
ಬಿದಲೋಟಿ ರಂಗನಾಥ್
ಹೌದು,
ನಾನು ಬೀದಿ ಸೂಳೆ
ನೀವೆ ಅಲ್ಲವೆ ಹಾಗೆ ಮಾಡಿದ್ದು
ಈಗ ನಿಮ್ಮಿಂದಲೆ ಅಣಕದ ಮಾತೆ ?
ರಕ್ತ ಬಿಸಿ ಇರುವಾಗ ಬಸಿದು ಕೊಟ್ಟಿದ್ದು
ನೆನಪಾಗುವುದಿಲ್ಲವೆ..?
ಸೂಳೆ ಅನ್ನೋ ಪದಕ ಹಿಡಿದು
ಸತುವು ಕಳೆದುಕೊಂಡು
ತೆಪ್ಪಗೆ ಕೂತಿರುವೆ.
ನೀವೆ ಅನ್ನುವ ಮಾತನ್ನು
ನನ್ನ ಮಕ್ಕಳು ಹಾಳೆಯ ಮೇಲೆ
ಪೆನ್ನಿಡಿದು ನನ್ನ ಮುಂದೆಯೇ
ಬರೆಯುತ್ತಿವೆ…!
ಲಜ್ಜೆಯ ಮರೆತು
ಸುಖವ ಉಂಡು
ಅವಮಾನದ ತೂಕ ಬಿಟ್ಟೋದಿರಿ
ಇಷ್ಟೊಂದು ಕಲೆಯ ಮಕ್ಕಳ ಕೊಟ್ಟು.
ನನ್ನ ಅಮ್ಮ ಅನ್ನುವ ಅವು,
ಅಪ್ಪನು ಯಾರೆಂದು ಕೇಳುತ್ತಿವೆ.!
ಎಷ್ಟೊಂದು ಅಪ್ಪಂದಿರು
ಯಾರು, ಯಾರ ಅಪ್ಪ..?
ಹಾಜರಾತಿಯಲಿ ಏನೆಂದು ಬರೆಸಲಿ..?
ಗಂಡನ ಹೆಸರಿಲ್ಲದ ನಾನೊಂದು ಗುರುತಿನ ಚೀಟಿ
ಇಷ್ಟೊಂದು ಮಕ್ಕಳಿದ್ದರೂ
ನಾನು ಸಂಸಾರಿಯಲ್ಲ..!
ಬೆಲೆಯಿಲ್ಲದ ಸುಳಿಗೆ ಸಿಕ್ಕಿ
ಬಾಳೇ ಘೋರ ನಗಣ್ಯ
ಈ ಸೂಳೆಯ ದುಡಿಮೆ ಉಂಡ
ನಾ ,ಹೆತ್ತ ಮಕ್ಕಳೇ…,
ಅಮ್ಮ ಸೂಳೆ ಅನ್ನುತ್ತ
ಜೀವಂತ ಸಾಯಿಸುತ್ತಿದ್ದಾವೆ.
ಚರ್ಮ ಹಂಚಿಕೊಂಡವರೇ
ಥೂ ! ಛೀ, ಅನ್ನುತ್ತಿದ್ದಾರೆ.
ಓ ದೇವರೆ,
ಈ ಇಳಿವಯಸ್ಸಿಗೆ ಒಬ್ಬ ಸಂಗಾತಿಯಿಲ್ಲ
ಮನದ ನೋವ ಹಂಚಿಕೊಳ್ಳಲು.





ಸೂಳೆ ಎದೆಯ ಹಾಡು, ಕಣ್ಣೀರಾಗಿಸಿದೆ
ನನ್ನ ಪ್ರೀತಿಯ ಅವಧಿಗೆ ಧನ್ಯವಾದಗಳು
ರಂಗನಾಥ ಅವರು ಸೂಕ್ಷ್ಮತೆಯ ಮೂಲಕ ಕಾಡುತ್ತಾರೆ. ಅವರ ಕಾವ್ಯಕ್ಕೆ ಕಣ್ಣೀರನ್ನು ತರಿಸುವ ಮಾಂತ್ರಿಕತೆ ಇದೆ
kavanada vastu hosadenalla.aadare ee kavanada visheshate adara saralha nirupanhe. mattu helhabekaddannu haage terediduva gunha…ranganath innu ruupakagalahalli maataadabekittu. arthada rekkegalhu haaraadaballudu. intha vastugalha nirupanhe novinalli mindhu holheda katu satya aagiruttade…fine ranganath