
ರಾಜೇಂದ್ರ ಪ್ರಸಾದ್
ಕಳಿಬೇಕುಂದ್ರೆ ಎದೆ, ಮೆದ್ಲು ಇಂದವ ಕಳಿಬೇಕು..!!
ಕೆಲದಿನಗಳ ಹಿಂದೆ ಗೆಳೆಯರೊಬ್ಬರು ಒಂದು ಪ್ರಸಂಗ ಹೇಳಿದರು. ಯಾರೆಂದು ನೆನೆಪಾಗುತ್ತಿಲ್ಲ. ಒಮ್ಮೆ ಯಾರೋ ಕೋಟಗಾನಹಳ್ಳಿ ರಾಮಯ್ಯನವರಲ್ಲಿ ‘ಮಂಟೇಸ್ವಾಮಿ ಸಿದ್ದಪ್ಪಾಜಿಯನ್ನು ಹನ್ನೆರಡು ವರುಷ ಕಾಳಿಂಗನ ಗವಿಯಲ್ಲಿ ಕೂಡಿ ಹಾಕಿ ಅವನ ಅಹಮ್ಮು, ಅಜ್ಞಾನ ತೆಗೆದು ಹಾಕಿದ ಮೇಲೂ ಮತ್ತೆ ಮತ್ತೆ ಪರೀಕ್ಷೆ ಮಾಡುವುದು ಯಾವುದಕ್ಕೆ ‘ ಎಂದು ಕೇಳಿದರಂತೆ ಅದಕ್ಕೆ ರಾಮಯ್ಯನವರು ‘ಅಷ್ಟು ಸುಲಭವಾ! ಈ ಉತ್ತಮ್ರು ಜಾತಿಗರ ಜಾತಿ ಕಳೆಯೋದು … ಕಳಿಬೇಕುಂದ್ರೆ ಎದೆ, ಮೆದ್ಲು ಇಂದವ ಕಳಿಬೇಕು.
ಮಾತ್ ಮಾತುಗು ನನ್ ಜಾತಿಗ್ರು ನನ್ ಜಾತಿಗ್ರು ಅನ್ನೋ ಸಿದ್ದಪ್ಪಾಜಿ ಎಲ್ಲಾ ನನ್ನೋರು ಅನ್ನೋವರ್ಗು ಮಂಟೇಸ್ವಾಮಿ ಬುಡುವಲ್ಲ. ಅದಕ್ಕೆ ಅವಂಗ ಅಷ್ಟು ಕಾಡಿಸದು, ಪೀಡಿಸದು’ ಅಂದರಂತೆ.

ಕಳೆದ ಏಳು ತುಂಬಿ ಎಂಟು ವರುಷದಿಂದ ದಿನಕ್ಕೆ 3-4 ಗಂಟೆಕಾಲ ಮಂಟೇಸ್ವಾಮಿ ಕಾವ್ಯದಲ್ಲೇ ಮುಳುಗಿ ಅದರ ಆಳ-ಅಗಲ ಅಳೀತಾ, ಕಟ್ಟಿರೋ ರೂಪಕ, ಪ್ರೆತಿಮೆಗಳನ್ನ ಒಡೆದು ಅರ್ಥೈಸಿಕೊಳ್ಳುತ್ತಾ … ಪ್ರತಿ ಬಾರಿಯೂ ಮೊದಲಿನದಕ್ಕಿಂತ ಹೆಚ್ಚೇ ರೋಮಾಂಚನಗೋಳ್ತಾ ಇದ್ರು… ಹಾಡೋಕೆ ಸ್ವರ ಎತ್ತಿದರೆ ಕಾವ್ಯದ ಸೊಲ್ಲಿನ ಸೂಲು ಮಾತ್ರ ದಕ್ಕೋದಿಲ್ಲ. ಇಡೀ ಕಥೆಯನ್ನ ಹಗಲೂ ಇರುಳು ವಿವರಿಸ್ತಾ ಹೋಗಬಲ್ಲೆ. ಅದು ನನ್ನಂತ ಮಗನ ದಾರಿಯಲ್ಲ. ಆದರೆ ಇವತ್ತು ನನ್ನ ದಾರಿ ಯಾಕೆ ಸಿಕ್ತಿಲ್ಲ ಅಂದುಕೊಂಡಾಗ ರಾಮಯ್ಯ ಹೇಳಿದ ಮಾತೇ ಮಾರ್ದನಿಸಿಬಿಟ್ಟಿತು.
ಅವನೇ ಬಂದು ದಾರಿ ತೋರುವ ವರೆಗೂ ಸಿಕ್ಕಿದ ದಾರಿಯಲ್ಲಿ ನಡೆಯುವುದು ಮಾತ್ರ ಬಿಡುವುದಿಲ್ಲ. ಯಾಕಂದರೆ ನಾನು ನಿಲ್ಲುವ ಒಕ್ಕಲಿನವಲ್ಲ.. ಜಂಗಮರ ಜೋಡು ಮೆಟ್ಟಿದವನು.






0 Comments