
ಅಶೋಕ್ ಶೆಟ್ಟರ್
ಗಾಡಿಯಿಂದ ಕೆಳಗೆ ಬಿದ್ರಾ?
ಫೇಸ್ಬುಕ್ ನಲ್ಲಿ ಸ್ಟೇಟಸ್ ಹಾಕಿರಿ, “ಯಾಕ್ ಬೀಳಾಕ್ ಹೋಗಿದ್ರಿ?” ಎಂಬ ಪ್ರಶ್ನೆಯಿಂದ ಹಿಡಿದು ಗಾಡಿಯಿಂದ ಬೀಳದಂತಿರಲು ಏನು ಮಾಡಬೇಕು ಎಂಬಲ್ಲಿಯವರೆಗೆ ಸಲಹೆ ಸೂಚನೆಗಳ ಮಹಾಪೂರ ಹರಿದುಬರುತ್ತದೆ. (ಇದು ಮೊಬೈಲ್ ಕಳೆದುಹೋಯಿತು ಎನ್ನುವ ಸ್ಟೇಟಸ್ ಗೂ ಅನ್ವಯಿಸುತ್ತದೆ. ಉದಾ: “ಛೇ, ಯಾಕೆ ಕಳ್ಕೊಂಡ್ರಿ?” “ನೀವೊಂದು ಕೆಲ್ಸ ಮಾಡ್ಬೇಕಿತ್ತು” ಇತ್ಯಾದಿ)
ತಲೆನೋವು ಅಂತ ಹಾಕಿ ನೋಡಿ. ಒಂದು ನೂರು ಜನ (ಸ್ಟೇಟಸ್ ಹಾಕಿದ್ದು ಹುಡುಗಿ/ಮಹಿಳೆ ಆಗಿದ್ರೆ ಎರಡು ನೂರು) ಇದ್ದಕ್ಕಿದ್ದಂತೆ ವೈದ್ಯರಾಗಿ ಪರಿವರ್ತಿತರಾಗಿ ಈರುಳ್ಳಿ ಬೆಳ್ಳುಳ್ಳಿ ಇಂಗು ಜೀರಿಗೆ ಅರಿಷಿಣಗಳ ಮನೆಮದ್ದು ಹೇಳುತ್ತಾರೆ.
ಫೇಸ್ಬುಕ್ ನಲ್ಲಿ ಇದು ನಮಗ್ಯಾಕೆ ಬಿಡು ಅಂತ ಅನ್ನಂಗಿಲ್ಲ.
ನೀವು ಕಾವ್ಯವಿಮರ್ಶಕ, ವೈದ್ಯ, ಸೈಕಿಯಾಟ್ರಿಸ್ಟ್, ಆಧ್ಯಾತ್ಮಿಕ ಗುರು, ನ್ಯಾಯಾಧೀಶ, ಎಡ್ವೈಜರ್ ಟು ಸ್ಟೇಟ್ ಗವರ್ನಮೆಂಟ್ ಆನ್ ವೆಲ್ಫೇರ್ ಸ್ಕೀಮ್ಸ್, ಎಡ್ವೈಜರ್ ಟು ಸೆಂಟ್ರಲ್ ಗವರ್ನಮೆಂಟ್ ಆನ್ ಫಾರೆನ್ ಪಾಲಿಸಿ ಮ್ಯಾಟರ್ಸ್, ನಿಮ್ಮೂರಲ್ಲಿ ಧಾರಾಕಾರ ಮಳೆ, ತುಂಬಾ ಬಿಸಿಲು, ಮೈಕೊರೆವ ಚಳಿ ಇತ್ಯಾದಿಗಳ ವರದಿಗಾರ..
..ಸೋಷಿಯಲ್ ಸೈಂಟಿಸ್ಟ್, ಹಿಸ್ಟೋರಿಯನ್, ಕಮೆಡಿಯನ್, ಸುಶಿಕ್ಷಿತ bully ( ಕನ್ನಡದಲ್ಲಿ ನಮ್ಮ ಕಡೆ ಕೆಲವೆಡೆ ಬುಲ್ಲಿ ಎಂದರೆ ಚಿಕ್ಕಮಕ್ಕಳ ಶಿಶ್ನ ಎಂದರ್ಥ, ಆ ಮಾತು ಬೇರೆ), ಮ್ಯಾನೇಜಮೆಂಟ್ ಗುರು, ಫಿಲಾಸಾಫರ್, ಹ್ಯಾಷ್ ಟ್ಯಾಗ್ ಐಯ್ಯಾಮ್ ವಿಥ್ ಡಬಕ್, ಹ್ಯಾಷ್ ಟ್ಯಾಗ್ ಐಯ್ಯಾಮ್ ವಿಥ್ ಡುಬುಕ್ ಎನ್ನುವ ನೈತಿಕ ಬೆಂಬಲಿಗ…, ಏನೂ ಆಗಬಹುದು, ನಿಸ್ಸಂಕೋಚವಾಗಿ..
ಅದಕ್ಕೆ ನನಗೆ ಫೇಸ್ಬುಕ್ ಇಷ್ಟ.
ಪುಷ್ಕಳ ರಂಜನೆ, ಬೋಧನೆ, ಪ್ರಚೋದನೆ…..





0 Comments