ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಸಿಫಾಗೆ ಎಚ್ ಎಸ್ ಶಿವಪ್ರಕಾಶ್ ಕವಿತೆ

ಆಸಿಫಾಗೆ..

ಎಚ್ ಎಸ್ ಶಿವಪ್ರಕಾಶ್ 

 

ದಂಡಿಗ್ಹೋದ ಸವಾರರೆಲ್ಲ ಮನೆಗೆ ತಿರುಗಿಬರುವರು
ತಮ್ಮ ತಮ್ಮ ಕುದುರೆ ಜೋಡಿ
ಒಂದಲ್ಲ ಒಂದು ದಿವಸ

ಕಡಲಿಗ್ಹೋದ ಬೆಸ್ತರೂ ತಿರುಗಿಬರುವರು
ತಮ್ಮತಮ್ಮ ಮನೆಗೆ
ತಮ್ಮ ತಮ್ಮ ದೋಣಿಯಲ್ಲಿ
ಒಂದಲ್ಲ ಒಂದು ದಿವಸ

ಕುದುರೆ, ದನ, ಕುರಿಯ ಹಿಂಡು ಮೇವಿಗಾಗಿ
ಹೊಲ_ ಕಾಡಿಗೆ ಹೋದವೆಲ್ಲ
ತಿರುಗಿ ಮನೆಗೆ ಬರುವವು
ಒಂದಲ್ಲ ಒಂದು ದಿವಸ

ತನ್ನ ಕುದುರೆ ಮೇಸಲೆಂದು
ಕಾಡಿಗ್ಹೋದ ಪುಟ್ಟಿ ತಿರುಗಿ ಬಾರಳೆ
ಒಂದಲ್ಲ ಒಂದು ದಿವಸ
ಕುದುರೆಗಳು ಮನೆಗೆ ತಿರುಗಿ ಬಂದಮೇಲೂ?

ಶಾಲೆಗೆಂದು ಹೋದ ಹುಡುಗಿ,
ಸಾಕುನಾಯ ಕೂಡಿಕೊಂಡು ವಾಕಿಂಗಿಗೆ ಹೋದ ಹುಡುಗಿ
ತಿರುಗಿ ಬಾರರೆ
ನಾಯಿ ಮನೆಗೆ ಬಂದ ಮೇಲೂ?

ಎಚ್ಚರಾಗು
ಎಚ್ಚರಾಗು ನಿದ್ದೆ ಹೋದ ನೆಲದ ತಾಯಿ
ನಿನ್ನ ಕಾಡು ನಾಡಿನಲ್ಲಿ
ಎಳೆಯದಾದ ಎಲ್ಲವನ್ನು ಚಲುವಾದ ಎಲ್ಲವನ್ನು
ಕಾಲಿನಿಂದ ಹೊಸಕಿಹಾಕಿ,
ಕೈಗಳಿಂದ ತರಿದು ತರಿದು
ಉಗುರಿನಿಂದ ಸಿಗಿಗದು ಬಗೆದು
ಹಲ್ಲಿನಿಂದ ಅಗಿದುಜಗಿದು ತಿನ್ನುವಂಥ
ಹೊಸರಾಕ್ಷಸನೊಬ್ಬ ನುಸುಳಿ
ಹೊಂಚು ಹಾಕುತಿರುವನು

ನಮ್ಮೆದೆಗಳ ಮಷಾಣದಲ್ಲಿ ಹೂತು ಹೋದ ನೆಲದ ತಾಯೆ
ಮರುಜನ್ಮದ ಗಳಿಗೆ ನಿನಗೆ

‍ಲೇಖಕರು avadhi

19 April, 2018

3 Comments

  1. ಡಿ.ಎಮ್.ನದಾಫ್

    ಅಪ್ಪಟ ಸರಳ ಭಾಷೆಯಲ್ಲಿ ನಿರ್ಭಾವುಕ ನುಡಿನಮನದ ಮೂಲಕ ಭಾರತಾಂಬೆಯನ್ನು ರೂಪಕದಲ್ಲಿ ಕಡೆದು ನಿಲ್ಲಿಸಿದ ಕವಿಗೆ ಚಿರಋಣಿಯಾಗಿಇರುವೆ.

  2. Nasrin

    Realy heart touching. …

  3. Asha Hegde

    ಹೃದಯಸ್ಪರ್ಶಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading