ಮುಕುಂದಾ
ಹೇಳುವುದು ಬಹಳ ಇದೆ
ಕೇಳುವುದು ಬೇಕಾದಷ್ಟಿದೆ
ಮಾತು ಮಾತೆಲ್ಲ ಗಂಟಲಲ್ಲೇ
ಬೆಚ್ಚಗೆ ಅಡಗಿ ಕುಳಿತಿದೆ
ವಾರಗಳು ಉರುಳುತಿವೆ
ನೆನಪುಗಳು ಹಳಿಯುತಿವೆ
ಸವಿ ಸ್ಮರಣೆ ಎಲ್ಲ ಚಿತ್ತದಲ್ಲೇ
ಅಪ್ಪಿ ಸ್ಥಿರವಾಗಿ ಕುಳಿತಿದೆ
ಋತುಮಾನ ಬದಲಿಸಿದೆ
ಕನಸುಗಳು ನುಚ್ಚಾಗಿವೆ
ಪಳೆಯುಳಿಕೆಗಳು ಗರ್ಭದಲಿ
ಹುದುಗಿ ಇತಿಹಾಸವಾಗಿವೆ

ಜೀವ ಜಾಡು ಕವಲೊಡೆದಿದೆ
ಒಂಟೆತ್ತು ಹೊತ್ತು ಸಾಗಿದೆ
ಮಧುರಪ್ರೇಮ ಸಾಹಿತ್ಯದಲಿ
ಮೆರಗು ಪಡೆದು ಹೊಳೆಯುತಿದೆ
ನೆರಳು ಬೆಳಕಿನಾಟ ವಾಗಿದೆ
ಜೀವನ ಮರೀಚಿಕೆಯಾಗಿದೆ
ನಂಬಿಕೆಯ ಇಂಬುಗಳು
ಶರಧಿಪುರೇಶನ ಕಗ್ಗಗಳಾಗಿವೆ
ಕರುಳ ಕುಡಿಗಳು ಬೆಳಕ ಹಚ್ಚಿವೆ
ಇರುಳ ಬಾಳಿಗೆ ಬೆಳದಿಂಗಳಾಗಿವೆ
ಹರಿಯ ಕರುಣೆಯ ಧಾರೆಯಲಿ
ಮಿಂದೆದ್ದು ಮನ ಪುಳಕಗೊಂಡಿದೆ
ವರುಷದಾ ಸುದ್ದಿ ಬಿತ್ತರಿಸಿದೆನಿಲ್ಲಿ
ಆಲಿಸುವೆ ನೀ ಎಂದು ನಂಬಿ, ಅಮ್ಮಾ..
ಹರಸಿ ಅರಹು ಮುಂದಿನಾ ಹಾದಿ
ಸ್ಮರಿಸಿ ಸಾಗುವೆನು ಶರಧಿಪುರೇಶನ ಕೃಪೆ ಇರಲು ಎಂದೆಂದೂ……






0 Comments