ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂವರ್ತ 'ಸಾಹಿಲ್' ಕವಿತೆಗಳು ಇಲ್ಲಿವೆ..

ಸಂವರ್ತ ‘ಸಾಹಿಲ್’

ಎಂದೋ ಬರೆದ (ಅಥವಾ ಬರೆಯಲು ಪ್ರಯತ್ನಿಸಿದ) ಕನ್ನಡ ಕವಿತೆಗಳು ಇಂದು ಕೈಗೆ ಸಿಕ್ಕವು.
ಸುಮ್ನೆ ಇರ್ಲಿ ಅಂತ ಹಂಚಿಕೊಳ್ಳುತ್ತಾ ಇದ್ದೆನೆ…

ರಕ್ತ ಚೆಲ್ಲದ ಹಿಂಸೆ

ಗುಂಡಿನ ಸದ್ದು ಎಲ್ಲೂ ಕೇಳಲಿಲ್ಲ
ಸಂತೆಯಲಿ ವ್ಯಾಪಾರ ಮುಂದುವರಿದಿದೆ
 
ಹೊಗೆ ಆಡುವುದು ಎಲ್ಲೂ ಕಂಡು ಬರಲಿಲ್ಲ
ಬೃಂದಾವನದಿ ವಸಂತ ಕುಣಿದಾಡಿದೆ
 
ಚೇತ್ಕಾರ ಯಾವ ಬೀದಿಯಲೂ ಕೇಳ ಬರಲಿಲ್ಲ
ವೀಣೆಯ ತಂತಿಗಳು ಸಂಗೀತಕ್ಕೆ ರೆಕ್ಕೆ ನೀಡಿವೆ
 
ರಕ್ತವೇ ಚೆಲ್ಲದ ಹಿಂಸೆಗೆ
ಯಾವ ಪುರಾವೆ ನೀಡಲಿ?
 
ಬರೆಯಲು ಕುಳಿತಿದ್ದೇನೆ ಕಾವ್ಯ
ಬರೆಯಲು ಕುಳಿತಿದ್ದೇನೆ ಕಾವ್ಯ
ಜನರನ್ನು ತಲುಪಲು ಎಂದಲ್ಲ
ಶಾಂತಿ ಮಾತು ಕೇಳುವ ತಾಳ್ಮೆ
ಯಾರಲ್ಲೂ ಉಳಿದಿಲ್ಲ
ಬರೆಯಲು ಕುಳಿತಿದ್ದೇನೆ ಕಾವ್ಯ
ನೊಂದವರ ದನಿ ಆಗಲೆಂದಲ್ಲ
ಪದಗಳಲ್ಲಿ ಈ ನೋವ
ಹಿಡಿದಿಡುವ ಶಕ್ತಿ ಇಲ್ಲ
ಬರೆಯಲು ಕುಳಿತಿದ್ದೇನೆ ಕಾವ್ಯ
ಚಳುವಳಿಗಳಿಗೆ ಹುರುಪು ನೀದಲೆಂದಲ್ಲ
ಚಳುವಳಿಗಳ ದಮನಿಸಿದೆ
ಪ್ರಭುತ್ವ
ಬರೆಯಲು ಕುಳಿತಿದ್ದೇನೆ ಕಾವ್ಯ
ಏಕಾಂತದಿ
ಹಿಂಸೆಯ ನಡುವೆ
ಇನ್ನೇನೂ ಮಾಡಲಾಗದ
ಅಸಹಾಯಕತೆಯಿಂದ
ಭಕ್ತ ಕುಂಬಾರನನ್ನು ಎದುರಿಗೆ ಕೂರಿಸಿಕೊಂಡು

ಮೆಚ್ಚಿರಬಹುದು
ಕುಂಬಾರಣ್ಣ
ನಿನ್ನ ಭಕ್ತಿಯ
ದೇವರು ಮತ್ತು
ದೇವತಾ ಮನುಷ್ಯರು

ಆದರೆ
“ಬಂಜೆ” ಎಂದು ಕರೆಸಿಕೊಳ್ಳುವ
ನನ್ನಾಕೆ
ಯಾಕೋ
ಶಪಿಸುತ್ತಾಳೆ ನಿನ್ನ

ಹಾಗೆ ಇರಬೇಕು ನೋಡು
ಬದುಕು:
ಸಿಕ್ಕಿದರೆ ಮಣ್ಣು
ಸಿಗದಿದ್ದರೆ ಚಿನ್ನ

ಕತ್ತಲೆಯೊಂದೇ  ನಿಜ

ಹೊಸ ದೀಪ ಹಚ್ಚಲೇ
ನಂದಿಹೊಗಿರುವ
ಹಣತೆಯ ಮತ್ತೆ ಹಚ್ಚಲೇ
– ಇಂಥಾ ದ್ವಂದ್ವದಲ್ಲೇ
ದೀಪಾವಳಿಯ ಸಂಜೆ
ಕತ್ತಲಲ್ಲಿ ಕರಗಿ ಹೋಯಿತು

ಆ ರಾತ್ರಿ
ನೀ ನನ್ನ ಕನಸಲಿ ಬಂದಾಗ
ಝಗ್ಗೆನ್ದು
ಸಾವಿರಾರು ದೀಪ
ಹೊತ್ತಿ ಉರಿದು
ಕನಸೆಲ್ಲಾ ರಂಗು ರಂಗು

ನೀನು, ಬೆಳಕು-
ಈಗ ಎಲ್ಲವೂ
ಒಂದು ಕನಸು

ಕತ್ತಲೊಂದೇ ನಿಜ

ಎರಡಾಗದ ತುಟಿ

ತುಟಿ ಎರಡಾದರೆ
ಹುಚ್ಚು ಹೊಳೆಯಂತೆ
ಹರಿದು ಬಂದೀತು
ಮಾತಾಗಿ
ಎದೆಯ ವೇದನೆ

ಎರಡಾಗದ ತುಟಿ!

ಹೃದಯ ಕಿನಾರೆಗೆ
ಅಲೆಗಳು
ಹೊಡೆದೊಡೆದು
ಹೃದಯ
ಸಾವಿರ ಹೋಳು

ಎರಡಾಗದ ತುಟಿ!

ಹೃನ್ಮನದ
ಮೌನದಲೆಗಳ ಅಬ್ಬರಕ್ಕೆ
ಬೆದರಿ
ಅಪ್ಪಿಕೊಂಡಿವೆ ತುಟಿಗಳು

ಎರಡಾಗದ ತುಟಿ!

ಇತಿಹಾಸ ಮರುಕಳಿಸುತ್ತದೆ

ಹೋಲಿಕೆಯೇ ಇಲ್ಲ
ಆದರೂ ಯಾಕೋ
ಈ ಮುಖ
ಹಿಟ್ಲರನನ್ನು ನೆನಪಿಸುತ್ತಿದೆ

ದೇಶ-ಭಾಷೆ-ಕಾಲ
ಎಲ್ಲವೂ ಬೇರೆ ಬೇರೆ
ಆದರೂ ಈ ಕವಿಗಳ ಕಾವ್ಯ
ಒಂದೇ ನೋವನ್ನು ಧ್ವನಿಸುತ್ತಿದೆ

ನನ್ನ ಮೌನ
ಅದೆಷ್ಟೋ ಪೂರ್ವಜರೊಂದಿಗೆ
ನನ್ನ
ಒಂದುಗೂಡಿಸಿದೆ!

ಹೆಸರೇ ಮರೆತುಹೋದ
ಇತಿಹಾಸದ ಮೇಷ್ಟ್ರು
ಹೇಳಿದ ನೆನಪು:
ಇತಿಹಾಸ ಮರುಕಳಿಸುತ್ತದೆ

 

‍ಲೇಖಕರು G

26 September, 2013

6 Comments

  1. mmshaik

    nice..kaaduva ..chintanege hachuva kavitegaLu..dhanyavaadagaLu avadhige..!

    • MANJUNATH DOLLIN

      KAVITEGALU CHENNAGIVE

  2. Arpitha

    Tumba chennagive kavithegalu….

  3. Swarna

    ರಕ್ತವಿಲ್ಲದ ಹಿಂಸೆ
    ಅಕ್ಷರಗಳಲ್ಲಿ ಹಿಡಿದಿಡಲಾಗದ ಹಾಡು
    ತುಟಿದಾಟದ ಭಾವ …ಚೆನ್ನಾಗಿದೆ

  4. prajna mattihalli

    Bhakta kumbarana kavite tumba chennagide

  5. subbanna mattihalli

    ಭಾಷೆಯನ್ನು ಮೀರಿದ ಒಂದು ಗಾಢ ವಿಷಾದದ ಭಾವ ಕವಿತೆಗಳ
    ಒಡಲಲ್ಲಿ ಹರಿಯುತ್ತಿದೆ. ಕವಿತೆಗಳು ಮನದೊಳಗೆ ಕಾಡುತ್ತಲೇ
    ಖುಷಿನೀಡುತ್ತವೆ. ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading