ಲೋಕೇಶ್ ಮೊಸಳೆ
ತುಂಬಾ ವರ್ಷಗಳ ನಂತರ ನಾಟಕದ ಚಿತ್ರಗಳನ್ನು ಇತ್ತೀಚಿಗೆ ತೆಗೆದೆ. ನನಗೆ ಒಂಥರಾ ಮಜಾ ಎನ್ನಿಸಿತು. ಹೆಗ್ಗೋಡು ಪ್ರಸನ್ನ ಅವರ ನಿರ್ದೇಶನದಲ್ಲಿ “ಅಯೋಧ್ಯಾ ಕಾಂಡ” ನಾಟಕ ಮೈಸೂರಿನಲ್ಲಿ ತಯಾರಾಗಿದೆ. ಈ ನಾಟಕಕ್ಕೆ ಸಂಗೀತವನ್ನ ಗೆಳೆಯ ಅನುಷ್ ಶೆಟ್ಟಿ. ವಸ್ತ್ರ ವಿನ್ಯಾಸವನ್ನು ರಂಗಾಯಣದ ಹಿರಿಯ ನಟಿ ನಂದಿನಿ ಮಾಡಿದ್ದಾರೆ.
ನಿನ್ನೆ ತಾಂತ್ರಿಕ ಪ್ರದರ್ಶನದ ಶೂಟ್ ಕೂಡ ಮಾಡುತ್ತಲೆ ನಾಟಕದ ಅಭಿನಯ, ಸಂಗೀತ, ಕಲಾವಿದರ ಸಾಮರ್ಥ್ಯ ಅವರ ಎನರ್ಜಿ ನೋಡಿ ನನಗೆ ದಂಗು ಬಡಿದಂತಾಗಿದೆ. ಅಬ್ಬಬ್ಬಾ ಪ್ರಸನ್ನ ಅವರ ನಿರ್ದೇಶನದ ಈ ನಾಟಕ; ನಾಟಕ ಇತಿಹಾಸದಲ್ಲಿ ಹೆಗ್ಗುರುತು ಮೂಡಿಸಲಿದೆ. ಐತಿಹ್ಯ ಮತ್ತು ಸಮಕಾಲೀನ ಸಾಮಾಜಿಕ ರಾಜಕಾರಣ, ಮಹಿಳಾ ದ್ವನಿ ಯನ್ನೆಲ್ಲ ಒಂದೇ ನಾಟಕದಲ್ಲಿ ಭಟ್ಟಿ ಇಳಿಸಿ ಭಾವಾನಾತ್ಮಕವಾಗಿ ದುಗುಡ ಗೊಳಿಸಿ ಅಲ್ಲಾಡಿಸಿರುವ ಪ್ರಸನ್ನ ಅವರು ಪ್ರೇಕ್ಷಕರ ನಿಜವಾದ ನಾಯಕ ರಾಗಿದ್ದಾರೆ. ಇದೆಲ್ಲ ಏನೇ ಇರಲಿ ಮೈಸೂರಿನ ‘ರಂಗರಾಜಕಾರಣ’ಕ್ಕೆ ಈ ನಾಟಕದ ತಯಾರಿ, ಪ್ರದರ್ಶನ, ಹೊಸದೊಂದು ನವೋದಯ ಅನ್ನುವ ನಾಟಕ ರೆಪರ್ಟರಿ, ಹುಟ್ಟಿದೆ.
ನಿಜವಾಗಿ ಅದು ಕಟ್ಟುವ ಕೆಲಸ, ನಾವು ಮಾಡುವ ಕೆಲಸದಲ್ಲಿ ಪರ್ಯಾಯವಾಗಿ ಕೆಲಸ ಮಾಡಿ ಗೆಲ್ಲುವ ಸಾಮರ್ಥ್ಯ ಜಾಣ್ಮೆ ಪ್ರಸನ್ನ ಅವರದ್ದು. ಇದು ತಣ್ಣನೆಯ ಪ್ರತಿಭಟನೆ. ಅಡ್ನಾಡಿಗೆ ಇದೆಲ್ಲ ಅರಿವಾಗುವುದಿಲ್ಲ . ಒಂದೇ ಒಂದು ನಾಟಕ ಮಾಡಿಸುವ ಕಾಯಕ ಗೊತ್ತಿದ್ದರೆ. ಮೈಸೂರಿನ “ರಂಗರಾಜಕಾರಣ” ನಡೆಯುತ್ತಿರಲಿಲ್ಲ, ಇಂಥ ನೀಚತನಗಳಿಗೆ ಮೈಸೂರಿನ ರಂಗಕರ್ಮಿಗಳು ಹೇಗೆ ಪ್ರತಿಕ್ರಿಯಿಸಬೇಕು ಅನ್ನುವಂತೆ ಪ್ರಸನ್ನ ಮೈಸೂರಿನಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾರೆ. ಇಂಥ ಕೆಲಸಗಳು ಮೈಸೂರನ್ನು ಜೀವಂತ ಗೊಳಿಸಬಲ್ಲವು…
0 ಪ್ರತಿಕ್ರಿಯೆಗಳು