
ರಾದ
ಕೋಳಿಕ್ಕೋಡ್ ನ ಒಬ್ಬ ಹೈಸ್ಕೂಲ್ ಮೇಷ್ಟ್ರು ತಮ್ಮದೇ ಆದ ರೀತಿಯಲ್ಲಿ ದೇಶವನ್ನು ಕಲಕಿ ಹಾಕಿದ್ದಾರೆ.
ಅದನ್ನು ‘ಅವಧಿ’ ಪ್ರಕಟಿಸಿ ತನ್ನ ಸಾಮಾಜಿಕ ಕಾಳಜಿ ಮೆರೆದಿದೆ.
ಆ ರಾತ್ರಿ ಹೊಸಕೋಟೆಯ ಮನೆಯಲ್ಲಿ ಚಂದ್ರಕಾಂತ ವಡ್ಡು ರವರ ‘ನಾರಿಹಳ್ಳದ ದಂಡೆಯಲ್ಲಿ’ ಕಥಾ ಸಂಕಲನ ಪುಟಗಳನ್ನು ತಿರುಚುತ್ತಿದ್ದೆ. ವಾಟ್ಸಪ್ಪ್ ಗ್ರೂಪ್ನಲ್ಲಿ ಒಂದು ವಿಷಯದ ಬಗ್ಗೆ ಬಿಸಿ ಚರ್ಚೆ ಶುರುವಾಗಿತ್ತು. ವಿಷಯ ತಿಳಿಯಲು ಕಣ್ಣಾಡಿಸಿದಾಗ ಮನುಕುಲವೇ ತಲೆತಗ್ಗಿಸುವಂತ ಘಟನೆ ಜರುಗಿತ್ತು.
ಕಾಳಹಂಡಿಯ ಬುಡಕಟ್ಟಿನ ಮನುಷ್ಯ ತನ್ನ ಹೆಂಡತಿಯ ಹೆಣವನ್ನು ಹೆಗಲ ಮೇಲೆ ಹೊತ್ತು ಹೊರಟ ವಿಷಯ ನನ್ನ ಕಣ್ಣು ಕುಕ್ಕಿತೋ, ನನ್ನೆದೆಯೊಳಗಿದ್ದ ಜಾಗೃತಿಯ ಲಹರಿ ಗರಿಗೆದರಿ, ರೆಪ್ಪೆಯೊಳಗೆ ಅಡಗಿದ್ದ ಕರುಣೆಯ ಮಡಕೆಯು ಮುಕ್ಕಾಗಿ ಕಣ್ಣಂಚಿನಿಂದ ನಾಲ್ಕು ಹನಿಗಳು ನನಗೆ ತಿಳಿಯದಂತೆ ಜಾರಿ ಬಿದ್ದಿದ್ದವು. ಎಷ್ಟು ಪ್ರಯತ್ನ ಪಟ್ಟರೂ ನಿದ್ರೆಯಂಬ ಮಾಯಾಂಗಿ ಹತ್ತಿರ ಸುಳಿಯಲೇ ಇಲ್ಲ. ಎದ್ದು ಕುಳಿತು ಡೈರಿಯಲ್ಲಿ ಬರೆಯುತ್ತ ಕುಳಿತಾಗ ಮೂಡಿದ್ದೇ ಈ ಶೋ’ಕವನ’.
ಆಸ್ಪತ್ರೆ ಎಂಬ ಶವಾಗಾರದಲ್ಲಿ,
ಕ್ಷಯ ರೋಗ ಬಡಿದು ಸಾವಿನ ಮಂಚದ ಅಂಚಿನಲ್ಲಿದ್ದಳು ಅಮ್ಮ.
ಅವಳ ಕೊನೇ ಕ್ಷಣದ ಈ ದುಸ್ಥಿತಿಯನ್ನು ಕಂಡು ಕೊರಗುತ್ತಿದ್ದಳು ಕೆಳಗೆ ಕುಳಿತ ಕಂದಮ್ಮ.
ಕೋಣೆಗಳ ಸುತ್ತಿ ತಾಯಿಯ ಉಳಿಸುವಂತೆ ಬೇಡಿಕೊಂಡರೂ,
ಕಿವಿಗೊಡಲಿಲ್ಲ ವೈದ್ಯರು.
ಉಸಿರಾಡದ ದೇಹವನ್ನಾದರೂ ಸಾಗಿಸಲು ಸಹಾಯಕ್ಕೆ ಚಾಚಿದರೆ,
ಮುಖ ತಿರುಗಿಸಿ ಕ್ರೂರ ಗೊಂಬೆಗಳಂತೆ ನಿಂತಿದ್ದರು ಜನರು.
ಸುತ್ತ ಚಲಿಸುತ್ತಿದ್ದ ನೂರಾರು ವಾಹನಗಳ ಸಪ್ಪಳ ಕಿವಿಗಳ ಹೊಕ್ಕಿದರೂ,
ಅದರೊಳಗಿದ್ದ ಅಧಿಪತಿಗಳು,
ಜಾಣ ಕಿವುಡು-ಮೂಕರಾಗಿದ್ದರು.
ಹೆಣಕ್ಕೆ ಬಟ್ಟೆ ಸುತ್ತಿ ಭುಜದ ಮೇಲೆ ಸಾಗಿಸಿದ ದೃಶ್ಯ,
ಎಲ್ಲರ ಮನ ಕಲುಕುವಂತ್ತಿತ್ತು,
ಹಿಂಬಾಲಿಸುತ್ತಿದ್ದ ಮಗಳ ಕಣ್ಣೀರು,
ದಾರಿಯ ಉದ್ದಕ್ಕೂ ಮೈಲುಗಳ ಲೆಕ್ಕವಿಡುತ್ತಿತ್ತು.
ಚಟ್ಟದ ಅಲಂಕಾರವಿಲ್ಲ, ತಮಟೆಯ ಸದ್ದಿಲ್ಲ.
ಮೊಸಳೆ ಕಣ್ಣೀರಿಲ್ಲ, ಮಳೆ-ಬಿಸಿಲಿನ ಪರಿವಿಲ್ಲ.
ಗಂಡನ ದಣಿವಿನ ಬೆವರಿದ್ದು, ಮಗಳ ಶೋಕದ ದನಿವಿದ್ದು,
ಪಂಚ ಭೂತಗಳ ಸೇರಲು ಯಾರಪ್ಪನ ಅಪ್ಪಣೆಯೂ ಬೇಕಿಲ್ಲ.
ಹಣವಿಲ್ಲದ ಜನರೇ ಕಾಲ ಕಸವಾಗಿರುವಾಗ ,
ನೆಲದೊಳಗೆ ಕೊಳೆಯುವ ಬಡ ಹೆಣಕ್ಕೆ ಬೆಲೆಕೊಡುವುದುಂಟೆ?
ಸ್ವತಂತ್ರ ಭಾರತದ ದಿವ್ಯ ಸಾನಿಧ್ಯದಲ್ಲಿ,
ಧೀನ-ದಲಿತರ ಕಣ್ಣೀರ ಒರೆಸುವುರುಂಟೆ?





0 Comments