5ನೇ ನಂಬರ್ ಬೀಡಿ
ಆರನಕಟ್ಟೆ ರಂಗನಾಥ
ಕಾಲ್ಜಾಡಿನಲ್ಲಿ ಆರದೆ ಉದಿರಿರುವ
ಮೋಟ್ಬೀಡಿಯ ಹೊಗೆ
ಅಯ್ಯನ ಕರುಳ ಸುತ್ತಲು.
ಕಬ್ಬಿನ ಸಾಲಿನೊಳಗೆ ಕೊಯ್ಯುವ
ಸಲಿಕೆಯ ಬಾಯಿಬಡಿಯಲು ಊರಿದ
ಬಿಗಿಬೆರಳ ಸಂದಿಯಲ್ಲಿ
ಐದನೇ ನಂಬರ್ ಬೀಡಿ ಉಸಿರೆಳೆಯುತ್ತಿತ್ತು.
ಎದೆಗೂಡ ನಾಡಿ ಉಬ್ಬಿ ಕೆನೆದು
ದಬ್ಬಿದ ಉಗುಳ ಉರಿಯಲ್ಲಿ
ಕೊನೆಯ ಸೇದಿನ ಬೀಡಿಕಟ್ಟು .
ತಲೆಮಟ್ಟೆಯ ಘಮಲಿಗೆ
ಹೊದ್ದು ಮಲಗಿದ ಕಣ್ಣುಗಳ ತೀಡಿ
ಬಯಲಿಗೂ ಸುಳಿದಿರುವ ನಿಟ್ಟುಸಿರಿಗೆ
ಆವಿಯಾದ ಐದನೇ ನಂಬರ್
ನಂಬರುಗಳಿರದ ಶಾಂತಿ ಅಕ್ಬರ್ ಗಣೇಶ್
ಬೀಡಿಗಳ ಹಿಡಿದು ಕಾಲಿಗೆ ಚಕ್ರ ಕಟ್ಟಿ
ಅಂಗಡಿಗೂ ಅಪ್ಪಂದಿರಿಗೂ ನಡುವಿನ
ಗೋಣಿ ಬಸ್ಸಿನ ಹುಡುಗರು ಬಿಡುವ ಮೋಟಾರು
ಐದನೇ ನಂಬರ್ ಬೀಡಿ ಹೆಸರಿನಲ್ಲಿ.
ಊರು ಕೇರಿಗಳನ್ನು ಜಾತ್ಯತೀತವಾಗಿ ದಹಿಸಿ
ಉರಿದು ಉದುರು ಬೂದಿಯಾಗಿಸುವ
ಒಡಲ ಉರಿಗೆ ಶರಣಾದ ಇಂಗಾಲವಾಹಕ
ಅಪ್ಪಂದಿರ ಉಸಿರಿನೊಡನೆ ಎಲ್ಲರನ್ನೂ ಸುಟ್ಟಿದ್ದ
ಐದನೇ ನಂಬರ್ ಬೀಡಿ ಉರಿದು ಉದುರುತ್ತಿದೆ
ಕರುಳು ಬಳ್ಳಿಗಳ ಹೊತ್ತು.
ಕರಳುಗಳನ್ನೇ ಕತ್ತರಿಸುವ ಮೋಟು ಬೀಡಿ ಸಮಾಜದ ಸ್ವಾಸ್ಥ್ಯವನ್ನೂ ಕೆಡಿಸುವ ನೂರಾರು ತರದ ಬೀಡಿಗಳ ಬಗ್ಗೆ , ಅವುಗಳ ಅಟ್ಟ ಹಾಸದ ಬಗ್ಗೆ ಯಾರೆಷ್ಟು ಹೇಳಿದರೂ ಕೇಳಿಸಿಕೊಳ್ಳುವಷ್ಟು ಸಹನೆ ಜನಕ್ಕಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಪದ್ಯ ಚೆನ್ನಾಗಿದೆ.
nimma prasnegalige yellaru uttra kandukollabeku.
chennagide.