ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಸುರಕ್ಷೆ ಕೇವಲ ಪುರುಷರು ನಮಗೆ ನೀಡುವ ಭಿಕ್ಷೆಯಾ?' – ರಾಧಿಕಾ ಗಂಗಣ್ಣ


ರಾಧಿಕಾ ಗಂಗಣ್ಣ

ಆರು ತಿಂಗಳ ಹಿಂದೆ ಸ್ನೇಹಿತೆಯೊಡನೆ ಸೇರಿ ಅಮ್ಮಂದಿರು, ಮಕ್ಕಳ ಕಾಶ್ಮೀರ ಪ್ರವಾಸ ಯೋಜಿಸಿದಾಗ ಮನೆಯವರು ಹುಬ್ಬೇರಿಸಿದರೂ ಯಾರೂ ಬೇಡವೆನ್ನಲಿಲ್ಲ. ಇತರೇ ಸ್ನೇಹಿತೆಯರು ಪ್ರಶ್ನಿಸಿದ್ದರು. ಅದು ಹೇಗೆ ಧೈರ್ಯ ಮಾಡಿ ಅಷ್ಟು ದೂರ ಹೋಗ್ತಿದ್ದೀರ ಬರೀ ಹೆಂಗಸರು ನೀವು ಸಣ್ಣ ಮಕ್ಕಳನ್ನು ಕರೆದುಕೊಂಡು ಅಂತ. ನನಗೂ ನನ್ನ ಸ್ನೇಹಿತೆಗೂ ಎಲ್ಲಿಲ್ಲದ ಧೈರ್ಯ. ಇಲ್ಲೀವರೆಗೂ ಸುತ್ತಿಲ್ಲವಾ ಮುಂಬೈ, ಡೆಲ್ಲಿ, ಕೆನಡ, ಅಮೆರಿಕಾ ಅಂತ. ಕಾಶ್ಮೀರ ನಮ್ಮ ದೇಶವೇ ತಾನೇ ಅಂತ ಧೈರ್ಯ ಮಾಡಿ ಹೊರಟೇ ಬಿಟ್ಟೆವು 7 ದಿನದ ಪ್ರವಾಸಕ್ಕೆ. ಒಂದು ಸುಂದರ ಪ್ರವಾಸವನ್ನು ಮುಗಿಸಿಕೊಂಡು ಬಂದ ಮೇಲೆ, ಹೇಗಿತ್ತು ಅಂತ ಕೇಳಿದವರಿಗೆ ನನ್ನ ಮೊದಲ ಉತ್ತರ, ಸುರಕ್ಷಿತ ಪ್ರವಾಸ, ಯಾರೂ ನಮ್ಮನ್ನು ಚುಡಾಯಿಸಲಿಲ್ಲ, ತುಂಬಾ ಮರ್ಯಾದೆಯಿಂದ ನೋಡಿಕೊಂಡರು ಅಂತ! ಆಮೇಲೆ ನನಗೇ ಅನ್ನಿಸತೊಡಗಿತು ಯಾಕೆ ಹೀಗೆ? ಕಾಶ್ಮೀರ ಚೆನ್ನಾಗಿತ್ತು ಅನ್ನುವುದಕ್ಕಿಂತ ಮುಂಚೆ ಮನಸ್ಸಲ್ಲಿ ಮೂಡಿದ್ದು ನಾವು ಅಲ್ಲಿ ಹೆಂಗಳೆಯರು, ಮಕ್ಕಳೇ ಆಗಿದ್ದರೂ ಸುರಕ್ಷಿತರಾಗಿದ್ದೆವು ಅನ್ನುವ ಭಾವನೆ.
ಸುರಕ್ಷೆ ಕೇವಲ ಪುರುಷರು ನಮಗೆ ನೀಡುವ ಭಿಕ್ಷೆಯಾ? ಸುರಕ್ಷವಾಗಿರುವುದು ಈಗ default ಅಲ್ಲ! ಮಹಿಳೆಯ ಮೇಲೆ ದೌರ್ಜನ್ಯ ನಡೆಯುತ್ತಿರುವ ಯಾವುದೋ ಒಂದು ಸ್ಥಳ, ಕಾಲದಲ್ಲಿ ನಾವಿಲ್ಲದೇ ಇದ್ದುದರಿಂದ ನಾವು ಸುರಕ್ಷಿತ, ನಾವೂ ದೌರ್ಜನ್ಯಕ್ಕೆ ತುತ್ತಾಗಬಹುದು/ತುತ್ತಾಗಬಹುದಿತ್ತು ಅನ್ನುವುದನ್ನು ಊಹಿಸಿಕೊಳ್ಳಲೂ ಭಯ. ದೆಹಲಿಯಲ್ಲಿ ಆ ಹುಡುಗಿ ಅನುಭವಿಸಿರುವ ಕ್ರೌರ್ಯವನ್ನು ನೆನೆಸಿಕೊಂಡರೆ ಮೈ ನಡುಗುತ್ತದೆ. ಇಷ್ಟೆಲ್ಲ ದೌರ್ಜ್ಯನ್ಯಗಳು ಮುಖಕ್ಕೆ ರಾಚುತ್ತಿದ್ದರೂ ಸೂಕ್ತ ಕಾಯಿದೆಗಳ ಬದಲಾವಣೆಗೆ ಬಂದಿರುವ ಅಡ್ಡಿಯಾದರೂ ಏನು?
ಚಿಕ್ಕಂದಿನಿಂದಲೂ ಅಮ್ಮ ಅಕ್ಕನನ್ನು, ನನ್ನನ್ನು ಯಾವ ನೆಂಟರ ಮನೆಯಲ್ಲೂ ಉಳಿದುಕೊಳ್ಳಲು ಬಿಡುತ್ತಿರಲಿಲ್ಲ. ತಾಯಿ ಇದ್ದ ಕಡೆ ಮಕ್ಕಳಿರಬೇಕು ಎಂದು ಅಮ್ಮ ನೀಡುತ್ತಿದ್ದ ಕಾರಣದಿಂದ ಆಗ ಸಿಟ್ಟು, ನಿರಾಸೆ. ಆದರೆ ಬೆಳವಣಿಗೆಯ ಹಾದಿಯಲ್ಲಿ ಅದರ ಸೂಕ್ಷ್ಮಗಳ ಅರಿವಾಯಿತು. ಮಾನ್ಸೂನ್ ವೆಡ್ಡಿಂಗ್ ಸಿನಿಮಾ ನೋಡಿದ ಸಂಬಂಧಿಕರ ಹುಡುಗಿ ಇದು ಅವಳದೇ ಕತೆ ಎಂದಾಗ ಬೆಚ್ಚಿ ಬಿದ್ದಿದ್ದೆ. ನಿಕಟ ಸಂಬಂಧಿಗಳೇ ಮಗಳ ಜೊತೆ ಅನುಚಿತವಾಗಿ ನಡೆದುಕೊಂಡಿದ್ದನ್ನು ತಿಳಿದೂ ಅವರೊಡನೆ ಏನೂ ನಡೆದೇ ಇಲ್ಲವೆಂಬಂತೆ ವರ್ತಿಸುತ್ತಿದ್ದ ಅವಳ ತಂದೆ-ತಾಯಿಗಳ ಬಗ್ಗೆ ಸಿಟ್ಟು, ಅಸಹ್ಯ ಮೂಡಿತ್ತು. ಆ ಮಕ್ಕಳ ಪೀಡಕ ಸಂಬಂಧಿಯನ್ನು ಕಂಡಾಗಲೆಲ್ಲ ಈಗಲೂ ಮೈ ಉರಿಯುತ್ತದೆ.

೩-೪ ನೇ ತರಗತಿಯಲ್ಲಿದ್ದಾಗ ಪಕ್ಕದ ಮನೆಯ ಮಗುವನ್ನು ನೋಡಲು ಹೋದಾಗ, ಮಗುವಿನ ತಂದೆ ನನ್ನ ಕೆನ್ನೆ ಗಿಲ್ಲಿದಾಗ ಏನೋ ಇರುಸು ಮುರುಸು, ನಾನೇನೂ ಚಿಕ್ಕ ಮಗುವಲ್ಲ ಯಾಕೆ ಹೀಗೆ ಮಾಡ್ತಾರೆ ಅಂತ. ಮಗುವಿನ ತಾಯಿಯೂ ಅಲ್ಲೇ ಇದ್ದರೂ ಏನೂ ಹೇಳದೇ ಇದ್ದಾಗ, ಇದೇನೂ ತಪ್ಪಲ್ಲವೇನೋ ಅನಿಸಿದರೂ, ಅವರ ಮನೆಗೆ ಭೇಟಿ ಅಲ್ಲಿಗೇ ನಿಂತಿತು.
ಪಿ.ಯು.ಸಿ ಯಲ್ಲಿ ಟ್ಯೂಷನ್ ಗೆ ಹೋಗುವಾಗ, ರಾಜಾಜಿನಗರದ ಖ್ಯಾತ ಕಾಲೇಜಿನಲ್ಲಿ ಕೆಮಿಸ್ಟ್ರಿ ಪ್ರಾಧ್ಯಾಪಕರಾಗಿದ್ದ, ಟ್ಯೂಷನ್ ನಲ್ಲಿ ಕೆಮಿಸ್ಟ್ರಿ , ಜೊತೆಗೆ ಫಿಸಿಕ್ಸ್ ಹೇಳಿಕೊಡುತ್ತಿದ್ದ ನಡುವಯಸ್ಸಿನ ಅವರು, ಮುಂದಿನ ಸಾಲಿನಲ್ಲಿ ಕುಳಿತ ಹುಡುಗಿಯರ ಪಾದಗಳನ್ನು ತಮ್ಮ ಕಾಲ್ಬೆರಳುಗಳಿಂದ ಸವರುತ್ತಿದ್ದರು. ಯಾವಾಗಲೂ ಕೊನೆ ಬೆಂಚು ಹಿಡಿಯುತ್ತಿದ್ದ ನಾನು, ಹುಡುಗಿಯರು ಯಾಕೆ ಮೊದಲನೇ ಬೆಂಚಿನಲ್ಲು ಕುಳಿತುಕೊಳ್ಳಲು ಹಿಂದೆ-ಮುಂದೆ ನೋಡುತ್ತಿದ್ದಾರೆ ಅನ್ನುವುದರ ಸುಳಿವು ಸಿಕ್ಕಿದ್ದು ಲೇಟ್ ಆಗಿ ಬಂದದ್ದಕ್ಕಾಗಿ ಮೊದಲನೇ ಸಾಲಿನ ಬೆಂಚಿನಲ್ಲಿ ಕುಳಿತು ಕೊಳ್ಳುವ ಸಂದರ್ಭ ಬಂದಾಗ. ಒಂದು ಸಾರಿ ಕತ್ತೆತ್ತಿ ಕೆಕ್ಕರಿಸಿ ನೋಡಿದಾಗ ಸುಮ್ಮನಾಗಿದ್ದರು. ಟ್ಯೂಷನ್ ಅವರ ಮನೆಯಲ್ಲೇ ನಡೆಯುತ್ತಿತ್ತು. ಅವರ ಪತ್ನಿಯೂ ಅವರ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿದ್ದರು. ಅವರಿಗೆ ಹೋಗಿ ಹೇಳಿಬಿಡಲೇ ಅನ್ನಿಸಿದರೂ ಧೈರ್ಯ ಬರಲಿಲ್ಲ. ಆಮೇಲೆ ನಾವು ಹುಡುಗಿಯರು ಕಂಡುಕೊಂಡ ಸುಲಭೋಪಾಯ, ಹುಡುಗರನ್ನು ಮೊದಲನೇ ಬೆಂಚಿನಲ್ಲಿ ಕೂಡಿಸುವುದು!.
ಎಂಟು ವರ್ಷಗಳ ಹಿಂದೆ, ಮುಂಬೈನಲ್ಲಿ ಕೆಲಸದಲ್ಲಿದ್ದಾಗ ಬ್ರಿಟಿಷ್ ಸಮಯದ ಪಾಳಿಯ ಕೆಲಸ ಮುಗಿಸಿ ರಾತ್ರಿ ಹನ್ನೊಂದು ಗಂಟೆಯಲ್ಲಿ ಹೊರಟು ಮನೆ ಸೇರಲು ಒಂದು ಕಿ.ಮೀ ನಡೆಯಬೇಕಿತ್ತು. ಒಮ್ಮೊಮ್ಮೆ ಪುರುಷ ಸಹೋದ್ಯೋಗಿಗಳು ಜೊತೆಯಿರುತ್ತಿದ್ದರು. ಇಲ್ಲದಿದ್ದಾಗ ಬಿರುಸಾಗಿ ನಡೆಯುತ್ತ ಹೋಗುವಾಗ ಯಾರೇ ಇದಿರಿಗೆ ಬಂದರೂ ಸ್ವಲ್ಪ ಅನುಮಾನವೇ. ಆದರೆ ೪-೫ ತಿಂಗಳ ಅವಧಿಯಲ್ಲಿ, ಒಮ್ಮೆಯೂ ಯಾವುದೇ ಅನುಚಿತ ವರ್ತನೆಗೂ ಗುರಿಯಾಗದ್ದಕ್ಕೆ ಮುಂಬೈ ಎಷ್ಟು ಸುರಕ್ಷಿತ ಅನ್ನಿಸಿದ್ದೂ ಹೌದು. ಅದು ಈಗ ಸಾಧ್ಯವಾ?
ಕಛೇರಿಯಲ್ಲಿ ಪುರುಷ ಸಹೋದ್ಯೋಗಿಗಳು ಇದಿರಿಗೆ ಸಿಕ್ಕಾಗ ಅವರು ಮೈಯೆಲ್ಲ ಕಣ್ಣಾಡಿಸಿ ಆಮೇಲೆ ಕಣ್ಣು ಸಂಧಿಸುವಾಗ ಅವರ ಮೇಲೆ ಮೂಡುವುದು ತುಚ್ಛ ಭಾವನೆ. ಅಂತಹ ಹಲವರ ನಡುವೆ, ರಾತ್ರಿ ಕೆಲಸದ ಒತ್ತಡದಲ್ಲಿ, ಕೆಲವೊಮ್ಮೆ ತಡವಾಗಿ ಹೊರಟಾಗ ಆಫೀಸಿನ ಕ್ಯಾಬ್ ನಲ್ಲೇ ಹೊರಟರೂ ಸೇಫಾಗಿ ಮನೆ ಸೇರಿದಿರಾ ಇಲ್ಲವಾ ಎಂದು ಕೇಳುವ ಮ್ಯಾನೇಜರ್ ಮೇಲೆ ಗೌರವ ಭಾವನೆ ಮೂಡುತ್ತದೆ.
ಹಿಂದೆ ಕೂತ ಹುಡುಗಿಯರನ್ನು ನೋಡಲೆಂದೇ ಕನ್ನಡಿಯನ್ನು ಅಳವಡಿಸಿಕೊಂಡ ಆಟೋ ಚಾಲಕರು, ಮಹಿಳೆಯರೊಡನೆ ಏಕವಚನದಲ್ಲಿ, ತುಚ್ಛವಾಗಿ ಮಾತನಾಡುವ ಆಟೋ ಚಾಲಕರು ಒಂದು ಕಡೆ. ಗಿರಿನಗರದಲ್ಲಿ ಮದುವೆಗೆ ಹೋಗಿ, ೧೦-೧೧ರ ರ ರಾತ್ರಿಯಲ್ಲಿ ಆಟೋ ಸಿಗದೆ ಮಗುವಿನೊಡನೆ ಕಾದು ನಿಂತಿದ್ದಾಗ, ನಂದು ಇದೇ ಏರಿಯ ಮೇಡಂ ಟ್ರಿಪ್ ಹೋಗಲ್ಲ ಅಂದು ತುಸು ದೂರ ಹೋಗಿ ವಾಪಸ್ ಬಂದು, ವನ್ ಅಂಡ್ ಹಾಫ್ ಕೊಟ್ಬುಡಿ ಬನ್ನಿ ಮೇಡಂ ಆಂದು ಮನೆ ತಲುಪಿಸಿದ ಆಟೋ ಚಾಲಕ, ದೂರದ ಖರಗ್ ಪುರದಲ್ಲಿ ಒಮ್ಮೆ ನಡು ರಾತ್ರಿಯ ರೈಲು ಹಿಡಿಯುವಾಗ ’ಆಪ್ ಅಕೇಲೆ ಕೈಸೆ ಜಾಯೆಂಗೆ’ ಅಂದು ತಾನೇ ಖುದ್ದಾಗಿ ಬಂದು ರೈಲು ಹತ್ತಿಸಿದ ಸಹೋದ್ಯೋಗಿ ಬೆಂಗಾಲಿ ಹುಡುಗ, ಕಾಶ್ಮೀರದಲ್ಲಿ ’ಹಮ್ ಹೈ, ಆಪ್ ಬೇಫಿಕರ್ ರಹಿಯೆ’ ಎಂದು ಸೇಫಾಗಿ ಊರೆಲ್ಲ ಸುತ್ತಾಡಿಸಿದ ಡ್ರೈವರ್ ಸಜ್ಜದ್, ಮನು ಕುಲದ ಮೇಲೆ ನಂಬಿಕೆಯನ್ನು ಬಲಪಡಿಸುತ್ತಾರೆ. ’ಸಿಕ್ಕಿ ಹಾಕಿಕೊಳ್ಳುವುದಿಲ್ಲ ಎಂದು ಗೊತ್ತಿದ್ದಾಗ ಎಲ್ಲರೂ ತಪ್ಪು ಮಾಡುತ್ತಾರೆ’ ಅನ್ನುವ ನುಡಿಯನ್ನು ಸುಳ್ಳು ಮಾಡುತ್ತಾರೆ.
 
 

‍ಲೇಖಕರು G

5 January, 2013

7 Comments

  1. Gouri Satya

    Probably this is the experience of most of the teenage girls in our country, sad and unfortunate. A good piece by Mrs. Radhika Ganganna, exposes the male dominated society’s attitude towards women.

  2. Shantala Lakkanna

    Radhika, Very nice article, which brings back the faith and good hopes.

  3. malathi S

    well written Radhika…these r never ending tales..this SHOULD end and we should see to it..
    ms

  4. Radhika

    Thanks Avadhi!. Thanks Gauri Satya Sir, Shantala and Malathi 🙂

  5. Shama Nandibetta

    Good one Radhika.. Liked it

  6. bharathi bv

    Yaako ella mai uri tharisutte radhika … ella yaake sahisi koltivi anthle gottagalla

  7. usha

    Allalli inukuva olleyatana dindaagiye bahush ee jagattu nadeyuttiruvudu endu anisutte..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading