ನಾ.ದಾಮೋದರ ಶೆಟ್ಟಿ
(ಮಲಯಾಳಮೂಲ: ಒ.ಎನ್.ವಿ.ಕುರುಪ್ )
ಮಳೆ ಬರುತ್ತಲಿದೆ ಮಗೂ,
ಹಿತ್ತಿಲಲಿ ಕಾಲುವೆಯೆದ್ದಿದೆ, ಮತ್ತು-
ನಿನ್ನ ಖುಷಿಗೆ ಕಾಗದದ ದೋಣಿಗಳು..
ಒಂದೊಂದಾಗಿ ನೀನವನ್ನು ನೀರಿಗಿಳಿಸು,
ನೋಡುತ್ತ ನೋಡುತ್ತ ಆಹ್ಲಾದಿಸು.
ನೀನೋರ್ವ ದಂತಕತೆಯ ದೇವರಂತೆ
ಕುಳಿತು, ಹಡಗುಗಳನ್ನು
ದೂರದೂರುಗಳಿಗೆ ಕಳುಹಿಸು.
ನಿನ್ನ ಹಿಂದೆಯೆ ಕುಳಿತ ನಾನು
ಸಕಲ ದೃಶ್ಯಗಳನ್ನು ನೋಡಿ ಖುಷಿಪಡುವೆ.
ನಿನ್ನ ಪೂರ್ವಜರು-ನಿನಗವರ ಗೊತ್ತಿಲ್ಲ-
ದೂರದಿಂದಿದನು ನೋಡುವರು. ಅವರ
ಆನಂದ ಭಾಷ್ಪಗಳಂತೆ ಮಳೆಹನಿಗಳಲ್ಲಲ್ಲಿ
ಉದುರುವುವು. ಹೊಸಮಳೆಯ ಪುಟ್ಟಹನಿ
ನೆಲದ ನೀರಿಗೆ ಬಿದ್ದು ಹೂವಿನಾ ತೆರದ ವೃತ್ತಗಳ
ಸೃಜಿಸುವುವು.
ಮತ್ತೊಂದು ಗಳಿಗೆಯಲಿ ನಿನ್ನ ಮುಖ
ಕಪ್ಪಿಡುವುದು ಮಗೂ: ‘ಮಳೆ ಮತ್ತೂ ಸುರಿದೀತೆ?
ದೋಣಿಗಳು ಮುಳುಗಿಯಾವೆ?’
ಅಮೃತದ ಪರಿಶದ್ಧ ಸವಿಯನನುಭವಿಸಲಾಗದ
ನತದೃಷ್ಟರು ನಾವು. ನಮಗೊದಗಲೂ ಒದಗದಿರಲೂ
ಬಹುದಾದ ವಸ್ತುಗಳಿಗೆ ಹಪಹಪಿಸುವೆವು.






tumba chennagide sir, ista aytu
nice..thanks sir.
Dhanyavaadagalu