ಕವಿ ಮನಸು
ಶ್ರುತಿ ಬಿ.ಆರ್
ಕಾಲುದಾರಿಯಲ್ಲಿ ಕಂಡು,
ಕರೆದೊಯ್ಯೆಂದು ರಚ್ಚೆಹಿಡಿದ
ಕವಿತೆಗೆ ಕರಗದ
ನಿಷ್ಕರುಣಿ ಕವಿ!
ಈಗ ಅದೇ
ಇನ್ನಾರದೋ ಅಂಗಳದಿ
ಹೂವಾಗಿ ಅಣಕಿಸುವಾಗ
ಕಿಡಿಕಿಡಿಯಾದ

ಹಳೆಯ ಪದ್ಯವೊಂದು
ಮುಂಬಾಗಿಲಲ್ಲಿ ನಿಂತು
ಕರೆಗಂಟೆಯೊತ್ತಿ
ಪದಗಳ ಕಡ ಕೊಡಬಂದಾಗ
ಕದವಿಕ್ಕಿ ಕುಳಿತ
ದುರಭಿಮಾನಿ ಕವಿ
ಹೊಸ ಸಾಲುಗಳಿಗಾಗಿ
ಹಸಿದು ಕಂಗೆಟ್ಟ
ಇನ್ನಾರದೋ ಸೊತ್ತಾದ
ಹಳೆಯ ಪ್ರೇಯಸಿಯಂತೆ,
ಕೈಜಾರಿದ ಕವಿತೆಗಳು,
ಎಂದೋ ಮರೆತ
ಉಪಮೆಗಳು
ಬೆಂಬಿಡದೆ ಕಾಡುವಾಗ!
ಬಿಕ್ಕಿ ಬಿಕ್ಕಿ ಅಳುತಿಹುದು
ಪಾಪ ಬಡಪಾಯಿ
ಕವಿ ಮನಸು!
ನನ್ನೊಲವ ಸಮಾಧಿಯಿಂದ..
ಯಾರಲ್ಲಿ ಯಾರವರು!
ಮಣ್ಣು ಮುಚ್ಚಿದವರು,
ಒಂದೊಂದೇ ಇಟ್ಟಿಗೆ ಇಟ್ಟು
ಸಮಾಧಿ ಕಟ್ಟಿದವರು,
ನಗೆಯನ್ನೇ ಕದ್ದವರು,
ನಿಟ್ಟುಸಿರೊಂದೇ ನಿನಗೆಂದವರು,

ಅಗೋ ಆ ರಕ್ಕಸ ಕೈಗಳೆ,
ಜೀವಂತ ಒಲವ ಮುರಿದು
ಮಣ್ಣಲ್ಲಿ ಮಣ್ಣಾಗಿಸಿದವು,
ನರಳುತ್ತಿದ್ದ ನನ್ನೊಲವ
ಎತ್ತಿ ಮುದ್ದಿಸದಂತೆ
ಬೇಲಿ ಹಾಕಿದವು,
ನಿಮಿಷ, ತಾಸು, ವರುಷ
ಒಂಟಿತನದ ಬೇಗೆ
ತಾಳಿಕೊಂಡದ್ದೇ ಸೋಜಿಗ,
ಅಗೋ ಅಲ್ಲಿ ನನ್ನೊಲವ
ಸಮಾಧಿಯ ಮೇಲೆ
ಅಚ್ಚ ಹಸುರಾದ ಗಿಡ!
ಕೇಳಿ, ಕೇಳಿ, ಕೇಳಿರಿಲ್ಲಿ
ಮಣ್ಣು ಮುಚ್ಚಿದವರೇ,
ಸಮಾಧಿ ಕಟ್ಟಿದವರೇ,
ನನ್ನೊಲವು ನಶಿಸಿಲ್ಲ
ಮಣ್ಣು, ಕಲ್ಲುಗಳ ಸೀಳಿ
ಹಸುರಾಗಿ ಬಂದಿದೆ,
ನನ್ನೆದೆಯ ನೋವು,ವಿಷಾದದ ವಿಷಗಳ,
ಉರಿಯ ನುಂಗಲು,ವಿಷಕಂಠನಾಗಿ….





Very nice poem all d best
Beautiful lines
Awesome Shruthi.. 🙂 superrr likes.. 🙂
Thank you
Thank you all
ಅರ್ಥಪೂರ್ಣ ಸಾಲುಗಳು ಶೃತಿ
Nice lines Shruthi
A meaningful words..