ಎಂ ವಿ ಶಶಿಭೂಷಣ ರಾಜು
**
ಹೋರಾಡುವುದೇ ಆಯಿತು ನಿದ್ದೆದುಂಬಿದ ಕಣ್ಣಲಿ
ಕಣ್ಣು ಮುಚ್ಚಿದರೆ ತೆರೆಯಲಾರೆವೆಂದು
ಚೀರಾಡುವ ಅತೃಪ್ತ ಆತ್ಮಗಳ ಎದೆಯಲಿ
ತೃಪ್ತಿಯ ತರಲಾರವೆಂದು
ಸುಕ್ಕುದುಂಬಿದ ಬೊಚ್ಚಬಾಯಿಗಳ ನಿಟ್ಟುಸಿರು
ಬಿರುಗಾಳಿಯಾಗಿ ಬೀಸುತ್ತಿದೆ
ಬೆತ್ತಲೆಗೊಂಡ ಹೆಣ್ಣುಮಗಳ ದೇಹ ಅಷ್ಟುಕಣ್ಣುಗಳ
ಆಸೆಗೆ ಬಲಿಯಾಗುತ್ತಿದೆ
ಹೆಗಲಿಗೆ ಹೆಗಲಾಗಿದ್ದ ಮನಸುಗಳು ಕ್ರೂರ ತುಂಬಿ
ಹಲ್ಲು ಮಸೆಯುತ್ತಿವೆ
ಸುಗ್ಗಿಕಾಲ ಮತ್ತೆ ಬರುತಿದೆ, ಬೀಜವಿಲ್ಲದೆ ಹೊಟ್ಟು
ಗಾಳಿಗೆ ತೂರಿ ಹಾರುತಿದೆ
ಬೇಧ ಉಣಿಸಿ ಮನಸುಗಳ ನಡುವೆ ಮತ್ತೆ
ಒಂದು ಜನಸಮೂಹ ವಿಜೃಂಬಿಸುತಿದೆ
ಹತ್ತು ತಲೆಗಳ ಮೆಟ್ಟಿಲ ಮೇಲೆಯೇ ಸಿಂಹಾಸನ
ಹತ್ತಲು ಸಿದ್ದಗೊಂಡಿದೆ
ಅಷ್ಟು ಮೌನ ತುಂಬಿ ಮನದೊಳಗೆ, ಆರ್ಭಟಿಸಿ
ಎದೆಯೊಳಗೆ ಸಂಚು ಹೂಡುತಿದೆ
ಇಷ್ಟು ಸಿಕ್ಕರೆ ಸಾಕು ಕೈ ಎತ್ತಿ ಹೂಂಕರಿಸಿ
ಬೇಕಿದ್ದನ್ನು ಹರಡುತ್ತಿದೆ
ಅಲ್ಲಿ ಇಲ್ಲಿ ಎದ್ದ ಪ್ರಶ್ನೆಗಳ ಪಕ್ಕಕೆ ಸರಿಸಿ
ಇದೆ ಸತ್ಯ ಎಂದು ನಂಬಿಸುತಿದೆ
ಮುಗ್ದ ಮನಸುಗಳ ತಿರುಚಿ, ಒಂದು ಗೂಡಿಸಿ
ಭೂ, ಜಲ, ಆಕಾಶಗಳೆಲ್ಲಾ ಹಾರಿ
ಭಯಾಶ್ಚರ್ಯಗಳ ಮೂಡಿಸಿ
ಒಲಿಸುವುದು
ಇದು, ಹೀಗೆಯೇ ಸಾಗುತ್ತದೆ
ಆಕಾಶಕ್ಕೂ ಗಡಿಯಿದೆ , ಏರುವುದು ಇಳಿಯಲೇಬೇಕು
ಯಾವ ರಾಜನಾದರೂ, ಜನ
ರಾಗಿ ಬೀಸಲೇಬೇಕು
ಉರಿಯುವ ಕೆಂಡದಿಂದ ಕೆಂಡಕ್ಕೆ ಹಾರಲೇಬೇಕು
ತಮ್ಮ ಖುಷಿ ಹುಡುಕಿಕೊಳ್ಳಬೇಕು
0 ಪ್ರತಿಕ್ರಿಯೆಗಳು