ಕವಿತೆ ಮಗು ಹೆರುವ ಹೊತ್ತು…
ಮೋಹನ್ ವಿ ಕೊಳ್ಳೆಗಾಲ
ಬರೆಯುವ ರೋಗದಿಂದ ಮುಕ್ತಿ ಪಡೆದು
ಚೆಲ್ಲಿಕೊಳ್ಳಬೇಕಾಗಿದೆ ವಿಶ್ವಕ್ಕೆ
ಬಗೆದುಕೊಂಡ ಹೃದಯಗಳಿಗೆ ನಲಿವಾಗಿ
ನೊಂದವರಿಗೆ
ಸಾಂತ್ವನವಾಗಿ ನಿಲ್ಲಬೇಕಾಗಿದೆ
.
ಅಕ್ಷರಗಳಲ್ಲಿ ಹಿಡಿದಿಟ್ಟ ಭಿಕ್ಷುಕರಿಗೆ
ಕೈಚಾಚಿ ನೀಡಬೇಕಾಗಿದೆ
ಹಾದರಕ್ಕೆ ಹುಟ್ಟಿದ ಭಾವನೆಗಳನ್ನು
ಅಂಗಳಕ್ಕೆ
ತಂದು ಹರಡಬೇಕಾಗಿದೆ
.
ಕವಿತೆಯೊಳಗಿನ ಅನಾಥ ಮಕ್ಕಳಿಗೆ
ತುತ್ತು ಮಾಡಿ ತಿನ್ನಿಸಿ
ಆಗಸ ದಿಟ್ಟಿಸಿ ಮಂಕಾದ
ಜೀವಗಳ
ತಲೆ ಸವರಬೇಕಾಗಿದೆ
.
ಚೋಮನ ದುಡಿ ಭಾರಿಸಿ
ಮಾಚನೊಡನೆ ನಿಂದು
ಹೋರಾಡಬೇಕಿದೆ
ಗುಂಡಿಗೆದೆ ಕೊಟ್ಟವರ
ಮಡದಿಗೆ ಮಗನಾಗಿ ನಿಲ್ಲಬೇಕಿದೆ
.
ಮೊನ್ನೆ ಮೊನ್ನೆ ಬಡವರ ಬೀದಿಗಳಿಗೆ
ಹೋಗಿದ್ದೆ, ಕವಿತೆ ಹಂಚಲು
ಎಲ್ಲರೂ ಬುಟ್ಟಿಗೆ ಕೈಯಿಟ್ಟು
ಅವರೆಕಾಯಿ ಆದಂತೆ ಅವರವರ
ನೋವ ಆಯ್ದುಹೋದರು
.
ಬರೆದು ಬರೆದು ಎಸೆದ ಹಾಳೆಗಳ
ಮೇಲಿನ ಪದಗಳೊಳಗೆ
ಅವಿತು ಕುಳಿತ ನೋವುಗಳಿಗೆ
ತಂಪೆರೆದು
ನಾನಿದ್ದೇನೆ ಎಂದು ಹೇಳಬೇಕಾಗಿದೆ







ಬರೆದು ಬರೆದು ಎಸೆದ ಹಾಳೆಗಳ
ಮೇಲಿನ ಪದಗಳೊಳಗೆ
ಅವಿತು ಕುಳಿತ ನೋವುಗಳಿಗೆ
ತಂಪೆರೆದು
ನಾನಿದ್ದೇನೆ ಎಂದು ಹೇಳಬೇಕಾಗಿದೆ
ಉತ್ತಮ ಸಮಾಜಮುಖಿ ಕವಿತೆ. ಪ್ರತಿಯೊಬ್ಬ ಕವಿಯೂ ಓದಬೇಕು!
ಬರೆದು ಬರೆದು ಎಸೆದ ಹಾಳೆಗಳ
ಮೇಲಿನ ಪದಗಳೊಳಗೆ
ಅವಿತು ಕುಳಿತ ನೋವುಗಳಿಗೆ
ತಂಪೆರೆದು
ನಾನಿದ್ದೇನೆ ಎಂದು ಹೇಳಬೇಕಾಗಿದೆ – ಚೆನ್ನಾಗಿದೆ ಕವಿತೆ… ಅರ್ಥಗರ್ಭಿತ…