಮರೀಬೇಡ.

ಅಪ್ಪಾ..ನನಗಿನ್ನೂ ಎರಡೇ ವರ್ಷ.. ಈಗಲೇ ಬದುಕಿನ ಹಾದಿಯ ಏಳುಬೀಳುಗಳನ್ನ ನಿಭಾಯಿಸೋದು ಹೇಗೆ ಅಂತ ಹೇಳ್ತಾ ಇದೀರಿ. ಬಹಳ ದೊಡ್ಡ ಜವಾಬ್ದಾರಿಗಳನ್ನ ನಿನಗೆ ವಹಿಸ್ತಾ ಇದೀರಿ ಅಂತ ನೀನು ಕೇಳಬಹುದು. ನೀನು ಆಶ್ರಯ ನೀಡೋ ಹೆಮ್ಮರವಾಗಬೇಕಂದ್ರೆ ಈಗಲೇ ನೀರೆರೆಯಬೇಕು ಅಲ್ವಾ?

I am sorry.. ಆಫೀಸು ಆಫೀಸು ಅಂತ ನಿನ್ ಜೊತೆ ಜಾಸ್ತಿ ಟೈಂ ಕಳೆಯೋಕೆ ಆಗದೇ ಇರಬಹುದು. ನನ್ನ ಮಗನಾಗಿ ನಿನಗೆ ಜವಾಬ್ದಾರಿ ವಹಿಸಿದಂತೆ, ನನ್ನಪ್ಪ ನನಗೂ ಒಂದಷ್ಟು ಜವಾಬ್ದಾರಿ ವಹಿಸಿದ್ದಾರೆ. ಅದನ್ನು ಪೂರ್ಣಗೊಳಿಸಬೇಕಲ್ವಾ?

ಇನ್ಮುಂದೆ ಸಾಧ್ಯವಾದಷ್ಟು ಸಮಯ ನಿನ್ನ ಜೊತೆ ಕಳೀತೀನಿ. Promise. ಯಾಕಂದ್ರೆ ನನ್ನದೇ ಆದ ಜಗತ್ತಿನಲ್ಲಿ, ನೀನು ಬಂದೆ. ಈಗ ನೀನೇ ಜಗತ್ತಾಗಿದೀಯಾ..!!

ನನ್ನ ಪ್ರೀತಿ.. ನನ್ನ ಹಾರೈಕೆ.. ಸದಾ ನಿನ್ನೊಂದಿಗಿರುತ್ತೆ.

Happy birthday ಮಗನೆ..
God bless u..
ಖುಷಿಯಾಗಿರು..

ಇಂತಿ
ನಿನ್ನಪ್ಪ

‍ಲೇಖಕರು avadhi

30 December, 2017

1 Comment

  1. Anasuya M R

    ಅಪರೂಪದ ಆಶಯಗಳು ಧ್ವನಿತವಾಗಿರುವ – ಇಂತಿ ನಿನ್ನಪ್ಪ ಮನ ಮುಟ್ಟಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading