Thank You
ಬೇಲೂರು ರಘುನಂದನ್ ಸದಾ ಚಟುವಟಿಕೆಯ ವ್ಯಕ್ತಿ. ‘ಕಾಜಾಣ’ ಹಕ್ಕಿಯಂತೆ. ಉಮಾಶ್ರೀ ಅವರನ್ನು ಅವರು ಕಟ್ಟಿಕೊಟ್ಟ ಬಗೆ ಅನನ್ಯ. ಉಮಾಶ್ರೀ ಅವರ ಬಗ್ಗೆ ಇನ್ನಷ್ಟು ಗೌರವ ಮೂಡಲು ಅವರ ಈ ಸರಣಿ ಬರಹ ಕಾರಣವಾಗಿದೆ
ಅವಧಿಗೆ ಉಮಾಶ್ರೀ ಕುರಿತ ಮಾಲಿಕೆ ಬರೆದದ್ದಕ್ಕಾಗಿ ಅವರಿಗೆ ತುಂಬು ವಂದನೆಗಳು. ಈ ಸರಣಿಯ ಕೊನೆಯ ಕಂತು ಇಲ್ಲಿದೆ
ಬೇಲೂರು ರಘುನಂದನ್
ಅಮ್ಮ ನೀವು ಮಂತ್ರಿ ಆದ ಮೇಲೆ ಇದು ಮೂರನೇ ಕನ್ನಡ ರಾಜ್ಯೋತ್ಸವ ಸಮಾರಂಭ. ಹಾಗೂ ಮೂರನೇ ರಾಜ್ಯೋತ್ಸವ ಪ್ರಶಸ್ತಿಗಳ ಆಯ್ಕೆಯ ಮುಂದಾಳತ್ವ. ಮೊದಲ ವರ್ಷದ ರಾಜ್ಯೋತ್ಸವದ ಆಯ್ಕೆ ಕುರಿತು ಅನಂತಮೂರ್ತಿ ಸರ್ ನನ್ನ ಬೆತ್ತಲು’ ಪುಸ್ತಕಕ್ಕೆ ಬೆನ್ನುಡಿ ಬರೆಯುವ ಸಂದರ್ಭದಲ್ಲಿ ಮೆಚ್ಚಿ ಮಾತಾಡಿದ್ದರು. “ ರಾಜ್ಯೋತ್ಸವದ ಆಯ್ಕೆ ನೋಡಿ ಎಷ್ಟು ಅಚ್ಚುಕಟ್ಟಾಗಿ ಮಾಡಿದ್ದಾರೆ. She is committed lady “ ಎಂದು ಹೇಳಿದ್ದರು.
ಮೇಷ್ಟ್ರು ಹೇಳಿದ ಮಾತು ರಾಜ್ಯೋತ್ಸವ ಪ್ರಶಸ್ತಿಯ ವಿಚಾರದಲ್ಲಿ ನೂರಕ್ಕೆ ನೂರು ಸರಿ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯವೇ. ಯಾಕೆಂದರೆ ಉಮಾಶ್ರೀ ಬರುವ ತನಕ ಎಸ್. ಜಾನಕಿ ಅಮ್ಮನಿಗೆ, ಪ್ರತಿಷ್ಠಿತ ಕನ್ನಡ ಸಾಹಿತ್ಯ ಪರಿಷತ್ತಿಗೆ, ಹಸೆ ಬರೆಯುವ ಕಲಾವಿದೆಗೆ, ಬಿರಾದಾರ್ ಎಂಬ ಬಹು ದೊಡ್ಡ ಕಲಾವಿದನಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕು ಎಂದು ಹಿಂದ ಯಾವ ಸರ್ಕಾರಗಳಿಗೂ ಅನ್ನಿಸಿಯೇ ಇಲ್ಲ.
ಈ ಸಲವೂ ಅಷ್ಟೇ ಎ. ಜೆ. ಸದಾಶಿವ, ಸಾಹುಕಾರ್ ಜಾನಕಿ, ಸಾಧುಕೋಕಿಲ, ಸದಾಶಿವ ಬ್ರಹ್ಮಾವರ ಹೀಗೆ ಸಮರ್ಥರನ್ನು ಗುರುತಿಸಿದ್ದೀರಿ. ಹಾಗೆಯೇ ಹೆಸರೇ ಗೊತ್ತಿರದ ಸಾಧಕರನ್ನು ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯದ ಅಡಿ ಗುರುತಿಸಿದ್ದೀರಿ. ಇದೆಲ್ಲಾ ನಿಜಕ್ಕೂ ಅಭಿನಂದನೀಯ ವಿಷಯ. ಈ ಮೂಲಕವಾದರೂ ನಮಗೆಲ್ಲಾ ಅವರು ಪರಿಚಯವಾದರು. ಸದಾ ಸುಳಿದಾಡುವ ಹೆಸರುಗಳನ್ನ ಸರಿಸಿ ನಿಜವಾಗಿಯೂ ಕೆಲಸ ಮಾಡಿದವರನ್ನು ಹುಡುಕಿ ತೆಗೆದಿರುವುದು ನಿಜಕ್ಕೂ ಕನ್ನಡದ ಜನತೆ ಅಭಿನಂದಿಸುವಂಥಹ ವಿಷಯ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಮೊದಲ ಕಾಗದ ರಹಿತ ಇಲಾಖೆಯನ್ನಾಗಿ ಮಾಡಿದ್ದು, ಕಲಾವಿದರಿಗೆ ಮಾಶಾಸನ ಹೆಚ್ಚಿಸಿದ್ದು, ಇದಲ್ಲದೇ ಸಮರ್ಥರಿಗೆ ಪ್ರಶಸ್ತಿಗಳನ್ನು ಸಿಗುವಂತೆ ನೋಡಿಕೊಂಡಿರುವುದು ಹೀಗೆ ಅನೇಕ ವಿಷಯಗಳಲ್ಲಿ ತಾವು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ್ದೀರಿ.
ಈ ಬಾರಿಯ ರಾಜೋತ್ಸವ ಪ್ರಶಸ್ತಿಯನ್ನು ಅಕ್ಕೈ ಪದ್ಮಸಾಲಿ ಕೊಟ್ಟಿದ್ದು ನಿಜಕ್ಕೂ ಸ್ವಾಗತಾರ್ಹ. ಅಗತ್ಯವಾಗಿದ್ದ ಕಾರ್ಯ ಕೂಡ. ಆದ್ರೆ ಅಕ್ಕೈಗೆ ಕೂಡ ಇದು ದಕ್ಕಿದ್ದು ಅಲ್ಲಲ್ಲಿ ಕಾಣಿಸಿಕೊಂಡಿದ್ದಕ್ಕೆ, ಪ್ರಭುತ್ವದ ಗಮನಕ್ಕೆ ಬಂದಿದ್ದಕ್ಕೆ. ಅಕ್ಕೈ ಗಿಂತ ಅದೆಷ್ಟೋ ಹಿರಿಯ ಮಂಗಳ ಮುಖಿಯರು ಮನೆ ಬಿಟ್ಟು ಬಂದ ಜೀವಗಳನ್ನು ಎಲ್ಲ ರೀತಿಯಲ್ಲೂ ಪೊರೆಯುತ್ತಿರುವ ಉದಾಹರಣೆಗಳು ನಮ್ಮಲ್ಲಿಯೇ ಇವೆ.
ನಾನು ಸೂಲಿಬೆಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ಹೊಸಕೋಟೆಯಲ್ಲಿ 65 ವರ್ಷದ ರಾಮಮ್ಮ ಎನ್ನುವ ಒಬ್ಬ ಮಂಗಳಮುಖಿ ಕೂಲಿ ಮಾಡುತ್ತಾ ನಾಲ್ಕು ಅನಾಥ ಮಕ್ಕಳನ್ನು ಓದಿಸುತ್ತಿದ್ದರು. ಅವರ ಬದುಕಿನ ಆಶಯ ಕಾಳಜಿಗಳನ್ನು ಗೌರವಿಸುತ್ತಲೇ ಮನುಷ್ಯತ್ವದ ನೆಲೆಯನ್ನು ನನ್ನ ಒಳಗೆ ಹುಡುಕಿಕೊಳ್ಳುವಂತೆ ಮಾಡಿಬಿಟ್ಟಿದ್ದರು ಅವರು. ಅವರು ಯಾರ ಗಮನಕ್ಕೂ ಬರುತ್ತಲೇ ಇರಲಿಲ್ಲ. ಆ ರೀತಿಯ ಉಮೇದು ಕೂಡ ಅವರಿಗೆ ಇರಲಿಲ್ಲ. ಇದೂ ಕೂಡ ಕನ್ನಡ ಮಣ್ಣಿನ ಸಂಸ್ಕೃತಿಯಂತಲೇ ನನ್ನ ಭಾವನೆ.
ಕಲೆ ಕುಶಲತೆಯ ವಿಚಾರದಲ್ಲಿ ಸಾಧನೆ ಎಂದ ಕೂಡಲೇ ಸಾಹಿತಿಗಳನ್ನು, ಕಲಾವಿದರನ್ನು ನೋಡುವ ಪರಿಪಾಠ ನಿಜಕ್ಕೂ ಅಪೂರ್ಣವಾದ ಸಂಗತಿಯೇ. ಯಾಕೆಂದರೆ ಒಬ್ಬ ನೇಕಾರ ತನ್ನ ಬದುಕಿನ ಉದ್ದಕ್ಕೂ ತನ್ನ ಪ್ರತಿಭಾ ಶಕ್ತಿಯಿಂದಲೇ ಅನುಭವಿಯಾಗಿ ಅನೇಕ ಕಲಾಕೃತಿಯನ್ನು ಕೊಟ್ಟಿರುತ್ತಾನೆ . ಒಬ್ಬ ಕುಂಬಾರ, ಒಬ್ಬ ಚಮ್ಮಾರ, ಒಬ್ಬ ಮೇದಾರ, ಒಬ್ಬ ದರ್ಜಿ, ಒಬ್ಬ ಆಚಾರಿ, ಒಬ್ಬ ಗಾಣಿಗ, ಒಬ್ಬ ಕ್ಷೌರಿಕ ಹೀಗೆ ಅನೇಕರು ಕಲೆ ಕುಶಲತೆಯನ್ನೇ ತನ್ನ ಕಸುಬಾಗಿಸಿಕೊಂಡು ಸಮಾಜವನ್ನು ಮನುಷ್ಯ ನಾಗರೀಕತೆ ಬೆಳೆದಾಗಿನಿಂದ ಪೋರೆಯುತ್ತಲೇ ಬಂದಿರುತ್ತಾರೆ. ಇವರೆಲ್ಲರ ಕಲಾ ಶಕ್ತಿಯನ್ನು ನಾವೆಲ್ಲಾ ಎಂದೆಂದೂ ಅನುಭವಿಸಿದ್ದೇವೆ. ತೊಟ್ಟಿದ್ದೇವೆ, ಉಟ್ಟಿದ್ದೇವೆ, ಮೆರೆದಿದ್ದೇವೆ.
ಆದರೆ ಇವರಿಗೆಲ್ಲಾ ಒಂದು ಸಣ್ಣ ಮನ್ನಣೆಯನ್ನು ಕೂಡ ನಾವು ಇದುವರೆಗೂ ಎಲ್ಲೂ ಕೊಟ್ಟಿಲ್ಲ. ಕಲೆಯನ್ನೇ ನಂಬಿ ಬದುಕು ಕಟ್ಟಿಕೊಂಡವರು ಇವರು, ನಿಜಕ್ಕೂ ಒಂದು ಗ್ರಂಥದಷ್ಟು ಬಯೋಡೇಟಾ ಸಿದ್ಧ ಮಾಡಿಕೊಳ್ಳೋ ಸಾಧಕರಿಗಿಂತ ಬಹಳ ಎತ್ತರದಲ್ಲಿ ನಿಂತುಬಿಡುತ್ತಾರೆ. ಇವರೆಲ್ಲರ ಅಭಿವ್ಯಕ್ತಿ ಕನ್ನಡ ನಾಡು ನುಡಿ ಸಂಸ್ಕೃತಿಗೆ ಕೊಟ್ಟಿರುವ ಕಾಣ್ಕೆಯನ್ನು ಗಮನಿಸಿದರೆ ಯಾವ ಪ್ರಶಸ್ತಿಯೂ ಇವರೆಲ್ಲರ ಮುಂದೆ ನಿಲ್ಲದು. ಆದರೂ ಇವರ ಬದುಕು, ಸಾಮಾಜಿಕ ಗೌರವ ಮಾತ್ರ ಅಷ್ಟಕ್ಕೆ ಅಷ್ಟೇ. ಬಹುಶಃ ಬುದ್ಧ, ಬಸವ, ಕುವೆಂಪು ಹೇಳಿದ ಪೂರ್ಣದೃಷ್ಟಿಯ ಪಾಠ ಇಷ್ಟು ಶತಮಾನಗಳು ಉರುಳಿದರೂ ನಮ್ಮೆಲ್ಲರ ಮೈಗೆ ಮೆದುಳಿಗೆ ಇನ್ನೂ ಹತ್ತಿಲ್ಲವೇನೋ ಎನ್ನುವ ಆತಂಕ ಸದಾ ಕಾಡುತ್ತದೆ.
ರಾಜ್ಯೋತ್ಸವ ಪ್ರಶಸ್ತಿಗೆ ವಯೋವೃದ್ಧ ಸಾಧಕರಿಗೆ ಮನ್ನಣೆ ಕೊಡುವುದೇನೋ ಸರಿ. ಅದಕ್ಕೆ ಇಡೀ ನಾಡು ಗೌರವಿಸಿದೆ ಕೂಡ. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಯುವ ತಲೆಮಾರಿಗೆ ಇಲಾಖೆಯ ವತಿಯಿಂದ ಕಡೇ ಪಕ್ಷ ಒಂದು ಸಣ್ಣ ಪ್ರಶಸ್ತಿಯಾಗಲೀ ಮನ್ನಣೆಯಾಗಲಿ ಆಗಲಿ ಇಲ್ಲ. ಇದೇ ರಂಗಭೂಮಿಗೆ ತನ್ನ ಬದುಕು ಎಂದು ದುಡಿಯುತ್ತಿರುವ ಯುವ ತಲೆಮಾರು ಇದೆ. ಸಮರ್ಥ ಯುವ ಸಾಹಿತಿಗಳ ಸಾಲು ಸಾಲು ಪಡೆಯೇ ಇದೆ. ಯಕ್ಷಗಾನ, ಚಿತ್ರಕಲೆ, ಸಂಗೀತ, ನೃತ್ಯ, ಸಂಘಟನೆ ಹೀಗೆ ಸಂಸ್ಕೃತಿ ಇಲಾಖೆಯೇ ‘ಸಂಸ್ಕೃತಿ’ ಎಂದರೆ ಇದು ಎಂದು ಗಮನಿಸಿ ಮಾಡಿರುವ ವಿಭಾಗಳಲ ಪಟ್ಟಿಯಲ್ಲಿ ನಾಡಿನಾದ್ಯಂತ ಯುವಕರು ಗಟ್ಟಿಯಾಗಿ ಕೆಲಸ ಮಾಡುತ್ತಿರುವರು ಇದ್ದಾರೆ. ಅವರನ್ನೂ ಕೂಡ ಗುರುತಿಸಿ ಪ್ರೋತ್ಸಾಹ ಕೊಟ್ಟರೆ ಸಾಕು.
ದೊಡ್ಡ ದೊಡ್ಡ ಪ್ರಶಸ್ತಿ ಚಿನ್ನದ ಪದಕ ಇವೆಲ್ಲಾ ಏನೂ ಇಲ್ಲದಿದರೂ ಯುವ ತಲೆಮಾರಿಗೆ ಬೇಕಿರುವುದು ಬೆನ್ನುತಟ್ಟುವ ಕೈಗಳು. ತಾಯಂತೆ ಮಿಡಿಯುವ ಗುಣ ಇರುವ ನಿಮಗೆ ಇದನ್ನು ಸಾಧ್ಯ ಮಾಡುವುದು ಕಷ್ಟ ಇಲ್ಲ ಎನ್ನುವುದು ನನ್ನ ಭಾವನೆ. ಆಮೇಲೆ ಇದನ್ನು ನಾಡಿನ ಯುವ ಜನತೆಯ ಪರವಾಗಿ ಹಾಕಿರುವ ಅರ್ಜಿ ಎಂದು ದಯಮಾಡಿ ಭಾವಿಸುವುದು ಬೇಡ. ಕನ್ನಡ ತನಕ್ಕೆ ಈ ಮಣ್ಣಿನ ಯುವ ಜೀವಗಳು ಸಾಕಷ್ಟು ಕೆಲಸ ಮಾಡುತ್ತಿದೆ. ಅವರನ್ನೆಲ್ಲಾ ಗಮನಿಸಬೇಕು ಅನ್ನುವುದು ಅಷ್ಟೇ ನನ್ನ ಮಡಿಲಿಗೆ ಕೋರಿಕೆ. ಇದೆಲ್ಲಾ ನಿಮ್ಮ ಗಮನದಲ್ಲೂ ಇರುತ್ತದೆ ಎನ್ನುವುದು ನನ್ನ ನಂಬಿಕೆ ಕೂಡ.
ಅಂದಹಾಗೆ ಮೊನ್ನೆ ಮೊನ್ನೆ ಉಷಾಕಟ್ಟೆಮನೆಯವರು ಫೇಸ್ ಬುಕ್ಕಿನಲ್ಲಿ ಕಲಾಗ್ರಾಮದ ವಿದ್ಯುತ್ ಸಮಸ್ಯೆಯನ್ನು ಕುರಿತು ಹಾಕಿದ್ದ ಸ್ಟೇಟಸ್ ನಿಮ್ಮ ಗಮನಕ್ಕೆ ತಂದಿದ್ದೆ. ತಾವು ಅದನ್ನು ಬಹು ಬೇಗ ನಿವಾರಿಸಿಕೊಟ್ಟಿದ್ದೀರಿ. ರಂಗ ಚಟುವಟಿಕೆಗಳು ಸರಾಗವಾಗಿ ನಡೆಯಲು ದಾರಿ ಮಾಡಿಕೊಟ್ಟಿದ್ದೀರಿ. ನಾಡಿನಾದ್ಯಂತ ಎಲ್ಲ ರಂಗ ಮಂದಿರಗಳಿಗೂ ಏಕ ರೂಪದ ಬಾಡಿಗೆಯನ್ನು ತಂದಿದ್ದು ಕೂಡ ಅನೇಕ ಸಂಘಟಕರಿಗೆ ಉಸಿರುಬಿಡುವಂತಾಗಿದೆ. ಹೀಗೆ ಕನ್ನಡ ಕೆಲಸವನ್ನು ಮಾಡುತ್ತಿರುವ ನಿಮಗೆ ಖಂಡಿತವಾಗಿಯೂ ಕನ್ನಡದ ಗೌರವವಿದೆ.
ಇಷ್ಟರ ನಡುವೆಯೂ ಈ ಹೊತ್ತು ಓದು ಬರಹ ಆಲೋಚನೆ ಅಭಿವ್ಯಕ್ತಿ ಎಲ್ಲವೂ ಒಂದು ರೀತಿಯ ಉಸಿರುಗಟ್ಟಿರುವ ವಾತವರಣದಲ್ಲಿ ಕಲೆ ಸಾಹಿತ್ಯ ಅಭಿವ್ಯಕ್ತಿ ಎಲ್ಲವೂ ತೆರೆಯ ಮರೆಗೆ ಕಳುಹಿಸಿ ಒಂದು ಬಹುದೊಡ್ಡ ಗುಡಾಣ ಶಕ್ತಿ ಬಂದು ಎಲ್ಲ ಕಡೆಯೂ ಪ್ರತಿಷ್ಠಾಪನೆ ಆಗುತ್ತಿದೆ. ಹೀಗಿರುವ ಕಾಲಮಾನದಲ್ಲಿ ನಾಡು ನುಡಿಯ ಸಂಸ್ಕೃತಿಯ ಬಗೆಗೆ ತನ್ನಿಂದ ತಾನೇ ದನಿ ಉಡುಗಿಸಿಕೊಳ್ಳುವಂತಾಗಿದೆ. ಮಾರುಕಟ್ಟೆ ತಂತ್ರಜ್ಞಾನ ಇವೆಲ್ಲವನ್ನೂ ತಿನ್ನುತ್ತಿರುವ ಈ ಕಾಲಕ್ಕೆ ಅಭಿವ್ಯಕ್ತಿ ಕೂಡ ಕಾರ್ಟೂನ್ ಪ್ರಸಾರದ ರೀತಿ ಆಗುವಂತೆ ಬೆನ್ನ ಹಿಂದಿನ ಲೋಕ ಮಾಡುತ್ತಿದೆ.
ಇದೆಲ್ಲದರ ನಡುವೆ ನಿಮಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಹೇಳಬೇಕಾಗಿದೆ.
Dear raghunandan sir, thanks for writing such a real column about umashree amma. She is really working hard and a kind hearted also . We all love her too. you helped us to know more about our umashree amma. Thank you sir
ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
U have really showed the real umashree through ur research. Fantastic work raghu. Ur hard work will always keep u on the top and lead u to ur goal.
ರಘುನಂದನ್,
ಒಬ್ಬ ಅದ್ಭುತ ಸಾಧಕಿಯ ಬಗ್ಗೆ ತುಂಬ ಸುಂದರ ಸರಣಿ ಕಟ್ಟಿಕೊಟ್ಟಿರಿ. ನಿಮಗೂ “ಅವಧಿ” ಬಳಗಕ್ಕೂ ಧನ್ಯವಾದಗಳು.
ಆತ್ಮೀಯ, ರಘುನಂದನರವರೆ
ತಮ್ಮ ಯುವಕರ ಮೇಲಿನ ಪ್ರೀತಿ, ಕಾಳಜಿ ಮೆಚ್ಚುವಂತಹದು, ಯುವಕರನ್ನು ಪ್ರೋತ್ಸಾಹಿಸುವಲ್ಲಿ ಅಮ್ಮ ಹಿಂದೆ ಬೀಳಲ್ಲ. ಯುವಕರಿಗೆ ಉತ್ತಮ ಪ್ರೋತ್ಸಾಹ ಸಿಕ್ಕೆ ಸಿಗುತ್ತದೆ ಎಂಬುದು ನನ್ನ ನಂಬಿಕೆ.
ತಮ್ಮಿಂದ ಉಮಾಶ್ರೀಯವರ ಬಗ್ಗೆ ತಿಳಿದು ಕೊಳ್ಳಲು ಅನುಕೂಲವಾಯಿತು.