ಅಕ್ಷತಾ ಕೃಷ್ಣಮೂರ್ತಿ
ಇರಬೇಕು ನಾನೂ
ಮರದಂತೆ
ಬೆಂದರೂ ನಗುವುಳಿಸುವ
ಶಾಲ್ಮಲೆಯಂತೆ
ಅರಳಿ
ಎಲ್ಲ ನೋಟಗಳಿಗೆ
ಖುಷಿಯನ್ನಿತ್ತು
ಬಾಳಬೇಕು
ಶಾಲ್ಮಲೆಯಂತೆ
ಪರಿಮಳವ ನಿಮ್ಮೆದೆಗೆ
ತುಂಬಿ
ನಿರ್ಗಂಧದ
ಹಾಡಾಗಬೇಕು
ನಾನು ನಿನ್ನಂತೆ
ಗಾಳಿಯಲಿ ತೇಲುವ
ಕಾರ್ತಿಕದ ದೀಪವಾಗಬೇಕು

ಶಾಲ್ಮಲಿ
ಬೇಸಿಗೆಯ ಧಗೆ
ಸುಟ್ಟರೂ
ಹೂವರಳಿಸುವ ಹೊಸ
ಹಾಡಾಗಬೇಕು ನಾನು
ಕೆಂಪಾಗಬೇಕು ನಿನ್ನ
ಓಕುಳಿಯ ವಸಂತಕೆ
ಶಾಲ್ಮಲಿ
ಸುಗ್ಗಿ ಕಾಲದ
ಹಿಗ್ಗಾಗಬೇಕು
ನಾನು
ಒಂದು ದಿನದ ಬಾಳು
ಐದಳವ ಅರಳಿಸಿಹೆ ನೀನು
ಇರುವಷ್ಟು ಉಸಿರಲಿ
ತೊರೆದು ಸಾವಿರ ನೋವ
ಆಸರೆಯಾಗಬೇಕು
ಎಲ್ಲ ಚಿಲಿಪಿಲಿಗಳಿಗೆ
ಹೊಸ ಹಾಡ ಕಟ್ಟಿ
ಬೆಳೆದುಬಿಡಬೇಕು
ನಿನ್ನಂತೆ
ಬಾನೆತ್ತರಕ್ಕೆ….






ಸರಳ ಹಾಗೂ ರಮ್ಯ ಕವಿತೆ…
ಅಕ್ಷತಾ..
ಸುಂದರ ಭಾವ