ಈ ದಿನ ನನ್ನ ಜೀವನದಿಗಳ ಸಾವಿನ ಕಥನದ ಕೊನೆಯ ಅಧ್ಯಾಯದ ಕೊನೆಯ ಸಾಲುಗಳನ್ನು ಬರೆಯುವಾಗ ನನ್ನಪ್ಪ ನೆನಪಾಗಿಬಿಟ್ಟ ಆತನ ಬಗ್ಗೆ ಕೃತಿಯಲ್ಲಿ ದಾಖಲಿಸಿದ ಕೆಲವು ಮಾತುಗಳಿವು.
ಇದು ಕಥೆಯಲ್ಲ, ಅವು 1963-64ರ ದಿನಗಳು. ನನಗಾಗ ಎಂಟು ವರುಷ. ನನ್ನೂರಿಗೆ ಬಿದ್ದ ಮೊದಲ ಮುಂಗಾರಿನ ಮಳೆಯ ಮಾರನೇ ದಿನ ನನ್ನಪ್ಪ ನೇಗಿಲು ಮತ್ತು ನೊಗ ಹೊತ್ತು ಎತ್ತುಗಳ ಜೊತೆ ಹೊಲಕ್ಕೆ ಹೊರಡುತಿದ್ದ. ನಾನು ಒಂದು ಸಣ್ಣ ತಂಬಿಗೆಯಲ್ಲಿ ನೀರು ಹಿಡಿದು, ಅರಿಶಿನ, ಕುಂಕುಮ,ತೆಗೆದುಕೊಂಡು ಅಪ್ಪನನ್ನು ಹಿಂಬಾಲಿಸುತಿದ್ದೆ. ಹೊಲಕ್ಕೆ ತಲುಪಿದ ನಂತರ ಅಪ್ಪ ಚಪ್ಪಲಿಯನ್ನು ಹೊರಗೆ ಬಿಟ್ಟು, ಎತ್ತುಗಳಿಗೆ ನೊಗ ಮತ್ತು ನೇಗಿಲು ಕಟ್ಟಿ ನಂತರ ಹೊಲದಲ್ಲೇ ಬಿದ್ದಿರುವ ಮೂರು ಕಲ್ಲುಗಳನ್ನು ಎತ್ತಿಕೊಂಡು ಅವುಗಳನ್ನು ತೊಳೆಯುತಿದ್ದ. ನಂತರ ಅವುಗಳನ್ನ ಹೊಲದ ಬದುವಿನ ಮೇಲೆ ಸಾಲಾಗಿ ಇರಿಸಿ ಅರಿಶಿನ, ಕುಂಕುಮ ಹಚ್ಚಿ, ಗರಿಕೆ ಹುಲ್ಲನ್ನು ತಂದು ಅವುಗಳ ಮುಂದಿಟ್ಟು ಚಡ್ಡಿ ಜೇಬಿನಿಂದ ಕರಪೂರ ತೆಗೆದು ಪೂಜಿಸುತಿದ್ದ.
ನಂತರ ನೇಗಿಲು ಹೂಡಿ ಹೊಲ ಉಳಲು ಆರಂಭಿಸುತಿದ್ದ. ಅಪ್ಪನ ಕೈಯಲ್ಲಿ ಸಾಮಾನ್ಯ ಕಲ್ಲುಗಳು ದೇವರಾಗುವ ಬಗೆಯನ್ನು ನಾನು ವಿಸ್ಮಯದಿಂದ ಆವಾಗ ನೋಡುತಿದ್ದೆ. ಇದೀಗ 56 ನೇ ವಯಸ್ಸಿನಲ್ಲಿ ಎಲ್ಲವೂ ಅಥವಾಗುತಿದೆ. ನಮ್ಮ ಹಿರಿಯರು ತಾವು ಇದ್ದಲ್ಲೇ ದೇವರನ್ನು ಸೃಷ್ಡಿಸುವ ಪೂಜಿಸುವ ಅವರ ಸರಳ ಹಾಗೂ ಮಿತವಾದ ಬಯಕೆಗಳ, ಮತ್ತು ಜಗತ್ತಿನ ಯಾವ ಜೀವ ಜಾಲಕ್ಕೂ ಕೇಡಾಗದಂತೆ ಅವರು ಬದುಕಿದ ಬದುಕು ನಮಗೆ ಮಾದರಿಯಾಗಬೇಕಿದೆ. (2003 ರಲ್ಲಿ ತನ್ನ 89 ನೆ ವಯಸ್ಸಿಗೆ ತೀರಿಹೋದ ನನ್ನಪ್ಪ ಎಂದೂ ನಮ್ಮ ಹೊಲ, ತೋಟ ಹಾಗು ಗದ್ದೆಯೊಳಕ್ಕೆ ಚಪ್ಪಲಿ ಹಾಕಿಕೊಂಡು ಹೋಗುತ್ತಿರಲಿಲ್ಲ.
ಅಪ್ಪನ ದೃಷ್ಟಿಯಲ್ಲಿ ಅವೆಲ್ಲವೂ ಹೆತ್ತ ತಾಯಿಯ ಹಾಲಿನ ಮೊಲೆಗಳಿದ್ದಂತೆ. ಅವುಗಳನ್ನು ಚಪ್ಪಲಿಯಿಂದ ತುಳಿಯಬಾರದು ಎಂಬುದು ಅವನ ನಿಲುವಾಗಿತ್ತು. ಇಂದಿಗೂ ನಾನು ಊರಿಗೆ ಹೋದಾಗ ತೋಟ, ಹೊಲದ ಬಳಿ ತೆರಳಿದಾಗ ಅವನ ಮಾತುಗಳು ನೆನಪಾಗುತ್ತವೆ. ನನಗೆ ಅರಿವಿಲ್ಲದಂತೆ ಚಪ್ಪಲಿ ಬಿಟ್ಟು ಜಮೀನಿಗೆ ತರರಳುತ್ತೇನೆ.)
0 ಪ್ರತಿಕ್ರಿಯೆಗಳು