ಎಚ್ ಬಿ ದಿನೇಶ್
ಕನ್ನಡದ ಹೆಮ್ಮೆ , ಕನ್ನಡದ ಆಸ್ತಿ ಪ್ರೊ. ಜಿ ವೆಂಕಟಸುಬ್ಬಯ್ಯ ಅವರು ಇನ್ನಿಲ್ಲ. ಕನ್ನಡ ಸಾರಸ್ವತ ಲೋಕದ ಶತಾಯುಷಿ ಕನ್ನಡ ಪತ್ರಿಕೋದ್ಯಮಕ್ಕೆ ನೀಡಿರುವ ಕೊಡುಗೆ ‘ಪತ್ರಿಕಾ ಪದಕೋಶ’. ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಕಟಿಸಿರುವ ಪತ್ರಿಕಾ ಪದಕೋಶದ ಸಂಪಾದಕರಾಗಿದ್ದ ಅವರು ಪದಕೋಶಕ್ಕೆ ಸರಿಹೊಂದುವ ಪ್ರತಿ ಪದವನ್ನು ಆಯ್ಕೆ ಮಾಡಲು ತೆಗೆದುಕೊಳ್ಳುತ್ತಿದ್ದ ಶ್ರಮ ಇಂದಿಗೂ ನನ್ನ ಕಣ್ಮುಂದೆ ಇದೆ.
ಹಿರಿಯ ಪತ್ರಕರ್ತ ಕೆ ಶ್ರೀಧರ ಆಚಾರ್ ಅವರು ಕರ್ನಾಟಕ ಪತ್ರಿಕಾ ಅಕಾಡೆಮಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ (1995-97) ಸಿದ್ದಗೊಂಡ ಪತ್ರಿಕಾ ಪದಕೋಶ ಅಂದಿನ ದಿನಗಳಲ್ಲಿ ಬೇಡಿಕೆಯಲ್ಲಿದ್ದ ಪ್ರಕಟಣೆ. ಪತ್ರಿಕೆಗಳಿಗೆ ಪ್ರತ್ಯೇಕವಾದ ಪದಕೋಶ ಅಗತ್ಯತೆಯನ್ನು ಮನಗೊಂಡ ಅಂದಿನ ಅಕಾಡೆಮಿಯ ಅಧ್ಯಕ್ಷರು, ವೆಂಕಟಸುಬ್ಬಯ್ಯ ಅವರ ಮುಂದೆ ತಮ್ಮ ಪ್ರಸ್ತಾವನೆಯನ್ನು ಮಂಡಿಸಿದಾಗ ‘ಪತ್ರಿಕೆಗಳು ಪ್ರತಿದಿನ ಹೊಸ ಹೊಸ ಪದಗಳನ್ನು ಬಳಕೆಗೆ ತರುತ್ತಿವೆ. ಆ ಸ್ವಾತಂತ್ರ್ಯ ಪತ್ರಿಕೆಗಳಿಗೆ ಇರಲಿ’ ಎಂದಿದ್ದರು.
ಪದಕೋಶದ ಅಗತ್ಯತೆಯನ್ನು ವೆಂಕಟಸುಬ್ಬಯ್ಯ ಅವರಿಗೆ ಮನವರಿಕೆ ಮಾಡಿ ಅವರನ್ನು ಒಪ್ಪಿಸಲು ಶ್ರೀಧರ್ ಆಚಾರ್ ಮತ್ತು ಸದಸ್ಯರು ತಮ್ಮ ಎಲ್ಲ ಅನುಭವಗಳನ್ನು ಅವರ ಮುಂದೆ ಪ್ರತಿಪಾದಿಸ ಬೇಕಾಯಿತು. ಕೊನೆಗೂ ಒಪ್ಪಿದ ವೆಂಕಟಸುಬ್ಬಯ್ಯ ಅವರು ನಿರಂತರವಾಗಿ ಒಂದು ವರ್ಷಗಳ ಕಾಲ ಹಿರಿಯ ಪತ್ರಕರ್ತರು ಹಾಗೂ ತಜ್ಞರೊಡನೆ ಚರ್ಚಿಸಿ ‘ಪದಕೋಶ’ವನ್ನು ಸಜ್ಜುಗೊಳಿಸಿದರು. ಆ ಸಂದರ್ಭದಲ್ಲಿ ಪತ್ರಿಕಾ ಅಕಾಡೆಮಿ ಕಾರ್ಯದರ್ಶಿಯಾಗಿ ಅವರೊಡನೆ ಕರ್ತವ್ಯ ನಿರ್ವಹಿಸಿದ್ದು ನನ್ನ ಸವಿ ನೆನಪುಗಳಲ್ಲಿ ಬಹು ಪ್ರಮುಖ.
0 ಪ್ರತಿಕ್ರಿಯೆಗಳು