ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ‘ಚಿಂತಾಮಣಿ’ಗೊಂದು ಪತ್ರ

ಸತೀಶ ಕುಲಕರ್ಣಿ

ಹಿರಿಯ ಕವಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ‘ಚಿಂತಾಮಣಿ’ ಹೊಸ ಕವನ ಸಂಕಲನವನ್ನು ಓದಿ ಸರ್ ಅವರಿಗೆ ಬರೆದ ಪತ್ರವಿದು. ಸಂಕಲನದಲ್ಲಿ ಒಟ್ಟು ೪೪ ಕವಿತೆಗಳಿವೆ. ಖ್ಯಾತ ವಿಮರ್ಶಕ ಡಾ. ಎಚ್.ಎಸ್. ರಾಘವೇಂದ್ರರಾವ್ ಇದಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ‘ಚಿಂತಾಮಣಿ’ ಸಂಕಲನದ ಕವಿತೆಯಲ್ಲಿ ಮಾತೃಗೀತೆ, ಸಖೀ ಗೀತೆ ಮತ್ತು ಭೂಮಿ ಗೀತೆಗಳು ವಿಷಾದ ವೀಣೆಯ ತಂತಿಗಲಾಗಿವೆ ಎಂದು ಎಚ್.ಎಸ್.ಆರ್. ಹೇಳುತ್ತಾರೆ. ನಾನು ಬರೆದ ಪತ್ರ ಹೀಗಿದೆ.

ಪ್ರೀತಿಯ ಶ್ರೀ ಪಟ್ಟಣಶೆಟ್ಟಿ ಸರ್

ನಮಸ್ಕಾರ, ಚಿಂತಾಮಣಿ ಕವನ ಸಂಕಲನ ಶ್ರೀಮತಿ ಹೇಮಾ ಅವರಿಂದ ಸಿಕ್ಕಿತು. ಈಗಿನ ಬಿಡುವಿನ ವೇಳೆಯಲ್ಲಿ ಓದಿದೆ. ನಾವೆಲ್ಲ ನಿಮ್ಮ ಹಿಂದೆ ಬೆನ್ನು ಹತ್ತಿ ಬಂದವರು. ಕವಿತೆ, ನಾಟಕ, ಸಂಘಟನೆ ಹೀಗೆಲ್ಲ. ಅಂದು ಫಲಿತ ಪ್ರೀತಿ, ನಿಮ್ಮೆಲ್ಲ ಬರಹಗಳನ್ನು ಓದಿದಾಗ ನಾವು ಈಗಲೂ ಸ್ಟೂಡೆಂಟ್ಸ್ ಆಗುತ್ತೇವೆ. ಚಿಂತಾಮಣಿಆ ಸುಖಕ್ಕೆ ನೀರೆರೆಯಿತು !

ಅದೇ ಸಹಜತೆ, ಸರಳತೆ. ಕವಿತೆಗಳಿಗೊಂದು ಜೀವ ಭಾವದ ಪರ, ಪ್ರೀತಿ ನಿಟ್ಟುಸಿರು ಕಂಡೆ. ಹೊತ್ತೇರಿದ ಗಾಬರಿ ಎಲ್ಲ ಅನುಭವಿಸಿದೆ.  ಒಂದಿಷ್ಟು ಸುಂದರ ಸಾಲುಗಳು, ನಮ್ಮಂಥವರ ಬರವಣಿಗೆಯಿಂದ ಮಾಯವಾದ ಶಬ್ದಗಳೂ ಸಿಕ್ಕವು.

ಈ ನಡುವೆ ಜೀವನವು
ಅರ್ಥಕ್ಕೆ ಸಿಗದ, ಆಕಾರವಿರದ ವಿಹಗ – (ಉಳುಕು)

ನೆಮ್ಮದಿಯ ಸಂತೃಪ್ತ ಸಾವು ಸಂಧಿಸಲು
ಇಷ್ಟಾದರೂ ಬೇಡವೇ ಸಿದ್ಧನಿಗೆ
ಸಿದ್ಧತೆ. – (ಸಿದ್ಧತೆ)

ಈ ಕೆಟ್ಟ ಕಾಲದಲ್ಲಿ ಮನಸ್ಸಿಗೆ ಹಿತಕೊಡುವ ಕಾವ್ಯವನ್ನು  ಓದುವ ಹಂಬಲಕ್ಕೆ ‘ಚಿಂತಾಮಣಿ‘ ನೆಮ್ಮದಿ ನೀಡಿತು. ಕಾಲದ ಸುಳಿಯಲ್ಲಿ ಹಿಂದಿನದೆಲ್ಲವೂ ಸುಳ್ಳು. ಈಗಿರುವುದು ಮಾತ್ರ ನಮ್ಮದು, ನಾಳೆ ಯಾರದೋ ಅನ್ನುವಂಥ ಮನಃಸ್ಥಿತಿಯಲ್ಲಿ ಬದುಕುತ್ತಿರವ ಈ ದಿಗಳಲ್ಲಿ ‘ಚಿಂತಾಮಣಿ’ ಮನಸ್ಸನ್ನು ತಿಳಿಗೊಳಿಸಿತು. (ಕಾವ್ಯ ಇಷ್ಟೂ ಮಾಡದಿದ್ದರೆ ಏನು ಪ್ರಯೋಜನ?)

ಕುತೂಹಲಕ್ಕಾಗಿ ಕೆಲವುಗೊತ್ತಿಲ್ಲದ, ಮರೆತ ಶಬ್ದಗಳನ್ನು ನಿಮ್ಮ ಕವಿತೆಗಳಿಂದ ಗುರುತು ಹಾಕಿಕೊಳ್ಳುತ್ತಾ ಹೋದೆ.

ಉದಾ: ಕದಪುಗಳ ಕೊಳದಿ, ಆಕಾರವಿರದ ವಿಹಗ, ತಟದಟ ತಟಾಕ, ವಿಗಳಿತ ಕರಗುತಿದೆ, ಸುಳಿಬೆಳಕ ಹುಣ್ಣಿಮೆ, ಒರಳಲಿ ಚಿದ್ಘನ ಕಾಲವ್ಯಾಲ, ತಾಂಬಡಿ, ಮಂತ್ರಿತ ಅಗ್ನಿ ಪೂತೆಪದಪದಾಲೆ, ಅಗ್ನಿ ಮಂತ್ರ, ಕಿರು ಗುಡೆ, ಚಕ್ರ ನವನೀತ, ಪುಂಡೀಕಟಿಗೆ

ಇವೆಲ್ಲ ಶಬ್ಧ ಶಬ್ದಾರ್ಥ, ಜೋಡಿ ಪದಗಳು ಕಾಡಿದವು. ತಡೆ ಹಿಡಿದು ಅರ್ಥಕ್ಕೆ ಚಾಚಿದವು .

ಅವ್ವನ ಬಗ್ಗೆ ಬರೆದ ಪ್ರತಿಯೊಂದು ಪದ್ಯ ಎಂಭತ್ತರಲ್ಲಿ ನೀವು ಕಣ್ತುಂಬಿ ಅತ್ತು ನಿಂತಂತೆ ಅನ್ನಿಸಿತು.

ಈಗ ನೀ ಬರಿ ಗಂಧ ನೀರು ಮಣ್ಣು
ಅಲ್ಲ , ನೀರು ತುಂಬಿದ  ನನ್ನ ನಿತ್ಯದ ಕಣ್ಣು – ( ಬೆಳ್ಳಿ ತಾಯಿ )

ಕಲಹ ಕದನಗಳು ಬೇಡ ನನಗೆ
ನಿನ್ನ ಪ್ರೀತಿ ಹಗ್ಗದಲಿ ಕಟ್ಟು
ನನ್ನವ್ವಾ ಬಂಧಿಸಿ ಬಿಡು
ಇವರ ಕಲಹೇಚ್ಚು ಮದ್ರೆನ ಮುದ್ರಗಳನ್ನು
ಅಟ್ಟ್ಟಿಬಿಡು ನಾ ಅಂದು ಕಂಡ
ಎತ್ತ ನೋಡಿದತ್ತ ಬರೇ ನೀರು
ವಾರಾಪಾರ : ಧಾರಾಕಾರ ನೀರು
ನೀರಾಗಿದ್ದ ಊರಿನೆಡೆ ನೆಲದ ಕಡೆ
ನೆಲೆಯಿರದ ನೆಲೆಸಹಿತ ನೆಲೆಯೆಡೆಗೆ
ಕಾಲತೀತ ಕಾಲನೆಡೆಗೆ ದೂಡು  – ( ನೆಮ್ಮದಿ )

ಅವ್ವನ ಕುರಿತಾದ ೬ -೮ ಕವಿತೆಗಳು ಬಹಳ ಕಾಡಿದವು. ಸಮಾಧಾನವಾಗಿ ಸಾವಧಾನದಿಂದ ಚೂರು ಚೂರು ಸವಿಯಲ್ಲಿ ಓದಿದಾಗ ಈ ಸಾಲುಗಳು ರುಚಿ ಕೊಟ್ಟವು : ಮನಸ್ಸಿಗೆ ಗಾಂಧಿಕವಿತೆಯ ಕೊನೆಗೆ :

ಇದು ಕಾಲ ಧರ್ಮವೇ ?
ಇದು ಕಾಲ ಧರ್ಮವೇ !

ಉದ್ಗಾರ ಮತ್ತು ಪ್ರಶ್ನೆಗಳ ನಡುವೆ ಗಾಂಧಿ ಕಂಡಿದ್ದಾನೆ.

ಹರಿಗೀತಮಹತ್ವದ ಕವಿತೆ ಎನಿಸಿತು
ಕಣ್ಣಲ್ಲಿ ಕಣ್ಣಿಟ್ಟೆ ಜಗವೆಲ್ಲ ನಾನೇ
ವಿಮಲ ಹರಿಯ  ನಯನ ಜಲ
ನದಿಯಲ್ಲಿ ನಿರ್ಮಲ ನೀರು ಈಗಲೂ ಹರಿಯುತ್ತಿದೆ
ನಾನೂ ಹರಿಯಬೇಕು ಹರಿ
ಹರಿ ಹರಿದು ಹರಿಯಾಗುವೆನು ನಿನ್ನಂತೆ

ನಾನಾ ಅರ್ಥ ಪದರು, ವಿಸ್ತಾರಗಳಿಗೆ ಹರಿ ಪ್ರಾಪ್ತವಾಗುವುದು. ನಿಮ್ಮ ನಿರ್ಮಲ ಮನಃಸ್ಥಿತಿಗೆ ಸಾಕ್ಷಿಯಾಗಿದೆ.

ಕತಕತ ಕುದಿಯುವ ನೀರಲ್ಲಿ
ಕಾಲು ಇಳಿ ಬಿಟ್ಟು ಕುಳಿತಿದೆ
ಕೆಂಡದ ಪಿಂಡ ನಿಗಿನಿಗಿ ಕುಣಿಯುತ್ತಿದೆ
ಚುರುಗುಡುವ ಹಂಚಿನಲಿ
ಕನಸಿನ ಕಡಲೆ ಹರಿಯುತ್ತಿದೆ
ನಾಲಿಗೆಯ ಪದದಾತಿ  ದಳದ ಎದೆ ಮೇಲೆ
ಅಗ್ನಿ ಮಂತ್ರ ಮಣಿ ಮಣಿಸುತ್ತಿದೆ  – ( ನೆಮ್ಮದಿ )

ನನ್ನ ದೇಶದ ನನ್ನ ಪ್ರತಿಬಿಂಬ ನನ್ನೂರು
ಗೊಂದಲದ ಗೂಡು ಈ ಹಳ್ಳಿ
ಹೊಸ ಕಾಲದ ಹಳೆಯ ಒಣಗಿದ ಬಳ್ಳಿ  – ( ನನ್ನ ಹಳ್ಳಿ )

ಬುದ್ಧ, ಗಾಂಧಿ, ಹರಿಗೀತ ಅವ್ವನ ಅಡಕಲ ಗಡಿಗೆ, ಮಾನಧನ, ಅವ್ವ ಹಚ್ಚಿಕೊಟ್ಟ ತಾಂಬಡಿ, ಬಾಳೆ, ಬೆಳ್ಳಿ ತಾಯಿಮಾಟದ ತಾಟುಕಾಲ ಮುಖ, ಋಣ ಮುಕ್ತಿಇವೆಲ್ಲ ಕವಿತೆಗಳು ಮತ್ತೆ ಮತ್ತೆ ಓದಿಸಿಕೊಂಡವು

ಕೊನೆಯಲ್ಲಿ  : ಇಷ್ಟು ಶ್ರದ್ಧೆ, ಪ್ರೀತಿ ಇಟ್ಟು ಈಗಲೂ ಕಾವ್ಯ ಉಸಿರಾಡುವ ನಿಮ್ಮಿಂದ ನಾವು ಕಲಿಯುವುದು  ಬಹಳವಿದೆ.

ಯಾಕೆ ಹೀಗೆ ಬದುಕು ತೂಗು ತೊಟ್ಟಿಲು’ ಎನ್ನುತ್ತ

ವಯೋ ಧರ್ಮ
ಮಾನ ಧನ  – ( ಮಾನ ಧನ )

ಇದೇ ಜೀವ ಮತ್ತು ಕವಿತೆಯ ಸತ್ಯ ಎಂದು ತಿಳಿದೆ.

‍ಲೇಖಕರು Avadhi

13 May, 2021

1 Comment

  1. Nagaraj HUDED

    ಬಹಳ ಆಪ್ತವಾದ ಬರಹ ಸರ್. ಸಿದ್ಧಲಿಂಗ ಪಟ್ಟಣ ಶೆಟ್ಟಿ ಹಾಗೂ ಸತೀಶ್ ಕುಲಕರ್ಣಿ ಸರ್ ಸಾಹಿತ್ಯ ದಿಗ್ಗಜರು. ಅವರ ಬರಹ ಮಾತುಗಳಲ್ಲಿ ಏನೋ ಸೆಳೆತವಿದೆ ಮತ್ತು ಹಿತವಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading