ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಕಾಶದಲ್ಲೊಂದು ಚಿಗುರು..

ನಾ ದಿವಾಕರ್ 
ಪುರುಷೋತ್ತಮ ಬಿಳಿಮಲೆ ಅವರ ಫೇಸ್ ಬುಕ್ ಗೋಡೆಯಲ್ಲಿದ್ದ ಭಾವಚಿತ್ರದ ಸುತ್ತ ಹೆಣೆದ ಅಕ್ಷರ ಸಾಲು 
ಅತ್ತ ಬಾನಂಚಿನಲಿ
ಬಾನಾಡಿಗಳಂಗಣದ ನಡುವೆ
ಏನೋ ಕಾಣುತ್ತಲುಂಟು ;
ಕತ್ತಲೆ ಸರಿಯುತಿದೆ
ಬೆಳಕು ಮರೆಯಾಗುತಿದೆ
ಹಣತೆ ಹಚ್ಚಿದವರಾರೋ
ದೀಪ ನಂದಿಸಿದವರಾರೋ
ಹೆಜ್ಜೆಯ ಸದ್ದೂ ಮೌನ !
ಹಸಿದ ಒಡಲೋ
ನೆತ್ತರು ಬಸಿದ ಕಡಲೋ
ಸತ್ತ ಪ್ರಜ್ಞೆಯ ಮಡಿಲಿಗೊಂದು
ತೊಗಲು ಜೀವ ;
ಸಮಾಧಿಗೂ ಬದುಕುಂಟು
ಮಸಣದಲು ಸದ್ದುಂಟು
ಮತ್ತೇಕೆ ದುಗುಡ
ಒತ್ತರಿಸಿದ ದುಃಖ
ಬಿತ್ತರಿಸದಿರಲೇಕೆ ?
ಅಲ್ಲೊಂದು ಕುಸುಮ
ಕುಸುಮದಂಚಿನ ಹೊನಲು
ಅಂಚಿನಾಚೆಗಿನ ಕನಸು
ಕಾಣ್ಕೆಗಳ ಮೆರವಣಿಗೆ ;
ಖಂಡಾಂತರದ ಕೂಸು
ಅಖಂಡತೆಯ ಬಾಣಲೆಯಲಿ
ಕಾಣದ ಹೆಜ್ಜೆಗಳನರಸಿ
ಏಕಾಂತತೆಯ ಭಂಗಿ !

ಕಣ್ಣ ಬಣ್ಣಕೆ ಮಣಿದ
ಮಣ್ಣ ಕಣ
ಹೆತ್ತೊಡಲಿನಂತೆ ಕಣಾ
ಮೆತ್ತುತವೆ ಹೆಜ್ಜೆಯಡಿಗೆ ;
ಹಸಿದ ಕಂಗಳೋ
ಅಮ್ಮನಿತ್ತ ತಂಗಳೋ
ಎಲುಬುಗಳ ರಂಗೋಲಿ
ಜೀವಂತಿಕೆಗೆ ಸಾಕ್ಷಿ !
ಮಣ್ಣತ್ತ ಬಾನತ್ತ
ಅತ್ತಿತ್ತಲಾಡುತ್ತ
ಬೆತ್ತಲಾಗುವ ಮುನ್ನ
ಕತ್ತಲೆಯ ಸರಿಸುತ
ನಡೆ ;
ಕಂದರಗಳ ತೊರೆದು
ಹಂದರಗಳನರಸಿ
ಬಿತ್ತ ಚಿತ್ತವ ನೆನೆದು
ಮುತ್ತನರಸುತ
ನಡೆ !
ನೆಲದಡಿಯ ಮಸಣ
ಜಗದಗಲ ವ್ಯಸನ
ಎದೆಯ ಹಂದರದಿ
ಜೀವೋದ್ಯಾನ ;
ಜೀವಂತಿಕೆಗೆ
ಮಾಂಸ ಖಂಡವದೇಕೆ
ಬದುಕೇ
ಒಂದು ಪ್ರಶ್ನೆ !
ನೆಟ್ಟ
ನೋಟವಿದೋ
ತಂಬೆಲರ
ಚಿಗುರೆಲೆಯಲಿ ;
ಅತ್ತಣ
ಲೋಕದಂಚಿನ
ಕುಸುಮ
ಚಿಗುರೆಲೆಯ
ನರ್ತನ !

‍ಲೇಖಕರು Avadhi

26 December, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading