
ವಿನತೆ ಶರ್ಮ
ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ನೆಲಸಿದ್ದಾರೆ. ಅಲ್ಲಿನ ಕನ್ನಡ ಚಟುವಟಿಕೆಯಲ್ಲಿ ಸಕ್ರಿಯ.
ಅವಧಿಯಲ್ಲಿ ಇವರ ಹಲವಾರು ಕವಿತೆ, ಲಹರಿಗಳು ಪ್ರಕಟವಾಗಿದೆ

ಕೆಲ ವರ್ಷಗಳ ಹಿಂದೆ ನನ್ನ ಸಹೋದ್ಯೋಗಿಯೊಬ್ಬರು (ಬಿಳಿಯ, ಪಾಶ್ಚಾತ್ಯ) ಭಾರತದ ಒಂದು ವಿಶ್ವ ವಿದ್ಯಾನಿಲಯ ಏರ್ಪಡಿಸಿದ್ದ ಕಾನ್ಫರೆನ್ಸ್ ನಲ್ಲಿ ಭಾಗವಹಿಸಲು ಹೋಗಿದ್ದರು, ಹೋಗುವ ಮುನ್ನ ನಾನು ಭಾರತೀಯಳು ಎಂದು ನನ್ನ ಬಳಿ ಹೋಗುವ ಸಮಾಚಾರವನ್ನು ಹಂಚಿಕೊಂಡಿದ್ದರು.
ಕೆಲ ದಿನಗಳ ಬಳಿಕ ಅವರನ್ನ ನೋಡಿದಾಗ, ಭಾರತಕ್ಕೆ ಅವರ ಮೊತ್ತ ಮೊದಲ ಭೇಟಿ ಹೇಗಿತ್ತು, ಕಾನ್ಫರೆನ್ಸ್ ಹೇಗೆ ನಡೆಯಿತು, ಅವರ ಸಂಶೋಧನಾ ವಿಷಯದಲ್ಲಿ ಇತರೆ ಭಾಗಿಗಳು ಆಸಕ್ತಿ ತೋರಿದರಾ ಎಂದೆಲ್ಲಾ ಕೇಳಿದೆ. ಅವರು ಹೇಳಿದ ಮೊದಲ ಮಾತು “ಓಹ್ ಐ ಡೋಂಟ್ ವಾಂಟು ಟಾಕ್ ಅಬೌಟ್ ಇಟ್, ಇಟ್ ವಾಸ್ ಟೆರಿಬಲ್ ” ಎಂದು.
ಮುಖದಲ್ಲಿ ಏನೋ ಆತಂಕ, ಗಂಭೀರತೆ. ಇದ್ಯಾಕಪ್ಪಾ ಹೀಗೆ ಎಂದೆನಿಸಿ, ಏನಾಯಿತು ಎಂದು ಕೇಳಿದರೆ ಹತ್ತಿರವೇ ಇದ್ದ ಕಿಚನೆಟ್ ಗೆ ನಡೆದು ಮೆಲ್ಲನೆ ದನಿಯಲ್ಲಿ ಹೇಳಿಕೊಂಡರು – ಕಾನ್ಫರೆನ್ಸ್ ಮೊದಲ ದಿನದ ಅನುಭವ, ವಿಷಯಗಳ ಮಂಡನೆ ಚೆನ್ನಾಗಿತ್ತು, ಪಾಶ್ಚಿಮಾತ್ಯ ವಿಶ್ವ ವಿದ್ಯಾನಿಲಯಗಳಂತೆ ಅಲ್ಲ, ಸ್ವಲ್ಪ ಭಿನ್ನ. ಆದರೆ ಆ ಟೆರಿಬಲ್ ಅನುಭವ ಆಗಿದ್ದು ರಾತ್ರಿಯ ಭೋಜನ ಮುಗಿಸಿ, ತಮಗೆ ಕೊಟ್ಟಿದ್ದ ಅಕಾಮಡೆಶನ್ ಗೆ ಹೋದಾಗ.
ಅಲ್ಲಿ ಟ್ವಿನ್ ಶೇರ್ ಅಂತ ಹೇಳಿ ಒಂದು ಡಬಲ್ ಮಂಚಕ್ಕೆ ಇಬ್ಬರು ಎಂದು ಇತ್ತು. ಅಪ್ರತಿಭನಾದೆ. ಆ ಕ್ಷಣಕ್ಕೆ ಮತ್ತೊಬ್ಬನ ಪ್ರವೇಶವಾಯಿತು. ನಾನು ಅವನನ್ನು ಕೇಳಿದೆ “ನಿನಗೆ ಈ ಟ್ವಿನ್ ಶೇರ್ ಡಬಲ್ ಮಂಚದ ವಿಷಯ ತಿಳಿದಿತ್ತಾ?” ಆವ ಹೇಳಿದ ” ನೋ. ವೆಲ್ ದೇರ್ ಇಸ್ ನಥಿಂಗ್ ರಾಂಗ್. ಐ ಸ್ಲೀಪ್ ಆನ್ ದಟ್ ಸೈಡ್ ಯು ಸ್ಲೀಪ್ ದಿಸ್ ಸೈಡ್ ” ಅಂತ ಹೇಳಿ ಬಾತ್ ರೂಂ ಗೆ ನಡೆದ. ನನಗೆ ಇದು ನಂಬಲಾರದ ವಿಷಯ, ಒಂದು ಜೋಕ್ ಎನಿಸಿತು.
ಒಂದೇ ಹಾಸಿಗೆಯಲ್ಲಿ ಮತ್ತೊಬ್ಬ ಅಪರಿಚಿತ ಗಂಡಸಿನ ಪಕ್ಕ ಮಲಗುವುದು ಇಂಪಾಸಿಬಲ್ ಎಂದು ಹೊರಹೋಗಿ ಕಾನ್ಫರೆನ್ಸ್ ಏರ್ಪಾಡುದಾರರನ್ನ ಬೇರೆ ರೂಂ ಇದೆಯೇ ಎಂದು ಕೇಳಿ, ಇಲ್ಲವೆಂದು ಖಾತ್ರಿಯಾದಾಗ ನನಗುಳಿದಿದ್ದು ಒಂದೇ ದಾರಿ. ತಕ್ಷಣವೇ ನನ್ನ ಬ್ಯಾಗ್ ಪ್ಯಾಕ್ ಮಾಡಿಕೊಂಡು, ಬಟ್ಟೆ ಬದಲಾಯಿಸಿ, ಒಂದು ಘಂಟೆ ಅವಧಿಯ ದೂರದಲ್ಲಿದ್ದ ನಗರಕ್ಕೆ ಟ್ಯಾಕ್ಸಿ ಮಾಡಿಕೊಂಡು ಹೋದೆ. ಅಲ್ಲಿ ಹೋಟೆಲ್ ನಲ್ಲಿ ತಂಗಿ ಮರು ದಿನ ವಾಪಸ್ ಕಾನ್ಫರೆನ್ಸ್ ಗೆ ಹೋದೆ. ಆ ದಿನ ರಾತ್ರಿ ಪುನಃ ಮತ್ತದೇ ಹೋಟೆಲ್ ಗೆ ಹೋಗಿ ರಾತ್ರಿ ಕಳೆದು ಮೂರನೇ ದಿನ ವಾಪಸ್ ವಿಮಾನ ಹತ್ತಿದೆ.
ನಾನು ಕೇಳಿದೆ “ಆ ಮತ್ತೊಬ್ಬ ಟ್ವಿನ್ ಶೇರ್ ವ್ಯಕ್ತಿ ಆ ವ್ಯವಸ್ಥೆಯ ಬಗ್ಗೆ ಏನೊ ಮುಜುಗರ ಪಟ್ಟುಕೊಳ್ಳಲಿಲ್ಲವಾ?” “ಇಲ್ಲ. ಆತ ಬಹಳಾ ನಾರ್ಮಲ್ ಆಗಿದ್ದ, ವಿ ಆರ್ ಯುಸೆಡ್ ಟು ಬಿಗ್ ಫ್ಯಾಮಿಲಿ ಲೈಫ್ ಅಂಡ್ ಮೆನಿ ಪೀಪಲ್ ಇನ್ ಅವರ್ ಹೋಂ ಅಂದ, ಅವನು ಇಂಡಿಯನ್ ಆಗಿದ್ದ. ಇಟ್ ವಾಸ್ ಎ ಬಿಗ್ ಕಲ್ಚರಲ್ ಲೆಸೆನ್ ಫಾರ್ ಮಿ” ಎಂದರು.
ಬರುಬರುತ್ತಾ ನಾವು ಹೆಚ್ಚು ಹೆಚ್ಚು ನಮ್ಮದೇ ನಿರ್ಮಿತ ಬಾಕ್ಸ್ ಗಳಲ್ಲಿ ನಮ್ಮನ್ನು ಇರಿಕಿಸಿಕೊಂಡು ಆ ಇಕ್ಕಟ್ಟಿನಲ್ಲಿ ಉಂಟಾಗುವ ಅನೇಕ ದ್ವಂದ್ವಗಳ ಜೊತೆ ಪಂಚ್ ಬ್ಯಾಗ್ ಬಾಕ್ಸಿಂಗ್ ನಡೆಸುತ್ತೀವಿ. ಒಂದು ಕಡೆ ನಮ್ಮ ಸೆಕ್ಷುಆಲಿಟಿ ಬಗ್ಗೆ, ಸೆಕ್ಷುಅಲ್ ಆಯ್ಕೆಗಳ ಬಗ್ಗೆ ಹೆಚ್ಚುತ್ತಿರುವ ಅರಿವು ಮತ್ತು ಹೋರಾಟ, ಇನ್ನೊಂದು ಕಡೆ ಲೇಬಲ್ ರಹಿತ ಮಾನವ ಸಂಬಂಧಗಳು ಬೆರಳುಗಳ ಮಧ್ಯೆ ಸೋರಿ ಹೋಗುತ್ತಿರುವ ವಾಸ್ತವ. ಕೆಲ ವರ್ಷಗಳ ಹಿಂದೆ ನನ್ನ ಮಗ ನೆನಪಿಸಿದ್ದ – “ಅಮ್ಮ, ನನ್ನ ಪ್ರತಿ ವಸ್ತುವಿಗೂ ಲೇಬಲ್ ಹಚ್ಚು. ಇಲ್ಲವಾದರೆ ನನ್ನ ಟೀಚರ್ ಅದನ್ನು ಒಪ್ಪುವುದಿಲ್ಲ. ನನ್ನ ವಸ್ತು ಕಳೆದು ಹೋಗುತ್ತದೆ.”
ಹಾಗೆ ನಾನಾ ತರಹದ ಲೇಬಲ್ ಸುರಕ್ಷೆ ಇಲ್ಲವಾದರೆ, ಅದು ಕಾಣದಿದ್ದರೆ, ನಾವು ಕಳೆದು ಹೋಗುವ ದಿನಗಳು ನಮ್ಮವು. ಕೆಲ ಲೇಬಲ್ ಗಳು ಬೇಕು, ಕೆಲವು ಬೇಡ – ಕೊನೆಗಾಣದ ದಾರಿ. ಒಂಥರಾ ಅವಸ್ಥೆ. ಕಳೆದುಹೋಗದ ನಮ್ಮ ಪ್ರಯತ್ನವೆಂದರೆ ಅವಸ್ಥೆಗಳನ್ನು ಪ್ರಶ್ನಿಸುವ ನಮ್ಮ ಧೈರ್ಯ, ಆ ಬಾಕ್ಸ್ ಗಳನ್ನ ಒಪ್ಪಿಕೊಳ್ಳದೆ ನಮ್ಮದೇ ಹೊಸ ಬದುಕುಗಳನ್ನು ನಿರ್ಮಿಸಿಕೊಳ್ಳುವ ಛಾತಿ, ಬೇಕಿರುವ ಎದೆಗಾರಿಕೆ.

ನೀತಾ ಎಸ್ ರಾವ್
ಬೆಳಗಾವಿ ವಾಸಿ. ಅವಧಿಯ ಲೇಖನಗಳು ಎತ್ತುವ ಅನೇಕ ಚರ್ಚೆಯಲ್ಲಿ ಭಾಗವಹಿಸಿದ್ದಾರೆ

ಹೌದು, ಮೋಹನಸ್ವಾಮಿಯ ಬಗ್ಗೆ ತಕ್ಷಣ ಪ್ರತಿಕ್ರಿಯಿಸುವುದು ಸ್ವಲ್ಪ ಕಷ್ಟದ ಕೆಲಸ. ಹೇಗೆ react ಮಾಡಬೇಕೆಂದು ಗೊತ್ತಾಗುವುದಿಲ್ಲ.
ಮೊದಲ ಸಮಸ್ಯೆಯೆಂದರೆ ಈ ಲೋಕಕ್ಕೆ ನಾವು ಹೊಸದಾಗಿ ತೆರೆದುಕೊಂಡಿರುವುದು. ಇನ್ನೂ ಹಾಗಂದರೇನೆಂಬುದು ಗೊತ್ತಿಲ್ಲದ ಸಮಸ್ಯೆ, ನನ್ನಂಥ ಕೆಲವರಿಗೆ. ಏನೋ ಕುತೂಹಲ, ಆದರೆ ಹೊರಗೆ ರಾಜಾರೋಷವಾಗಿ ಹೇಳಲಾರರು, ಯಾರನ್ನೂ ಕೇಳಲಾರರು.
ನಾವು ಚಿಕ್ಕವರಿದ್ದಾಗ ನಮ್ಮ ಶಾಲೆಯ ಹತ್ತಿರ ಗಂಡು ಧ್ವನಿಯ, ಹೆಣ್ಣುವೇಷದ, ಏನೆನ್ನಬೇಕೋ ಅವರಿಗೆ, ಅಂಥವರು ಕುಳಿತಿರುತ್ತಿದ್ದರು, ಸಣ್ಣಪುಟ್ಟ ತಿಂಡಿ ಪದಾರ್ಥ, ತರಕಾರಿ ಮಾರುತ್ತ. ನಮಗೇನೂ ಜಾಸ್ತಿ ಕುತೂಹಲವಿರಲಿಲ್ಲ. ಬೆಳಗಾವಿಯವರಿಗೆ ಆಗೆಲ್ಲ, ಸವದತ್ತಿ ಯಲ್ಲಮ್ಮನ ಇಂಥ ಭಕ್ತರ ಮುಖಾಮುಖಿ ಮೇಲಿಂದ ಮೇಲೆ ಆಗುತ್ತಿತ್ತು. ಅವರು ದೇವರಿಗೆ ಬಿಟ್ಟವರು ಎಂದಷ್ಟೇ ಏನೋ ನಮಗೆ ತಿಳಿದಿತ್ತು. ಬರುಬರುತ್ತ ಅವರ ಸಂಖ್ಯೆ ಕಡಿಮೆಯಾಯಿತು.
ಉತ್ತರ ಭಾರತದ ಕಡೆಗೆ ರೈಲಿನಲ್ಲಿ ಸೆಕೆಂಡ್ ಕ್ಲಾಸಿನಲ್ಲಿ ಪ್ರವಾಸ ಹೊರಟರೆ, ಉತ್ತರಕ್ಕೆ ಹತ್ತಿರವಾದಂತೆ ಇವರು ರೈಲು ಹತ್ತುತ್ತಾರೆ, ದುಡ್ಡು ಕೀಳುತ್ತಾರೆ, ಹಾಗಾಗಿ ಸಣ್ಣ ಭಯವೊಂದು ಮನೆ ಮಾಡಿತ್ತು, ನನ್ನಲ್ಲಿ ಅವರ ಬಗ್ಗೆ.
ಭೈರಪ್ಪನವರ “ಆವರಣ” ಕಾದಂಬರಿ ಓದಿದ ಮೇಲೆ ಭಯದ ಸ್ಥಾನದಲ್ಲಿ ಸಹಾನುಭೂತಿ ಮೂಡಿತು, ಸಹನೆಯಿಂದ ನೋಡುವುದನ್ನು ಕಲಿತಾಯಿತು. ಈಗ ಇನ್ನೂ ಎಷ್ಟೋ ಲೇಖನಗಳಲ್ಲಿ, ಅವರಿವರ ಬಾಯಿಯಿಂದ ತಿಳಿದು ಅವರ ಬಗ್ಗೆ ಅವರ ಸಮಸ್ಯೆಗಳ ಬಗ್ಗೆ ವಿಚಾರ ಮಾಡುವಂತಾಗಿದೆ.
ಮೋಹನಸ್ವಾಮಿಯಲ್ಲಿ ಇನ್ನೂ ಅನೇಕ ಕೋನಗಳಿಂದ ಅವರ ಸಮಸ್ಯೆಗಳನ್ನು ಚರ್ಚಿಸಲಾಗಿದೆ. ಕಾರ್ಪೋರೇಟ್ ಜಗತ್ತಿನಲ್ಲಿ ಒಳ್ಳೆಯ ಸಂಬಳ, ಸವಲತ್ತುಗಳೊಂದಿಗೆ ದುಡಿಯುವ ಯುವಕರ ವ್ಯಥೆಗಳೂ ಇವೆ. ಈಗೀಗ ನನ್ನಂಥವರಿಗೆ ಇವರ ಬಗ್ಗೆ ಅರಿವು ಮೂಡುತ್ತಿದೆ.
ಆ ನಿಟ್ಟಿನಲ್ಲಿ ವಸುಧೇಂದ್ರರ ಕಥಾಸಂಕಲನ “ಮೋಹನಸ್ವಾಮಿ” ಒಳ್ಳೆಯ ಕೆಲಸ ಮಾಡಿದೆ, eye-opener ಥರಾ.


ರೇಖಾ ಚಿತ್ರಗಳು ಮೋಹನಸ್ವಾಮಿ ಕೃತಿಯಲ್ಲಿ ಪ್ರಕಟವಾಗಿದೆ
ವೆಂಕಟರಮಣ ಭಟ್ ಅವರದ್ದು
ಕಾಮನಬಿಲ್ಲಿನ ಬಣ್ಣದ ಚಿತ್ರ ಆಲ್ಟ್ ಲಾ ಫೋರಂ





0 Comments