ಅಮರೇಶ ಗಿಣಿವಾರ
ಅವರಿಗೆ ಚಿನ್ನದ ಪದಕ ಕೊಟ್ಟರು,
ನಮಗೆ ಬಟ್ಟೆ ಸುತ್ತಿದ ಶವಗಳನ್ನು ಕೊಟ್ಟರು,
ಬೀದಿರಕ್ತದಲಿ ಹದ್ದಿದ ಕೇಕುಗಳನ್ನು ಕತ್ತರಿಸಿ ರಾಜರುಗಳು ತಮ್ಮ ಹುಟ್ಟಿದಬ್ಬವನು ಆಚರಿಸಿಕೊಂಡರು.
ಬಂದೂಕು ಯಾವ ಲಿಂಗ? ಸ್ತ್ರೀಲಿಂಗವಂತಲ್ಲ, ಪಾಪಪ್ರಜ್ಞೆಯಿಲ್ಲ,
ನಳಿಕೆಗೆ ಪಾಪಿ ಕೈ ತಾಗಿ ಗುಂಡಿಗೂ ಜೀವಬಂದಂತಾಗಿದೆ,
ಮಾಲಿಕನಿಗೆ ಅಧೀನನಾದೆನೆಂದು ವಿಜೃಂಭಿಸುತ್ತದೆ,
ನಕ್ಕರು, ನಕ್ಕರು, ನರಳುವುದ ಕಂಡು, ಹೊಟ್ಟೆ ಹುಣ್ಣಾಗುವಂತೆ ನಕ್ಕರು, ನಗುವಿಗೂ ತನ್ನ ದುರ್ಬಳಕೆಯ ಅರಿವಾಗಲಿಲ್ಲ,
ನಮ್ಮ ತಮ್ಮವರಿಗೆ ರಾಜ್ಯವೆಂದರೆ, ಸಾವಿನ ಮೆರವಣಿಗೆ ಎಂದು ಪಾಠ ಕಲಿಸಿದರು, ನೆಲ ಜಪ್ಪೆನ್ನಲಿಲ್ಲ, ಸ್ಮಶಾನದ ಹಾದಿ ಹಿಡಿದವರ ಕಂಡು,
ಬೀದಿಯಲ್ಲಿ ಮಡುಗಟ್ಟಿದ ರಕ್ತವನು ಗುಡಿಸಿ ಪರೀಕ್ಷೆಗೊಳಪಡಿಸಿ ವರದಿ ತನ್ನಿ, ಅದೇನೇಳಬಹುದು ” ಕೇವಲ ಮನುಷ್ಯರದೆಂದು”.
ನ್ಯಾಯಾಲಯಗಳು ಮುಗಿಲು ನೋಡಿದವು, ಕ್ಷಣಾರ್ಧದಲ್ಲೇ ಶಿಕ್ಷೆ ನೀಡುವಾಗ,
ಅದಕ್ಕಾಗಿ ನಾ, ಸಾಯಬೇಕೆನಿಸಿದಾಗ ಯಾವ ಅಪರಾಧ ಮಾಡಲಾರೇ,
ಶಾಸನಗಳ ಮಂಡಿಸಿ, ಬಡಿಗೆ ಜಾತ್ರೆಯನು ಪರದೆ ಸರಿಸಿ ನೋಡಿದರು,
ಹುಚ್ಚರೆಂದರು- ನಮ್ಮವರು ಹಕ್ಕಿಗಾಗಿ ಹೊರಟಿರುವ ಇರುವೆಯಂತ ಸಾಲುಗಳನು ಕಂಡು,
ನೆಲಕ್ಕೆ ನೋಂದಣಿಯಾಗುವ ಸಮಯ,
ಉಸಿರಿಗೂ ಪರಿಶೀಲಿಸುವ ಸಮಯ,
ಪ್ರಕೃತಿಯೇ ನಿನಗಿಲ್ಲದ ಕೋಪ ನಮ್ಮಂತವರಿಗೇಕೆ,
ನೀ ಮುನಿದಾಗ ಪರಿಹಾರ ಸಿಗುತಿತ್ತು, ಅವರೇ ಮುನಿದು ಅವರೇ ಪರಿಹರಿಸುತ್ತಾರೆ,
ಅವರಿಗೆ ಚಿನ್ನದ ಪದಕ ಕೊಟ್ಟರು, ನಮಗೆ ಬಟ್ಟೆ ಸುತ್ತಿದ ಶವಗಳನ್ನು ಕೊಟ್ಟರು,
ಕವಿತೆ ಚನ್ನಾಗಿದೆ, “ಹದ್ದಿದ” ಎಂಬ ಪದ ಬಳಕೆ ಇದೆ, ಅದು ಅದೇ ಆದರೆ ನನ್ನ ತಕರಾರಿಲ್ಲ, ಅದು “ಅದ್ದಿದ” ಎಂದಾದರೆ! ಅವಧಿಯ ಹಿರಿಮಿಗೆ ಸಣ್ಣಪೆಟ್ಟು.