ಪಾಲಹಳ್ಳಿ ವಿಶ್ವನಾಥ್
ಇಂದು ಎಲ್ಲರ ಸೈಕಲ್ ದಿವಸ – ತಂದೆಯ ಸೈಕಲ್ ಸವಾರಿ – ನನ್ನ ಪುಸ್ತಕ ‘ ಒಂದು ಕುಟುಂಬದ ಕಥೆ ‘ ಯಿಂದ
ಅಂದಿನ ದಿನಗಳಲ್ಲಿ ಮನೆಯವರಿಗೆಲ್ಲಾ ಸೈಕಲ್ ಹುಚ್ಚು. ಒಂದು ದಿನ, ಪ್ರಾಯಶ: ಭಾನುವಾರ , ಎಲ್ಲರಿಗೂ ಎನೋ ಹುಮ್ಮಸ್ಸು. ಚಿಕ್ಕಪ್ಪ ಸೀನಾ, ಅಣ್ಣ ರಾಮಸ್ವಾಮಿ , ಕಸಿನ್ ಸಾಮಿ, ವಿಶ್ವಮೂರ್ತಿ, ಸ್ನೇಹಿತರಾದ ಬಿ.ಎಸ್. ನರಸಿಂಗ ರಾವ್ ಮತ್ತಿತರರು. ಎಲ್ಲರೂ ಮಧ್ಯಾಹ್ನ ಸೈಕಲ್ ಸವಾರಿಗೆ ಹೊರಟರು.
ಆಗೆಲ್ಲಾ ಹೆಂಗಸರು ಸೈಕಲ್ ತುಳಿಯುತ್ತಿದ್ದು ಅಪರೂಪವಾಧರೂ, ಅಕ್ಕ ರಾಮೇಶ್ವರಿ, ಪಕ್ಕದ ಮನೆಯ ವಿಜಯ, ಸ್ವರ್ಣ, ಪುಷ್ಪ ಎಲ್ಲಾ ಸೈಕಲ್ ಪ್ರವೀಣರು. ಅಂತೂ ನಮ್ಮ ಬಸವನಗುಡಿಯ ಮನೆಯಿಂದ ಬೇರೆ ಬೇರೆ ದಿಕ್ಕುಗಳಲ್ಲಿ ಹತ್ತು ಹದಿನೈದು ಸೈಕಲ್ಗಳು ಹೊರಟವು. . ಆದರೆ ಇದ್ದಕ್ಕಿದ್ದ ಹಾಗೆ ನಮ್ಮ ತಂದೆ ಈ ಸೈಕಲೋತ್ಸವದಲ್ಲಿ ಭಾಗಿಯಾಗಲು ಶುರುವಾದರು. ಎಲ್ಲರಿಗೂ ಆಶ್ಚರ್ಯ! ಪ್ರತಿದಿನ ಕಾರಿನಲ್ಲಿ ಆಫೀಸಿಗೆ ಹೋಗಿ ಬರುತ್ತಿದ್ದ ಈ ವ್ಯಕ್ತಿಗೆ , ಹಣ ಸ೦ಪಾದಿಸಿ ನಮ್ಮನ್ನು ಪಾಲಿಸಿ ಪೋಷಿಸುತ್ತಿದ್ದ ಈ ನಮ್ಮ ಮನೆಯ ಹಿರಿಯರಿಗೆ ಈ ಸಾಹಸವೇತಕ್ಕೆ ? ಬೇಡಾ, ಬೇಡಾ ಎಂದು ಬೇಡಿಕೊಂಡರೂ ನಮ್ಮ ತಾಯಿ . ಬಾಡಿಗೆ ಸೈಕಲ್ಗಳೂ ಇಲ್ಲ ಎಂದು ಸುಳ್ಳು ಹೇಳಿದೆವು ನನ್ನಂತಹ ಚಿಕ್ಕವರು. ಆದರೆ ಅಂಗಡಿಗೆ ತಾವೇ ಹೋದರು ನಮ್ಮ ತಂದೆ . ಬಾಡಿಗೆ ಸೈಕಲ್ (ಆಗ ಗಂಟೆಗೆ ೪-೮ ಆಣೆ ಇದ್ದಿರಬಹುದು) ಹತ್ತಿ ಸವಾರಿಗೆ ಹೊರಟರು .
ಪ್ರಾಯಶ: 3 ಗಂಟೆಗೆ ಪ್ರಾರಭವಾಗಿದ್ದಿರಬೇಕು ಎಲ್ಲರ ಸೈಕಲ್ ಸವಾರಿ. ಸುಮಾರು ಐದೂವರೆಗೆ ಎಲ್ಲರೂ ವಾಪಸ್ಸು ಬಂದಿದ್ದರು. ನಮ್ಮ ತಂದೆ ಮಾತ್ರ ಬಂದಿರಲಿಲ್ಲ . ಎಲ್ಲರಿಗೂ ಬಹಳ ಯೋಚನೆ; ನಮ್ಮ ತಾಯಿಗಂತೂ ಬಹಳ ಬಹಳ! ಯಾವ ಯಾವ ದೇವರಿಗೋ ಹರಕೆ ಹೋಯಿತು. ಕಡೆಗೂ 6 ಗಂಟೆಯಾಯಿತು . ಬಸವನಗುಡಿ ಪೋಲೀಸ್ ಸ್ಟೇಷನ್ ನಿಂದ ಫೋನ್ ಬಂದಿತು. ”ನೋಡಿ, ರಾಮಯ್ಯನವರು ಈಗ ತಾನೇ ಸೈಕಲ್ಲಿನಲ್ಲಿ ಇಲ್ಲಿ ಬಂದು ಬಿದ್ದುಬಿಟ್ಟಿದ್ದಾರೆ “. ನಾವೆಲ್ಲಾ ಆತಂಕದಿಂದ ಹತ್ತಿರವೇ ಇಧ್ಧ ಪೋಲೀಸ್ ಸ್ಟೇಶನ್ನಿಗೆ ಹೋದೆವು. . ನಿಜ! ರಾಮಯ್ಯ ನವರು ಒಂದು ಕಂಬಕ್ಕೆ ಸೈಕಲ್ ನಿಲ್ಲಿಸಿ ಅಲ್ಲೇ ಕುಳಿತಿದ್ದರು. ಹಣೆಯಲ್ಲಿ ಸ್ವಲ್ಪ ರಕ್ತವೂ ಇದ್ದಿತು. ಆದರೆ ಮುಖದಲ್ಲಿ ಮುಗುಳುನಗೆ. ” ಎಲ್ಲೆಲ್ಲೋ ಹೋಗಿ ಬಂದೆ . ಆದರೆ . ಇಳಿಯೋವಾಗ ತೊಂದ್ರೆಯಾಯಿತು. “. ಹಿಂದೆ ತಾಯಿನಾಡು ಪತ್ರಿಕೆ ನಡೆಯುತ್ತಿದ್ದ ಕಿಲಾರಿ ರಸ್ತೆಗೆ, ಚಾಮ್ರಾಜ ಪೇಟೆಯ ಆಲ್ಬರ್ಟ ವಿಕ್ಟರ್ ರಸ್ತೆಗೂ ಹೋಗಿಬ೦ದರೋ ಏನೋ !
ಆ ಸಮಯದಲ್ಲಿ ಅವರ ಪತ್ರಿಕ ಹಣದ ತೊಂದರೆಗಳನ್ನು ಎದುರಿಸುತ್ತಿತ್ತು ಎಂದು ನನಗೆ ಆಗ ಗೊತ್ತಿರಲಿಲ್ಲ. ಎರಡುವರ್ಷಗಳ ನಂತರ ಅವರು ಪತ್ರಿಕೆಯನ್ನು ಮಾರಲೂ ಬೇಕಾಯಿತು.
0 ಪ್ರತಿಕ್ರಿಯೆಗಳು