ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೇಳಲೆಂದು ಬರೆದವಲ್ಲ ‘ನನ್ನೊಳಗೆ ಬಚ್ಚಿಟ್ಟ ಅಕ್ಷರಗಳು’

ಎಂ.ಜಿ.ಕೃಷ್ಣಮೂರ್ತಿ ಇಂಡ್ಲವಾಡಿ

ಮನುಷ್ಯ ಸದಾ ಕುಡಿದ ಸ್ಥಿತಿಯಲ್ಲಿರಬೇಕು
ಏನನ್ನು ಕುಡಿಯುವುದು?
ವೈನ್, ಕಾವ್ಯ, ಋಜುತ್ವ
ಯಾವುದನ್ನಾದರೂ
ಕುಡಿಯಬೇಕು ಮಾತ್ರ

– ಚಾಲ್ಸ್ ಬೋದಿಲೇರ್
(ಪಾಪದ ಹೂವುಗಳು ಅನು: ಪಿ.ಲಂಕೇಶ್)

ಬೋದಿಲೇರ್‌ನ ಮಾತಿನಂತೆ ನಾನು ಸಹ ಪ್ರೇಮದ ಧ್ಯಾನಸ್ಥ ಸ್ಥಿತಿಯವನು. ನನ್ನೊಳಗಿನ ಪ್ರೇಮಕ್ಕೆ ನಾನೊಬ್ಬನೇ ನಾವಿಕ ಇಲ್ಲಿಯ ಇಡಿ ಭಾವ ಪ್ರಪಂಚದ ನಾವಿಕ, ದಾರಿಹೋಕ, ಸಂಗಾತಿ, ಸಾಂಗತ್ಯ ಎಲ್ಲವೂ ನನ್ನದೇ ಪ್ರತಿರೂಪಗಳು. ನನ್ನೊಳು ಮೂಡಿದ ಅದೇಷ್ಟೋ ಕಲ್ಪನೆಗಳಿಗೆ ಅಕ್ಷರ ಮೂಡಿ ಮೈತಳೆದಿವೆ.

ಇಷ್ಟಕ್ಕೂ ಯಾತಕ್ಕೆ ಬರೆಯಬೇಕು, ಬರೆದಿದ್ದೇನೆ ಎಂಬುದಕ್ಕೆ ನಿರ್ದಿಷ್ಟ ಉತ್ತರ ನನ್ನೊಳಗಿಲ್ಲವಾದರೂ ನನ್ನೊಳೊಗಿನ ಹಸಿಹಸಿ ಕಾತುರತೆ, ತುಮುಲಗಳು ಆಗಿಂದಾಗೆ ರೂಪತಳೆದು ನಿಂತ ಚಿತ್ರಗಳಷ್ಟೇ ಈ ಕವಿತೆಗಳು.

ಕಾಲೇಜಿನ ದಿನಗಳಿಂದಲೂ ಇಂಗ್ಲಿಷ್ ಅನುವಾದಿತ ನವ್ಯ ಕವನ ಸಂಕಲನಗಳು ನನ್ನ ಕಾಡಿಸಿದ್ದಂತೂ ನಿಜವೇ ಸರಿ; ಅಲ್ಲಿನ ಸ್ನೇಹ-ಪ್ರೇಮ, ಮಿಲನ-ಮೈಥುನ, ವಿರಹ, ಸಹಜತೆಗಳೆಲ್ಲ ಅದೆಷ್ಟು ಸಲೀಸು ಅನಿಸಿತ್ತು. ಬಹುಶಃ ನನ್ನ ಕವಿತೆಗಳ ಮಡಿವಂತಿಕೆಯೂ ಅ ಕಾರಣಕ್ಕೆ ಕಳೆದುಕೊಂಡು ಬೆತ್ತಲಾಗಿರಬಹುದು.

ನನ್ನ ಕವಿತೆಗಳು ನಾ ತಲುಪದ ತಾಣಗಳನ್ನು ಸಂಧಿಸಿದ ವಾಹಕಗಳು; ಇಲ್ಲಿನ ಎಲ್ಲ ಸ್ಪಂದನೆ, ನಿಂದನೆ, ವಿಲಕ್ಷಣಗಳು ಇವೆಲ್ಲ ಹಲವು ಕವಿ-ಕವಿತೆಗಳ, ಸಂದರ್ಭದ, ವ್ಯಕ್ತಿಗಳ ಪ್ರೇರಣೆಗಳಾಗಿದ್ದು, ಅ ಹೊತ್ತಿನ ಭಾವಪರವಶತೆಯನ್ನು ಅದೇ ಧಾಟಿಯಲ್ಲಿ ದಾಖಲಿಸುವ ಪ್ರಯತ್ನ ಮಾಡಿದ್ದೇನೆ. ಈ ಕವಿತೆಗಳಿಗೆ ಸಾಹಿತ್ಯದ ಯಾವ ನಿಯಮದ ಪರಿವಿಲ್ಲದ ಭಿನ್ನ ಸ್ಥಿತಿಯಾಗಿದ್ದು ಇನ್ನು ಪೂರ್ಣರೂಪ ಪಡೆಯದ ಭ್ರೂಣಗಳು. ಈ ಭ್ರೂಣಸ್ಥಿತಿ ಮೀರಿ ಮುಂದಿನ ದಿನಗಳಲ್ಲಿ ಪೂರ್ಣರೂಪ ಪಡೆಯಲಿದೆ.

ಈ ಪ್ರೇಮ ವಿರಾಗಿಯು ನಡುಗತ್ತಲ ನಿಂತು ತನ್ನದೇ ಭಾವ ಪ್ರಪಂಚದಲ್ಲಿ ಲೀನವಾಗಿ ಹೊಸ ಹುಡುಕಾಟಗಳ ಸೃಷ್ಟಿಸ ಬಯಸಿದ್ದಾನೆ. ಅ ಹುಡುಕಾಟಕ್ಕೆ ಜೊತೆಯಾಗಿ ನಿಂತ ಯಾವತ್ತಿಗೂ ನೀನ್ ಏನ್ ಮಾಡ್ತಿದ್ದೀಯಾ ಅಂತ ಎಂದೂ ಪ್ರಶ್ನಿಸದ ಸದಾ ನಿನ್ ಇಷ್ಟದಂತೆ ನೀನ್ ಇರು ಎಂದ ಅಮ್ಮ-ಅಪ್ಪ, ತಮ್ಮಂದಿರನ್ನ ಈ ಸಮಯದಲ್ಲಿ ನೆನೆಯುತ್ತಾ; ನೀಡಿದಂತಹ ಹಸ್ತಪ್ರತಿಯನ್ನು ಆಯ್ಕೆ ಮಾಡಿ ಅ ಮೂಲಕ ಪುಸ್ತಕ ರೂಪಗೊಳ್ಳಲು ಕಾರಣರಾದ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರಿಗೆ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಇರುವ ಸ್ವಲ್ಪ ಸಮಯದಲ್ಲಿ ನನ್ನ ಕವಿತೆಗಳು ಹೇಳುವ ಕತೆಗೆ ಕಿವಿಯಾಗಿ ಮುನ್ನುಡಿ ಬರೆದು ಕೊಟ್ಟ ಮೇಷ್ಟ್ರು ಕೆ.ವೈ.ನಾರಾಯಣಸ್ವಾಮಿ ಅವರಿಗೆ ಮತ್ತು ಪ್ರೀತಿಯಿಂದ ಬೆನ್ನುಡಿ ಬರೆದುಕೊಟ್ಟ ಹೆಚ್.ಎಲ್.‌ ಪುಷ್ಪ ಮೇಡಂ ಅವರಿಗೆ ನಾನು ಕೃತಜ್ಞ. ಕವಿತೆ ಸುನಾಮಿಗೆ ನನ್ನದೊಂದು ಹನಿ ಸೇರಿಸಲು ಜೊತೆಯಾದ ನನ್ನೆಲ್ಲ ದೀವಟಿಗೆ ಸಂಗಾತಿಗಳು ಮತ್ತು ಸಂವಾದದ ಒಡನಾಡಿಗಳನ್ನ ಈ ಸಮಯಕ್ಕೆ ನೆನೆಯುತ್ತಾ, ಪುಸ್ತಕದ ಮುಖಪುಟ ವಿನ್ಯಾಸ ಮಾಡಿದ ಹಾದಿಮನಿ, ರೇಖಾಚಿತ್ರ ಬರೆದು ಕೊಟ್ಟ ಗೆಳೆಯ ಚಂದ್ರು ಕನಸು ಮತ್ತು ದಿವಾಕರ್ ಕೆನ್, ಪುಸ್ತಕದ ವಿನ್ಯಾಸ ಮಾಡಿ ಆತ್ಮೀಯ ಕಾವೇರಿದಾಸ್ ಮತ್ತು ಅಚ್ಚುಕಟ್ಟಾಗಿ ಮುದ್ರಿಸಿಕೊಟ್ಟ ಮುದ್ರಣಾಲಯದವರಿಗೂ ನಾನು ಅಭಾರಿಯಾಗಿರುತ್ತೇನೆ.

ನನ್ನ ಮೊದಲ ತೊದಲಿನ ಎಲ್ಲ ಪ್ರೇರಣೆ, ಪ್ರತಿಕೃತಿಗಳಿಗೆ ನಾನು ನಮಿಸುತ್ತಾ ಓದುಗನ ಮಡಿಲಿಗೆ ನನ್ನ ಪ್ರೇಮ ವಿರಾಗಿ ಮೊದಲ ಸಂಕಲನವನ್ನು ಹಾಕಿದ್ದೇನೆ. ಇಲ್ಲಿನ ಎಲ್ಲ ತಪ್ಪುಒಪ್ಪುಗಳನ್ನ ಪ್ರೀತಿಯಿಂದ ಆಲಿಸಿ, ಆನಂದಿಸಿ, ಪ್ರೊತ್ಸಾಹಿಸಿ.

‍ಲೇಖಕರು Avadhi

17 December, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading