ರಮಾಕಾಂತ್ ಆರ್ಯನ್
ಅವನು ರಶೀದ್ ಖಾನ್ ಅರ್ಮಾನ್ ಎಂಬ ಮದ್ದುಗುಂಡುಗಳ ಭೂಮಿಯಲ್ಲಿ ಅರಳಿದ ಕ್ರಿಕೆಟ್ ಹುಡುಗ. ಯಾವ ದೇಶದ ಕ್ರಿಕೆಟ್ ತಂಡಕ್ಕಾದರೂ ಸಿಗಬಹುದಾದ ಬೆಂಕಿಯಂಥ ಆಲ್ರೌಂಡರ್ ! ಒಂಥರಾ ಬೆಂಕಿಯಲ್ಲಿ ಅರಳಿದ ತಾಲಿಬಾನ್ ನೆಲದ ಮಸಣದ ಹೂವು!
ಒಂದಿಪ್ಪತ್ತು ವರ್ಷಗಳ ಕಾಲ ತಾಲಿಬಾನ್ ರಕ್ಕಸರು ಅದ್ಯಾವುದೋ ಬಿಲಗಳಲ್ಲಿ ಅಡಗಿದ್ದರಲ್ಲ, ಅದೇ ವೇಳೆ ಮನೆಯಿಂದ ಆಚೆ ಬಂದು ಚೆಂಡು, ಬ್ಯಾಟ್ ಹಿಡಿದಿದ್ದ ಹುಡುಗ ಇವನು. ಇವನಂತೆ ಒಂದಷ್ಟು ಹುಡುಗರು ಆಡಲಿಕ್ಕೆ ಇಳಿದಿದ್ದರು! ಇದೊಂಥರಾ ಆಫ್ಘನ್ ಲಗಾನ್! ಸುಮಾರು 3 ಕೋಟಿ ಜನಸಂಖ್ಯೆಯ ದೇಶದಲ್ಲಿ ಒಂದು ಅದ್ಭುತ ಎನಿಸುವ ತಂಡವೇ ರೆಡಿಯಾಗಿಬಿಟ್ಟಿತ್ತು. ಈ ತಂಡದ ಹುಡುಗರಂತೂ ವಿಶ್ವಕ್ಕೆ ಆಸ್ತಿಯಾಗುವ ರೀತಿಯಲ್ಲಿ ಆಡಿದರು, ಆಡುತ್ತಿದ್ದಾರೆ ಕೂಡಾ!
ಆದರೆ ಒಂದು ದಟ್ಟ ದರಿದ್ರ ಸಮಯದಲ್ಲಿ, ಅಫ್ಘನ್, ತಾಲಿಬಾನಿಗಳ ಆಡುಂಬೊಲವಾಗಿಬಿಟ್ಟಿತ್ತಲ್ಲ. ಅಲ್ಲಿಗೆ ಎಲ್ಲ ಚೆಂಡಾಟಗಳೂ ಮುಗಿದವು. ರುಂಡಮುಂಡಗಳ ಚೆಂಡಾಟ ಮಾತ್ರ ಚಾಲ್ತಿಯಲ್ಲಿ. ಅಲ್ಲಿನ ಸಂಸತ್ತಿಗೆ ನುಗ್ಗಿ ಸ್ಪೀಕರ್ ಚೇರ್ ಮೇಲೆ ಕೂತರೆ, ಹೇಗೆ ಕಾಣುತ್ತೇನೆ ಎಂದು ವಿಡಿಯೋ ಮಾಡೋ ಎಂಬಲ್ಲಿಗೆ, ಅದು ಅಟ್ಟಹಾಸದ ಪರಾಕಾಷ್ಠೆ! ಅಮ್ಯೂಸ್ಮೆಂಟ್ ಪಾರ್ಕ್ಗಳಿಗೆ ನುಗ್ಗಿ ಆಟಿಕೆ ಕಾರುಗಳಲ್ಲಿ ಅಡ್ಡಾದಿಡ್ಡಿ ಆಡಲು ಶುರು ಮಾಡಿದರು. ವಿಶ್ವಕ್ಕೆ ಅಹಿಂಸೆ ಸಾರಿದ ಬುದ್ಧನ ತಲೆಯ ಕಡೆ, ಟ್ರಿಗರ್ ಎಳೆದರೆ 47 ಗುಂಡು ಸಿಡಿಯುವ ಕೋವಿ ಇರಿಸಿ, ಧಮ್ ಎಳೆದು ಬಿಟ್ರಲ್ಲ! ಖುದ್ದು ಅಂಗೂಲಿಮಾಲಾನು ಬೆಚ್ಚುತ್ತಿದ್ದನೋ ಏನೋ!
ಇನ್ನೊಂದು ಕಡೆ 150 ಅಮೆರಿಕನ್ ಸಿಬ್ಬಂದಿಯನ್ನ ಕರೆದೊಯ್ಯಲು ಬಂದಿದ್ದ ಅಮೆರಿಕದ ಯುದ್ಧವಿಮಾನಕ್ಕೆ ಜೋತುಬಿದ್ದ ಅಫ್ಘನ್ ನಾಗರಿಕರೆಷ್ಟೋ? ವಿಮಾನದ ಚಕ್ರದ ಮೇಲೆ ಕುಳಿತೇ ಹಾರಿ, ಅಲ್ಲಿಂದ ಜಾರಿ ಜೀವತೆತ್ತವರೆಷ್ಟೋ? ಹೆಣ್ಣುಮಗಳೊಬ್ಬಳ ಬಿಗಿ ಉಡುಪಿನ ಕಾರಣಕ್ಕೆ ಮೆದುಳಿನಾಳಕ್ಕೆ ಬುಲೆಟ್ ನುಗ್ಗಿತ್ತು. ಚಪ್ಪಲಿ ಕಾಣುವ ಕಾರಣಕ್ಕೆ ಹತಳಾದವಳು ಒಬ್ಬಳು. 15 ತುಂಬಿದ, 45 ದಾಟದ ವಿಧವೆಯರು ಇದೇ ರಕ್ಕಸರ ಮೋಜಿನ ಆಟಿಕೆಗಳು.
ಈ ಕಡೆ ಆಫ್ಘನ್ ಕ್ರಿಕೆಟ್ ತಂಡದ ಹುಡುಗರು, ಇಂಗ್ಲೆಂಡ್ನಲ್ಲಿ The Hundred ಎನ್ನುವ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ವಿಶೇಷವಾಗಿ ರಶೀದ್ ಮತ್ತು ನಬಿ. ರಶೀದ್, ಟ್ರೆಂಟ್ ರಾಕೆಟ್ಸ್ ತಂಡದ ಪರವಾಗಿ ಚೆಂಡು ತಿರುಗಿಸುತ್ತಾನೆ ಮತ್ತು ಬ್ಯಾಟ್ ಬೀಸುತ್ತಾನೆ!
Hundred ಎಂಬುದು ಅಲ್ಲಿನ ಜನಪ್ರಿಯ ಉದ್ಘಾಟನಾ ಟೂರ್ನಿ. ತಲಾ 100 ಎಸೆತಗಳ ಪಂದ್ಯ. ಒಂಥರಾ ಮಜವಾಗಿದೆ. ಟಿ-20 ಗಿಂತ ಒಂದು ಹಂತಕ್ಕೆ ರೋಚಕ. ನಿಯಮಗಳು ನವನವೀನ! ಇಂತಹ ಟೂರ್ನಿಯಲ್ಲಿ ಹುಡುಗರು ಆಡುತ್ತಿರಬೇಕಾದರೆ, ಮನೆಗೆ ಬೆಂಕಿ ಬಿದ್ದರೆ ಹೇಗಾಗಬೇಡ!
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನದಂದೇ ಅದೇಕೋ ಟ್ವಿಟರ್ನಲ್ಲಿ ಇದೇ ರಶೀದ್ ಕಣ್ಣೀರುಗರೆದುಬಿಟ್ಟ. ಇಂಗ್ಲೆಂಡ್ನ ಮಾಜಿ ನಾಯಕ ಕೆವಿನ್ ಪೀಟರ್ಸೆನ್ ಕಳವಳವಾಗುವ ರೀತಿಯಲ್ಲಿ ರಶೀದ್ ಮಮ್ಮಲ ಮರುಗಿಬಿಟ್ಟಿದ್ದ.
ರಶೀದ್ ಬೌಂಡರಿಯಲ್ಲಿ ನಿಂತಿರಬೇಕಾದರೆ ಅವನೊಂದಿಗೆ ಪೀಟರ್ಸೆನ್ ತುಂಬ ಮಾತಾಡಿದ್ದ. ಅಷ್ಟೂ ಮಾತುಗಳೂ ಅಫ್ಘನ್ನಲ್ಲಿರುವ ತಮ್ಮ ಕುಟುಂಬವನ್ನ ಆ ಬೆಂಕಿಯಿಂದ ಆಚೆ ತರುವುದು ಹೇಗೆ ಎಂಬ ಬಗ್ಗೆಯೇ! ನೋಡಿದರೆ ಅಲ್ಲಿನ ಏರ್ಪೋರ್ಟ್ಗಳೂ ಕೂಡಾ ಕಾರ್ಯಾಚರಿಸುವುದನ್ನ ನಿಲ್ಲಿಸಿಬಿಟ್ಟಿವೆ. ಆಚೆ ಬರುವ ಪರಿ ಹೇಗೆ ಎಂಬುದೇ ನಿಗೂಢ!
ದಿ ಹಂಡ್ರೆಡ್ ಕ್ರಿಕೆಟ್ ಟೂರ್ನಿಯಲ್ಲಿ ಇದುವರೆಗೂ ಇಂತಹ ಹೃದಯ ಒದ್ದೆಯಾಗುವ ಸನ್ನಿವೇಶ ಯಾರಿಗೂ ಬಂದಿಲ್ಲ ಎಂದ ಪೀಟರ್ಸೆನ್. ಈ ನಡುವೆ ಆಫ್ಘನ್ ಕ್ರಿಕೆಟ್ ಮಂಡಳಿ CEO ಹಮೀದ್ ಶಿನ್ವಾರಿ ಹೇಳಿದ್ದು ಇಂಟರೆಸ್ಟಿಂಗ್! ಇಲ್ಲ ಇಲ್ಲ ನಿಮಗೆ ಏನೂ ಆಗಲ್ಲಾ ತಾಲಿಬಾನಿಗಳೂ ಕ್ರಿಕೆಟ್ ಅನ್ನ ಪ್ರೀತಿಸುತ್ತಾರೆ ಮತ್ತು ಪೋಷಿಸುತ್ತಾರೆ ಎಂಬ ಸಾಂತ್ವನ. ಈ ಸಾಂತ್ವನದ ಆಯುಷ್ಯ ಅದ್ಯಾವ ಬಂದೂಕಿನಿಂದ ಸಿಡಿಯುವ ಬುಲೆಟ್ ನಿರ್ಧರಿಸುತ್ತದೋ ಗೊತ್ತಿಲ್ಲ!
ಈ ನೋವಿನಲ್ಲಿಯೂ ರಶೀದ್ ಎಂಥ ಆಟವಾಡಿದ್ದ ಗೊತ್ತಾ? ಟ್ರೆಂಟ್ ರಾಕೆಟ್ಸ್ ತಂಡವನ್ನ ನಾಕ್ ಔಟ್ ತಲುಪಿಸಿದ್ದ. ಮ್ಯಾಂಚೆಸ್ಟರ್ ಒರಿಜಿನಲ್ಸ್ ವಿರುದ್ಧ ಅವನ ಸ್ಪೆಲ್ ಅದ್ಭುತ! 16 ರನ್ ಕೊಟ್ಟು 3 ಭಯಂಕರ ವಿಕೆಟ್ ಕಬಳಿಸಿದ್ದ, ಮಾರಕವೆನಿಸಿದ್ದ ಪಾರ್ಟ್ನರ್ಶಿಪ್ಗಳಿಗೆ ನೀರಿಳಿಸಿದ್ದ!.
ಇಂತಹ ರಶೀದ್ಗೆ ಪಾಕಿಸ್ತಾನ ಒಂದು ಕಡೆ ಕರೆಯುತ್ತಿದೆ, ಇನ್ನೊಂದು ಕಡೆ ಭಾರತಕ್ಕೆ ಬಂದು ಇಲ್ಲಿನ ಪ್ರಜೆಯೇ ಆಗಿಬಿಡು ರಶೀದ್, ಎಂದು ಅನೇಕರು ಅವನನ್ನ ಕರೆಯುತ್ತಿದ್ದಾರೆ. ವಿಷಯ ಅವನಾ? ಅವನ ಬದುಕಾ? ಕ್ರಿಕೆಟ್ಟಾ? ಕುಟುಂಬವಾ? ಇದು ಇವೆಲ್ಲದರ ಸಂಗಮವಾ? ಗೊತ್ತಿಲ್ಲ.
ರಶೀದ್ ಖಾನ್ ಅರ್ಮಾನ್, ಆಫ್ಘನ್ ರಾಷ್ಟ್ರೀಯ ತಂಡವನ್ನ ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ ಮುನ್ನಡೆಸುತ್ತಾನೆ. ಈಗ್ಗೆ 22 ವರ್ಷಗಳ ಹಿಂದೆ ಅವನು ಅಫ್ಘನ್ನ ನಂಗರ್ಹರ್ ಎಂಬಲ್ಲಿ ಹುಟ್ಟಿದವನು. 2018ರ ಜೂನ್ನಲ್ಲಿ ಭಾರತದ ವಿರುದ್ಧವೇ ಟೆಸ್ಟ್ನಲ್ಲಿ ಅವನ ಮೊದಲ ಪಂದ್ಯ. ಅವನು ಭಾರತದ ಸನ್ರೈಸರ್ಸ್ ಹೈದರಾಬಾದ್ ಪರ ಚೆಂಡು ತಿರುಗಿಸುತ್ತಾನೆ. ಆಸ್ಟ್ರೇಲಿಯಾದ ಬಿಗ್ಬ್ಯಾಷ್ ಲೀಗ್ನಲ್ಲಿ ಅಡಿಲೇಡ್ ಸ್ಟ್ರೈಕರ್ಗೆ ಇವನೇ ಟ್ರಂಪ್ಕಾರ್ಡ್! ಪಾಕಿಸ್ತಾನದ ಸೂಪರ್ ಲೀಗ್ನಲ್ಲಿ, ಲಾಹೋರ್ ಕಲಂದರ್ಗೂ ಇವನು ತುಂಬ ಬೇಕಿರುವ ಹುಡುಗ! ಎಂಥ ಪ್ರತಿಭೆಗೆ ಎಂಥ ಸಂಕಷ್ಟವಲ್ಲವಾ?
ಟೆಸ್ಟ್ ಪಂದ್ಯಗಳಲ್ಲಿ ಇವನಷ್ಟು ಚಿಕ್ಕವಯಸ್ಸಿಗೆ ಕ್ಯಾಪ್ಟನ್ ಆದ ಇನ್ನೊಬ್ಬ ಆಟಗಾರ ಸದ್ಯ ವಿಶ್ವದಲ್ಲಿ ಇಲ್ಲ. ಕೇವಲ 20 ವರ್ಷ 350 ದಿನಗಳು ಅಷ್ಟೇ!
2018 ರಲ್ಲಿ ಏಕದಿನ ಬೌಲಿಂಗ್ Ranking ನಲ್ಲಿ ಇವನೇ ಮೊದಲು. ಟಿ-20 ಬೌಲಿಂಗ್ ನಲ್ಲೂ ಇವನೇ ಮೊದಲಿಗನಾಗಲಿಕ್ಕೆ ತುಂಬಾ ಸಮಯ ಬೇಕಿರಲಿಲ್ಲ. ಕ್ರಿಕೆಟ್ಗೆ ಆಸ್ತಿಯಂತೆ ಬೆಳೆದ ಹುಡುಗ. 2018ರ ಏಷ್ಯಾ ಕಪ್ನಲ್ಲಿ ಅದ್ಯಾವ ಪರಿ ಆಡಿದ್ದನೆಂದರೆ ಆಲ್ರೌಂಡರ್ ಅಗ್ರಪಟ್ಟವೇ ಇವನನ್ನ ಕರೆದು ಹೆಸರು ಬರೆಸಿತ್ತು. ಏಕದಿನಕ್ಕೆ ನಾಯಕನಾದ ಅತ್ಯಂತ ಚಿಕ್ಕ ಹುಡುಗನೂ ಇದೇ ರಶೀದ್. ನಿಮಗೆ ಗೊತ್ತಿರಲಿ, ಅವನು ಏಕದಿನದಲ್ಲಿ 100 ವಿಕೆಟ್ ಕಿತ್ತ ಅತ್ಯಂತ ಚಿಕ್ಕ ಹುಡುಗ! ಆಫ್ಘನ್ ಮಣ್ಣಲ್ಲೂ ಎಂಥಾ ಬೆಳೆಯಲ್ಲವಾ ರಶೀದ್!
ಇವೆಲ್ಲವೂ ಅವನ ಕಿರೀಟದ ಗರಿಗಳೆಂಬುದು ನಿಜ. ಆದರೆ ಬದುಕು ಇವೆಲ್ಲವನ್ನೂ ಮೀರಿದ್ದು. ಯಾರೋ ವಿದೂಷಕ ತಮಾಷೆ ಮಾಡಿ ಬದುಕುತ್ತಿದ್ದರೆ, ಮನರಂಜನೆಯೇ ನಿಷಿದ್ಧ ಎಂಬ ತಿಕ್ಕಲು ಕಾನೂನು ತಂದು ಅವನ ಕಪಾಳಕ್ಕೆ ಹೊಡೆದು ದೇಹಕ್ಕೆ ಬುಲೆಟ್ ನುಗ್ಗಿಸಿದ್ದಾರೆ. ಬ್ಯೂಟಿ ಪಾರ್ಲರ್ ಮುಂದೆ ರೂಪದರ್ಶಿ ಚಿತ್ರ ಇದ್ದರೆ ಅದಕ್ಕೆ ಮಸಿ! ಇನ್ನು ಸಿನಿಮಾಗಳ ಪಾಡೇನು, ಇನ್ನು ಅಲ್ಲಿನ ನಿರ್ದಯಿಗಳ ಮುಂದೆ ನಿರ್ದೇಶಕರ ಕಥೆ ಏನು? ಕ್ರೀಡೆ, ಕಲೆ, ಸಂಗೀತ, ಸಂಸ್ಕೃತಿಯ ಕಥೆ? ತಾಲಿಬಾನಿಗಳೇ ಬಲ್ಲರು.
ಇವರನ್ನೂ, ಇವರಂಥ ಅಲ್ಲಿನ ಅನೇಕರನ್ನು ರಕ್ಷಿಸಬೇಕಿದೆ. ಕಳೆದ 20 ವರ್ಷಗಳ ಜಾಗತಿಕ ಸಮುದಾಯದ ಶ್ರಮ ಸಾರ್ಥಕವಾಗಬೇಕಾದರೆ, ಭಾರತವೂ ಸೇರಿ ಎಲ್ಲರೂ ಸಾತ್ವಿಕ ಸಿಟ್ಟು, ರೋಷ, ಕ್ಷಾತ್ರ ತೇಜಸ್ಸನ್ನ ತೋರಿಸಬೇಕಿದೆ. ಇದು ಒಬ್ಬ ರಶೀದ್ ಖಾನ್ನ ಸ್ಟೋರಿಯಲ್ಲ. ಇದು ಹಣೆಯ ಮೇಲೆ ಬಂದೂಕಿನ ಕೋವಿ ತೂಗಿಸಿಕೊಳ್ಳುತ್ತಿರುವ ಕೋಟ್ಯಂತರ ಅಮಾಯಕ ಅಫ್ಘನ್ನರ ಕಥೆ!
ಎಲ್ಲರೂ ಕೈಬಿಟ್ರೆ ಅಭಿಮಾನಿಗಳ, ಕರುಣಿಗಳ, ಹೃದಯವಂತರ ಆಶೀರ್ವಾದ ಮತ್ತು ಕಣ್ಣೀರು ನಿಮ್ಮನ್ನ ಕಾಯಲಿ ರಶೀದ್…
0 ಪ್ರತಿಕ್ರಿಯೆಗಳು