ಕೊಳಲಗಾನ
ಗಾಯತ್ರೀ ರಾಘವೇಂದ್ರ ಶಿರಸಿ
ಊದುತ್ತಿದ್ದಾನೆ ಅಜ್ಜ
ಬೆರಳಾಡಿಸುತ್ತ ಕೊಳಲನು
ಇದ್ದಷ್ಟೂ ಉಸಿರ ಒತ್ತಿ ಒತ್ತಿ
ನಗುವ ಮಗುವಿಗಾಗಿ
ಅದೇನೋ ಹರ್ಷ ತುಂಬಿದೆ
ಆ ಮುದಿ ಜೀವದೊಳಗೀಗ
ಚಲಿಸುವ ಬೆರಳಿಗೆ
ಹೊಸ ಸಂಚಲನ
ಚಪ್ಪಾಳೆ ತಟ್ಟಿ ತಟ್ಟಿ ನಗುತ್ತಿದೆ ಮಗು
ಕೊಳಲೂದಿದಷ್ಟೂ ಅದಕೆ ಸಂತಸ
ಅಜ್ಜನ ಬಾಯಿಂದ ಬರುವ ಶಬ್ದ
ಅದೇನೋ ಹೊಸತು
ಹಿರಿಯೆದೆಯೊಳಗೆ ನೋವಿನುಸಿರು
ಬಿದಿರ ಅಂಡೆಯಲಿ ಅಪಸ್ವರ
ಒಸರುತ್ತಿದೆ ಮಬ್ಬು ಕಂಗಳಲಿ
ಅಂತರಾಳದ ಅಶ್ರು
ನಗುತ್ತಲೇ ಇದೆ ಮಗು ಕೈ ತಟ್ಟಿ
ತಳ್ಳು ಕುರ್ಚಿಯೊಳಗೆ ಕುಳಿತು
ವಿಕಲಚೇತನನೆದೆಯಲ್ಲಿ
ಅಜ್ಜನೂದುವ ಕೊಳಲಗಾನ






ಹಿನ್ನೆಲೆ ಗೊತ್ತಾಗಲಿಲ್ಲ.ಬಹಷ ಕಂಡ ನೇರ ಅನುಭವ ಇರಬೇಕು.ಕೊಳಲ ಸರವೇ ಹಹಾಗೆ ಮಾಯದ ಗಾಯಗಳನು ಮಾಯಿಸಬಲ್ಲದು.ನೊಂದ ಹೃದಯಗಳ ಸಸಂತೈಸಬಲ್ಲದು..ಬಿದಿರಿಗೆ ಜೀವ ತಂದ ಉಸಿರಿಗೆ ಕೋಟಿ ನಮನ.ಪದ್ಯ ಹೃದ್ಯ