ಮೂಲ: ಖಲೀಲ್ ಗಿಬ್ರಾನ್
ಕನ್ನಡಕ್ಕೆ : ಡಾ ಅಮರೇಂದ್ರ ಹೊಲ್ಲಂಬಳ್ಳಿ
ಕಡಲನ್ನು ಪ್ರವೇಶಿಸುವ ಮೊದಲು
ನದಿ ಭಯದಿಂದ ನಡುಗಿತು
ಎನ್ನುವ ಮಾತಿದೆ.
ಪರ್ವತ ಶಿಖರಗಳಿಂದ ಬಂದವಳು ಆಕೆ.
ಉದ್ದನೆಯ ಅಂಕುಡೊಂಕಾದ ರಸ್ತೆ ತಿರುವುಗಳನ್ನು,
ಕಾಡುಗಳನ್ನು, ಹಳ್ಳಿಗಳನ್ನು ಹಾದು ಬಂದವಳು ಆಕೆ.
ತಾನು ಪಯಣಿಸಿದ ದಾರಿಯೆಡೆಗೆ ಒಮ್ಮೆ
ಹಿಂದಿರುಗಿ ನೋಡುತ್ತಾಳೆ.
ತನ್ನೆದುರು ಆಕೆ
ಅನಂತ ವಿಸ್ತಾರದ ಕಡಲನ್ನು ನೋಡುತ್ತಾಳೆ.
ಅದರೊಳ ಹೊಕ್ಕರೆ ಶಾಶ್ವತವಾಗಿ
ಕಣ್ಮರೆಯಾಗುವುದರ ಹೊರತು ಬೇರೇನೂ ಇಲ್ಲ ಎನಿಸುತ್ತದೆ.
ಆದರೆ ಬೇರೆ ದಾರಿಯಿಲ್ಲ.
ನದಿ ಹಿಂದಿರುಗಲಾಗುವುದಿಲ್ಲ.
ಯಾರೂ ಹಿಂದೆ ಹೋಗಲಾಗುವುದಿಲ್ಲ,
ಈ ಅಸ್ತಿತ್ವದಲ್ಲಿ ಹಿಮ್ಮುಖ ಚಲನೆ ಅಸಾಧ್ಯ.
ಕಡಲನ್ನು ಪ್ರವೇಶಿಸುವ ಅಪಾಯಕ್ಕೆ
ನದಿ ಎದೆಯೊಡ್ಡಲೇಬೇಕಾಗಿದೆ.
ಏಕೆಂದರೆ, ಆಗ ಮಾತ್ರ ಭಯ ಇಲ್ಲವಾಗುತ್ತದೆ.
ಕಡಲನ್ನು ಪ್ರವೇಶಿಸುವುದು ಎಂದರೆ,
ಕಡಲೊಳಗೆ ಕಾಣೆಯಾಗುವುದಲ್ಲ.
ತಾನು ಕಡಲೇ ಆಗುವುದು
ಎಂದು ನದಿಗೆ ಅಲ್ಲಿ ಅರ್ಥವಾಗುತ್ತದೆ.
0 ಪ್ರತಿಕ್ರಿಯೆಗಳು