ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಮಕೆ ಸೌರಭ ಬರುವ ಗಳಿಗೆ…

‘ಡೋರ್ ನಂ ೧೪೨’ -ಅಂಕಣದಲ್ಲಿ ಬಹುರೂಪಿ ಅವರು ಈ ಬಾರಿ ಬರೆದ ‘ಬಿಚ್ಚಬೇಕಾದ ಕಟ್ಟಡಗಳು, ಆಲಿಸಬೇಕಾದ ದನಿಗಳು’ ಲೇಖನಕ್ಕೆ ನಮ್ಮ ನಡುವಿನ ಮುಖ್ಯ ಲೇಖಕಿ, ಬ್ಲಾಗ್ ಮಂಡಲದ ಸದಸ್ಯೆ  ಟೀನಾ ಪ್ರತಿಕ್ರಿಯೆ ನೀಡಿದ್ದಾರೆ. ಇದು ಇನ್ನಷ್ಟು ವಿಷಯಗಳನ್ನು ಹಂಚಿಕೊಳ್ಳಲು ಬಹುರೂಪಿಯವರನ್ನೂ ಪ್ರೇರೇಪಿಸಿದೆ. 

ಈ ಚರ್ಚೆಗೆ ನೀವೂ ದನಿಗೂಡಿಸುವುದು ಅಗತ್ಯ ಎಂದು ‘ಅವಧಿ’ಗೆ ಅನಿಸುತ್ತಿದೆ. ದಯವಿಟ್ಟು ಪ್ರತಿಕ್ರಿಯಿಸಿ. ಚರ್ಚೆ ಬೆಳಸೋಣ. ಮೈಲ್ ಮಾಡಿ : avadhi.pusthaka@gmail.com  ಅಥವಾ ಕಾಮೆಂಟ್ಸ್ ಅಂಕಣದಲ್ಲಿ ನೇರವಾಗಿ ಬರೆಯಿರಿ.   

comments12.jpg

Tina | tinashashikanth@gmail.com |

ನಿಜವಾಗ್ಲೂ! ನೀವು ಹೇಳಿರೋ ಮಾತುಗಳು ಬಹಳ ಸಮಂಜಸವಾಗಿವೆ. ಎಲ್ಲೀತನಕ ಲೈಂಗಿಕ ವಿಚಾರಗಳನ್ನ ಖುಲ್ಲಂಖುಲ್ಲಾ ಮಾತಾಡೋದು ‘taboo’ ಆಗಿರತ್ತೋ ಅಲ್ಲೀತನಕ ಎಷ್ಟೋ ಮಕ್ಕಳು ತಮ್ಮ ಲೈಂಗಿಕತೆಯ ಬಗ್ಗೆ ಹಲವಾರು ಫೋಬಿಯಾಗಳನ್ನ ಬೆಳೆಸಿಕೊಳ್ತ, ಹೇಳ್ಲಾರದೆ, ಮುಚ್ಚಿಡಕ್ಕೂ ಆಗದೆ ಒದ್ದಾಡುತ್ತಲೆ ಇರ್ತಾರೆ.

ನಮ್ಮ ಮಕ್ಕಳಿಗೆ ನಾವು ಯಾಕೆ ತಿಳಿಹೇಳಬಾರದು? ಕೆಲವೊಂದು ಸಂದರ್ಭಗಳಲ್ಲಿ ಸ್ವಲ್ಪ ನಿಗಾವಹಿಸಿದರೆ, ಮಕ್ಕಳಿಗೆ ಇಂತಹ ಸಂದರ್ಭಗಳಲ್ಲಿ ಹೇಗೆ ವರ್ತಿಸಬೇಕು ಎಂದು ಹೇಳಿಕೊಟ್ಟರೆ ಸಾಕು. ಇದನ್ನೆಲ್ಲ ಸ್ಕೂಲುಗಳಲ್ಲಿ ಹೇಳಿಕೊಡಲಿಕ್ಕೆ ಆಗಲ್ಲ ಅಂತ ಬಹಳ ರಾಜಕೀಯ ನಡಿಯತ್ತೆ. ಆದರೆ ನಾವು ತಂದೆತಾಯಿಗಳು ಯಾಕೆ ಈಕಡೆ ಗಮನ ಹರಿಸಿ ಸರಿಯಾದ ಹೆಜ್ಜೆ ಇಡಬಾರದು?
ಥ್ಯಾಂಕ್ಯೂ, ನೀವಾರೇ ಆಗಿರಲಿ.

girlchild.jpg 

bahuroopibahuroopii@gmail.com

ನಮ್ಮ ಮನೆಯಿಂದಲೇ ಲೈಂಗಿಕ ಅರಿವಿನ ಪಾಠ ಶುರುವಾಗಬೇಕು ಎನ್ನುವುದು ಖಂಡಿತಾ ಸರಿ. ಈ ಎಲ್ಲ ಕಥೆಗಳನ್ನು ಕೇಳಿದ್ದ ನಾವು ನನ್ನ ಅಕ್ಕನ ಮಗಳ ಹಾಗೂ ನನ್ನ ಮಗಳು ಋತುಮತಿಯಾಗುವ ಸಮಯ ಹತ್ತಿರ ಬಂದಾಗ ಮೊದಲೇ ಅವರಿಗೆ ದೈಹಿಕವಾಗಿ ಏನಾಗುತ್ತದೆ ಎಂಬುದನ್ನೂ ವಿವರಿಸಿ ಹೇಳಿದ್ದೆವು. ಇದು ನಿಜಕ್ಕೂ ನಮಗೂ ನಮ್ಮ ಮಕ್ಕಳಿಗೂ ಒಂದು ಪಾಠವಾಗಿತ್ತು.

ನನ್ನ ಮಗಳು ರುತುಮತಿಯಾದಾಗ ನಾನು ನನ್ನ ಬಂಧು ಹಾಗೂ ಆಪ್ತ ಗೆಳೆಯರ ಬಳಗಕ್ಕೆ ‘ಶಿ ಎಂಟರ್ಡ್ ಟೀನ್ ವರ್ಲ್ಡ್’ ಅಂತ ಎಸ್ ಎಂ ಎಸ್ ಕಳಿಸಿದ್ದೆ. ಬಹುತೇಕ ಮಂದಿ ಅವಳಿಗೆ ಫೋನ್ ಮಾಡಿ ಅಭಿನಂದಿಸಿದ್ದರು. ಅಷ್ಟೇ ಅಲ್ಲ ಇನ್ನೂ ಹಲವು ವಿಷಯ ಮಾತಾಡಿಕೊಂಡಿದ್ದರು.

ಯಾವಾಗಲೂ ಗುಪ್ತಾಂಗದ ವಿಷಯ ಬಂದಾಗ ನಾವೆಲ್ಲರೂ ‘ಶೇಮ್ ಶೇಮ್’ ಅನ್ನುತ್ತೇವಲ್ಲ. ಅದರ ಬಗ್ಗೆ ಎಷ್ಟು ಯೋಚಿಸಿದ್ದೇನೆ. ಯಾಕೆ ಅದು ಶೇಮ್ ಎನ್ನುವ ಭಾವನೆಯನ್ನು ಬಾಲ್ಯದಿಂದಲೇ ತುಂಬಿ ಬೆಳಸಬೇಕು. ಅದು ಶೇಮ್ ಹೇಗಾಗಲು ಸಾಧ್ಯ. ಅದು ಪ್ರದರ್ಶಿಸಲಾಗದ ಭಾಗ ಮಾತ್ರವೇ ಹೊರತು ಶೇಮ್ ಅಂತೂ ಖಂಡಿತಾ ಅಲ್ಲ.

ಎಷ್ಟು ಹೆಣ್ಣು ಮಕ್ಕಳು ಋತು ಸಂಬಂಧಿ ನೋವಿನಿಂದ, ಸಮಸ್ಯೆಯಿಂದ ಬಳಲುತ್ತಾರೆ. ತಮಗೆ ಈ ಬದುಕು ಯಾಕೆ ಬೇಕಿತ್ತು ಎಂದು ಒದ್ದಾಡಿ ಹೋಗುತ್ತಾರೆ. ಆದರೆ ಆ ಬಗ್ಗೆ ಎಷ್ಟು ಮಂದಿಗೆ ಅರಿವಿದೆ. ಈ ಎಲ್ಲವೂ ಯಾಕೆ ಮಾತನಾಡುವ ವಿಷಯವಾಗಬಾರದು. ‘ಸುಮಕೆ ಸೌರಭ ಬಂದ ಗಳಿಗೆ’ ನೆನಪಿನಲ್ಲಿ ಸದಾ ಒಂದು ಸಂಭ್ರಮವಾಗಿ ಉಳಿಯಬೇಕು. ಬದಲಿಗೆ ದುಸ್ವಪ್ನವಾಗಿಬಿಡಬಾರದು.

ಇದು ಹೇಳಲು ನೆಪ ಒದಗಿಸಿದ್ದಕ್ಕೆ ಥ್ಯಾಂಕ್ಸ್ ಟೀನಾ-
-ಬಹುರೂಪಿ

‍ಲೇಖಕರು avadhi

22 February, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading