…ಬ್ಲಾಗ್ನಲ್ಲಿ ಗಂಭೀರ ಬರಹಗಳು ಕಡಿಮೆ ಎನ್ನುವಷ್ಟು ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆ. ‘ಪದ್ಯ ಇಷ್ಟು ಲೈಟಾದ್ರೆ ಹೇಗೆ ಸ್ವಾಮಿ’ ಎನ್ನುವಂತೆ ಊಟದಲ್ಲಿ ಕೋಸಂಬರಿ ಎನ್ನುವ ರೀತಿಯ ನಂಜಿಕೊಳ್ಳುವ ಬರಹಗಳು ಇಲ್ಲಿ ಅವತಾರ ತಾಳುತ್ತವೆ. ಕೆಲವೊಮ್ಮೆ ಈ ಬರಹಗಳು ಅಹಂಗೆ ಒಳಗಾಗಿ ನಂಜು ಕಾರುವುದು ಸಹ ನಡೆಯುತ್ತಿರುತ್ತದೆ. ಬ್ಲಾಗ್ಗಳ ಬಗ್ಗೆ ಕುತೂಹಲದಿಂದ ಇಣುಕಿದಾಗ ನನಗೆ ಕಂಡ ಲೋಕ ಇದು. ಇದಕ್ಕೆ ವ್ಯತಿರಿಕ್ತ ಬ್ಲಾಗ್ಗಳು ಇದ್ದರೂ ಅವು ಅಪರೂಪವಾಗಿವೆ.
ಪ್ರತಿಕ್ರಿಯೆ ನೀಡುವವರದಂತೂ ದೊಡ್ಡ ದಂಡೇ ಇದೆ. ಇವರಲ್ಲಿ ಈ ಅನಾನಿಮಸ್ಗಳ ಸಂಖ್ಯೆ ಹೆಚ್ಚು. ಕೆಲವು ಅನಾನಿಮಸ್ಗಳು ಗಂಭೀರ ಪ್ರತಿಕ್ರಿಯೆ ನೀಡಿ ಅನೇಕ ಸತ್ಯಗಳನ್ನು ಅನಾವರಣಗೊಳಿಸಿರುವ ಉದಾಹರಣೆಗಳು ಸಹ ಇವೆ. ಆದರೆ ಉಳಿದಂತೆ ಈ ಅನಾಮಿಸ್ಗಳ ಪ್ರತಿಕ್ರಿಯೆ ತೇಜೋವಧೆ, ನಿಂದನೆಗಳೇ ಹೆಚ್ಚು ಪ್ರತಾಪಿಸುತ್ತವೆ. ಎಲ್ಲವೂ ಪ್ರತಾಪ ಮಹಿಮೆಗಳೇ?
ಹೆಸರಿನಿಂದ ಕೂಡಿದ ಪ್ರತಿಕ್ರಿಯೆಗಳು, ಬರಹಗಳು ಸರಿಯಾಗಿರುತ್ತವೆ ಎಂಬ ಅಭಿಪ್ರಾಯವೂ ಇಲ್ಲಿದೆ. ಸತೀಶ್, ಉಮೇಶ್ ಎಂಬ ಹೆಸರಿನವರು ಇದೇ ರೀತಿ ಪ್ರತಿಕ್ರಿಯೆ ಬರೆದಿದ್ದಾರೆ ಅಂದು ಕೊಳ್ಳಿ ಅಥವಾ ಗ್ಲಾಮರ್ ಇರಲಿ ಎಂದು ಸುಧಾ, ಮಯೂರಿ ಎಂಬ ಹೆಸರಿಟ್ಟುಕೊಂಡು ಬರೆದಿದ್ದಾರೆ ಎಂದು ಕೊಳ್ಳಿ ಅಥವಾ ಅದೇ ಹೆಸರಿನವರೂ ಬರೆದಿದ್ದಾರೆಂದುಕೊಳ್ಳೋಣ. ಆಗ ಏನು ಮಾಡಬೇಕು?
ಹೆಸರಿಟ್ಟುಕೊಂಡವರು ಸಹ ಮುಖವಾಡ ಧರಿಸಿರುತ್ತಾರಲ್ಲ, ಬೇರೊಂದು ಅಭಿಪ್ರಾಯವನ್ನು ಒಪ್ಪದೇ ತೇಜೋವಧೆ ಮಾಡುವುದು. ಚಚರ್ೆಯ ಹೆಸರಲ್ಲಿ ನಿಂದನೆ, ಪೂರ್ವಗ್ರಹಫೀಡಿತರಾಗಿ ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸುವುದು, ದಾರಿ ತಪ್ಪಿಸುವುದು, ಗಂಭೀರ ಚಚರ್ೆಯನ್ನು ಬೇಕೆಂದೆ ಉಪೇಕ್ಷಿಸುವುದು ಇದೆಲ್ಲಾ ನಡೆಯುತ್ತದೆಯಲ್ಲಾಈ ಬಗ್ಗೆಯೂ ಚಚರ್ೆ ನಡೆಯಬೇಕಲ್ಲವೇ?
ನಾವೆಲ್ಲಾ ನಮ್ಮ ಅಹಂಗಳನ್ನು ಬದಿಗಿಟ್ಟು ಆರೋಗ್ಯಕರ ಸಮಾಜವೊಂದನ್ನು ಕಟ್ಟುವ ಬದ್ಧತೆ ನಮಗಿದ್ದರೆ ನಾವೆಲ್ಲಾ ನಮ್ಮ ಅಹಂಗಳನ್ನು ಬದಿಗಿಡುತ್ತೇವೆ. ಶಬ್ದಗಳ ಮೋಹಕತೆಗೆ ಮರಳಾಗುವುದಿಲ್ಲ. ಇಂತಹ ಅನೇಕ ವಿಕೃತಿಗಳಿಂದ ಮುಕ್ತಿ ಪಡೆಯುವ ಮಾರ್ಗವನ್ನು ನಾವೆಲ್ಲರೂ ಶೋಧಿಸಬೇಕು.
– ಪರಶುರಾಮ ಕಲಾಲ್





ಮುಖವಾಡ ಒಂದಿಲ್ಲ ಒಂದು ದಿನ ಕಳಚಿ ಬೀಳಲೇಬೇಕು! ಆದರೆ ಮುಖವೇ ಇಲ್ಲದವರನ್ನು ಏನು ಮಾಡುವುದು?
ಅನಾಮಿಕ ಕಮೆಂಟುಗಳ/ಟಿಗರ ಬಗ್ಗೆ ಬಂದ ಸಲಹೆಗಳನ್ನು ನೋಡಿದೆ. ಬಹುತೇಕರು ಇಗ್ನೋರ್ ಮಾಡುವುದು, ಡಿಲೀಟ್ ಮಾಡುವುದು ಉತ್ತಮ ಉಪಾಯವೆಂದಿದ್ದಾರೆ. ಒಂದಿಬ್ಬರು ಪೂರ್ವ ತಯಾರಿ ನಡೆಸ್ಕೊಂಡಿರಬೇಕು ಅಂದಿದಾರೆ.
ನನ್ನ ಪ್ರಕಾರ ಮತ್ತು ಸಹಬ್ಲಾಗಿಗರೊಂದಿಬ್ಬರು ಹೇಳಿರುವಂತೆ ಹೀಗೆ ಸುಮ್ಮನಿದ್ದುಬಿಡುವುದು ಅನಾಮಿಕ ಕಮೆಂಟುದಾರರಿಗೆ ಪ್ರೋತ್ಸಾಹ ಕೊಟ್ಟಂತೆ ಅನಿಸುತ್ತದೆ ನನಗೆ. ಎಲ್ಲಿಯವರೆಗೂ ಇಂತಹ ಅನಾಮಿಕರಿಂದ ಸಮಸ್ಯೆಯಿರೋದಿಲ್ವೋ ಅಲ್ಲೀವರ್ಗೂ ಅದು ಯಾರು, ಎತ್ತ ಅನ್ನುವ ತಲೆಬಿಸಿ ನಾವೂ ಮಾಡ್ಕೊಳೋದಿಲ್ಲ. ಅದು ನಮ್ಮ ಖಾಸಗಿತನಕ್ಕೆ ಲಗ್ಗೆಯಿಟ್ಟಾಗ ಮಾತ್ರ ಸಹಿಸಲಾಗದು.
ನನ್ನ ಬ್ಲಾಗಿನ ಉದಾಹರಣೆ ಕೊಡೋದೇ ಆದರೆ, ಫೋನಾನ್, ಸೆಕ್ಯುಲರ್, ಸ್ಟ್ರಗಲ್ ಫಾರ್ ಟ್ರುತ್, ರೆಡ್ ಅಲರ್ಟ್, ಡೆವಿಲ್ಸ್ ಮೊದಲಾದ ಜೀವಿಗಳ ಕಮೆಂಟುಗಳು ವಿಪರೀತವಾಗಿ ಬರುತ್ತಿದ್ದವು. ಈ ಫೋನ್ ಆನ್ ಅನ್ನುವ ಪ್ರಾಣಿಯ ಐಪಿ ‘ಸಾಗರ್’ ಹೆಸರಲ್ಲಿ ಕಮೆಂಟ್ ಮಾಡಿದ್ದ ಪ್ರಾಣಿಯ ಐಪಿ (ಅದು ಹೆಣ್ಣೋ, ಗಂಡೋ, ಎರಡೂನೋ, ಅಲ್ಲವೋ ತಿಳಿಯದ್ದರಿಂದ ಹೀಗೆ ಹೇಳಬೇಕಾಗುತ್ತಿದೆ. ಕ್ಷಮೆಯಿರಲಿ) ಒಂದೇ ಆಗಿದ್ದರಿಂದ ಮುಂದಿನ ಕ್ರಮ ತೆಗೆದುಕೊಳ್ಳೋಣವೆಂದುಕೊಂಡೆ. ಆದರೂ ಸುಧಾರಣೆಗೆ ಮತ್ತೊಂದು ಅವಕಾಶ ಕೊಡುವಾ ಅಂತ ಸುಮ್ಮನುಳಿದೆ. ಆ ಹೊತ್ತಿಗೆ ಏನಾಯ್ತೋ, ಆತನ ಕಮೆಂಟ್ ನಿಂತಿತು. ಆತ ಅಶ್ಲೀಲ ಪದ ಬಳಸಿ ಕಮೆಂಟ್ ಮಾಡಿದ್ದು, ಸೈಬರ್ ಕ್ರಮಕ್ಕೆ ಅರ್ಹವಾಗಿಯೂ ಇತ್ತು.
ಹೀಗೆ ನೇರಾನೇರಾ ಕಾನೂನಿನ ಬಾಗಿಲು ತಟ್ಟುವುದಕ್ಕೆ ಹಿಂಜರಿಕೆಯೂ ಆಯ್ತೆನ್ನಿ. ಯಾಕೆಂದರೆ ಸ್ಟ್ರಗಲ್ ಫಾರ್ ಟ್ರುತ್ ನಿಂದ ಬಂದಿದ್ದು ಬೆದರಿಕೆಯ ಕಮೆಂಟು. ‘ಒಬ್ಬಳೇ ಇರ್ತೀಯ, ನೋಡಿಕೊಳ್ತೇವೆ’ ಅನ್ನುವಂಥದ್ದು. ಮನಸಿನಾಗಿನ ಮಾತು ಅನ್ನುವ ಮನಸಿಲ್ಲದ ಜೀವಿಯೊಂದು ಬ್ಲ್ಯಾಕ್ ಮೇಲ್ ನಂಥ ಕಮೆಂಟ್ ಮಾಡಿದಾಗ ಮಾತ್ರ ನನ್ನಿಬ್ಬರ್ ಬ್ಲಾಗ್ ಗೆಳೆಯರ ಸಹಾಯ ಪಡೆದು ಪತ್ತೆ ಹಚ್ಚಲು, ಕಂಪ್ಲೇಂಟ್ ನೀಡಲು ಮುಂದಾದೆ. ಆತ ಯಾರೆಂದು ಗೊತ್ತಾಗುವ ವೇಳೆಗೆ ಕೆಲಸ ಕಳೆದುಕೊಂಡು ಬೀದಿಗಿಳಿದುಹೋಗಿದ್ದ. ಹೊಸತಾಗಿ ಶಿಕ್ಷಿಸಲು ಏನೂ ಉಳಿಯದ್ದರಿಂದ ಮಾನವೀಯತೆಯಿಂದಾಗಿ ಸುಮ್ಮನಾಗಬೇಕಾಯ್ತು.
ಬಹುಶಃ ಕಮೆಂಟ್ ಗಳನ್ನ ಇಗ್ನೋರ್ ಮಾಡಿ ಅನ್ನುವವರಿಗೆ ಅದರ ಹಿಂಸೆಯ ಅರಿವು ಇರಲಾರದು. ನನ್ನನ್ನು ಗಮನಿಸ್ತಿರುವ, ಬೆದರಿಸ್ತಿರುವ ವ್ಯಕ್ತಿ ಯಾರೆಂದೇ ತಿಳಿಯದೆ ಅವರನ್ನ ಎದುರಿಸೋದಾದರೂ ಹೇಗೆ? ಗೊತ್ತಾದನಂತರದ ಮಾತು ಬೇರೆ. ಆದರೆ ಆ ಹಿಂಸೆ ನೀಡುವ ಮಾನಸಿಕ ಆಘಾತ ಎಂಥದು ಅಂದಾಜಿದೆಯಾ?
ನಾನು ಮತ್ತೆ ಮತ್ತೆ ಬ್ಲಾಗ್ ಡಿಲೀಟ್ ಮಾಡೋದು, ಇದ್ದಕ್ಕಿದ್ದ ಹಾಗೇ ನಿಲ್ಲಿಸಿಬಿಡೋದೂ ಇದೇ ಕಾರಣಕ್ಕೆ. ಸೂಕ್ಷ್ಮ ಮನಸಿಗೆ ಇದೆಲ್ಲ ಆತಂಕ ತರುವ ಸಂಗತಿಯೇ ಸರಿ. ಅಕಾರಣ ದ್ವೇಷಕ್ಕೆ ಪಕ್ಕಾಗುವ ನೋವು ಕೂಡ ಕಾಡುತ್ತದೆ. ಬಹಳ ಸೆನ್ಸಿಟಿವ್ ಆಗಿರುವ ನಾನು, ಲೇಖನ, ವಸ್ತು, ವಿಷಯದ ಹೊರತಾದ ಯಾವ ಕಮೆಂಟ್ ಬಂದರೂ ತಲ್ಲಣಗೊಳ್ತೇನೆ. ಸ್ವತಃ ಮೋಹನ್ ಒಮ್ಮೆ ಹೇಳಿದ್ದರು, ನಾವು ಯಾವುದರಿಂದ ಬೇಸರಗೊಳ್ತೇವೆ ಅಂತ ತೋರಿಸ್ಕೊಳ್ಳಬಾರದು. ವಿಕೃತ ಮನಸಿನ ಜನ ಮತ್ತೆ ಮತ್ತೆ ಅದೇ ಪೆಟ್ಟನ್ನು ನೀಡ್ತಾರೆ ಅಂತ. ಬಟ್ ಹೇಗೆ ಸಾಧ್ಯ? ಇನ್ನು ಸಹಿಸುವಿಕೆ ಸಾಧ್ಯವಿಲ್ಲ ಅಂದಾಗಲೂ ತೋರಿಸಿಕೊಳ್ಳದೆ ಉಳಿಯೋದು ಹೇಗೆ?
ಹಾಗೇನೇ, ಅನಾಮಿಕ ಕಮೆಂಟುದಾರರನ್ನು ಪತ್ತೆಹಚ್ಚೋದೇನೂ ಸುಲಭವಲ್ಲ ಅನ್ನೋದು ಗೊತ್ತಿದೆ. ಯಾರದಾದರೂ ಮೇಲ್ ಐಡಿ ಗೊತ್ತಿದ್ದರೆ ಸಾಕು, ಅದನ್ನ ಬಳಸ್ಕೊಂಡು ಯಾರು ಬೇಕಾದರೂ ಎಲ್ಲಿಂದ ಬೇಕಾದರೂ, ಯಾರ ಹೆಸರಲ್ಲಾದರೂ ಕಮೆಂಟು ಮಾಡಬಹುದು. ಸಮಸ್ಯೆ ಇಷ್ಟು ಸಂಕೀರ್ಣವಾಗಿರೋದ್ಲಿಂದಲೇ ಕಳೆದೊಂದು ವರ್ಷದಿಂದ ಪ್ರಯತ್ನಿಸ್ತಿದ್ದರೂ ಪರಿಹಾರ ಹೊಳೆಯುತ್ತಿಲ್ಲ. ಹಾ… ತಕ್ಕಮಟ್ಟಿಗೆ ಸಿಕ್ಕಿದೆ, ಬ್ಲಾಗಿಂಗ್ ಕಡಿಮೆ ಮಾಡಿದ ಮೇಲೆ!
ಬಟ್, ನಮ್ಮ ಸೃಜನಶೀಲತೆಗೆ, ಅಭಿವ್ಯಕ್ತಿಗೆ ವೇದಿಕೆಯಾಗಿರುವ ಮಾಧ್ಯಮವೊಂದನ್ನು ಯಾರೋ ಮುಖಹೀನರ ಕಾರಣದಿಂದ ಬಿಟ್ಟುಕೊಡಬೇಕಾಗ್ತದಲ್ಲ ಅನ್ನುವುದು ನೋವಿನ ವಿಷಯ.
ಮೊನ್ನೆ ಗೆಳೆಯನೊಬ್ಬ ಹೇಳಿದ, ಬ್ಲಾಗಿಂಗ್- ಬ್ಲಾಗಿಂಗ್ ಅಷ್ಟೇ. ಅದನ್ಯಾಕೆ ಸೀರಿಯಸ್ಸಾಗಿ ತೊಗೋತೀರಿ? ಅದು ನಮ್ಮ ಪಾಡಿಗೆ ಬರೆದುಕೊಳ್ಳುವ ಖಾಸಗಿ ಸಂಗತಿಯಷ್ಟೇ ಅಂತ.
ಬ್ಲಾಗ್ ಮೂಲ ಉದ್ದೇಶ, ಶುರುವಿಟ್ಟ ಮೂಲ ಕಾರಣ ಅದೇ ಇರಬಹುದು. ಆದರೆ ಅದರ ಸಾಧ್ಯತೆಗಳು ಅದನ್ನೂ ಮೀರಿ ಇರುವಾಗ, ಜವಾಬ್ದಾರಿಯುತ ನಾಗರಿಕ ಅಭಿವ್ಯಕ್ತಿ- ಚರ್ಚೆಯ ಮಧ್ಯಮವಾಗಿರುವಾಗ ಅದರ ಸದ್ಬಳಕೆ ಮಾಡಿಕೊಳ್ಳಬಾರದೇಕೆ? ಹಾಗೆ ನೋಡಿದರೆ ಸಾಹಿತ್ಯ ಕೂಡ ಶುರುವಲ್ಲಿ ಆತ್ಮ ತೃಪ್ತಿಗೆಂದೇ ಇದ್ದುದು. ಈ ಬಗ್ಗೆ ಸಂಸ್ಕೃತದಲ್ಲಿ ಸಾಕಷ್ಟು ಹೇಳಿಕೆ/ನಿಯಮಗಳಿವೆ. ಆಮೇಲೆ ಅದು ದೇವ ಸ್ತುತಿ, ರಾಜ ಸ್ತುತಿ, ಇತಿಹಾಸ ನಿರೂಪಣೆ, ಇತ್ತೀಚಿನ ಶತಮಾನಗಳಲ್ಲಿ ಸಮಾಜಮುಖಿಯಾಗಿ ಪರಿವರ್ತನೆಗೊಳ್ಳುತ್ತ ಬಂತು. ನಾನೇನೂ ಬ್ಲಾಗಿಂಗ್ ನಿಂದ ತತ್ ಕ್ಷಣಕ್ಕೆ ಭಾರೀ ನಿರೀಕ್ಷೆಯನ್ನೇನೂ ಇಟ್ಟುಕೊಂಡಿಲ್ಲ. ಆದರೆ ಆಸೆಯನ್ನಂತೂ ಇರಿಸಿಕೊಂಡಿದೇನೆ. ಈ ನಿಟ್ಟಿನಲ್ಲಿ ಚಿಕ್ಕದೊಂದು ಕಾಲುದಾರಿಯಾಗುವುದಾದರೂ ಸರಿಯೇ, ಯಾಕಾಗಬಾರದು? ಇದು ನನ್ನ ಯೋಚನೆ.
ಬಹುಶಃ ಬಗೆಹರಿಯದ ಸಮಸ್ಯೆಯನ್ನ ಮುಂದಿಟ್ಕೊಂಡು ನಾವು ಚರ್ಚಿಸ್ತಿದೇವೇನೋ… ಬಟ್, ಇನ್ನಾದರೂ ಅನಾಮಿಕ ಕಮೆಂಟುದಾರರು ತಮ್ಮ ಬೇಜವಾಬ್ದಾರಿ ಮತ್ತು ವಿಕೃತಿಯಿಂದ ಆಗುವ ಸಮಸ್ಯೆಗಳನ್ನರಿತು ಸರಿದರಿಗೆ ಬರಬಹುದಾದರೆ ಸಂತೋಷ.