ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಶೀಲ ಕಳೆದುಕೊಳ್ಳುವ' ಕಾನ್ಸೆಪ್ಟ್ ಸ್ತ್ರೀಯರಿಗೆ ಮಾತ್ರವೇ ಮೀಸಲೇ – ಅನಿತಾ ನರೇಶ್ ಮಂಚಿ

ಅನಿತಾ ನರೇಶ್ ಮಂಚಿ


ಒಬ್ಬ ದಾರಿಹೋಕ ಕತ್ತಲಾಗುವಾಗ ಒಂದು ಊರನ್ನು ಸೇರಿದ. ಅವನು ಹತ್ತಿ ಬಂದಿದ್ದ ಕುದುರೆಗೆ ನೀರು ಹುಲ್ಲು ಹಾಕಿ ಅದನ್ನು ಅಂಗಳದಲ್ಲಿ ಕಟ್ಟಿ ತಾನು ಮನೆಯೊಂದರ ಆಶ್ರಯದಲ್ಲಿ ಮಲಗಿದ. ಮಾರ್ಗಾಯಾಸದಿಂದಾಗಿ ಬೇಗನೆ ನಿದ್ದೆ ಬಂತು. ಬೆಳಗ್ಗೆ ಎದ್ದು ಕಣ್ಣು ಬಿಟ್ಟು ನೋಡಿದಾಗ ಕಟ್ಟಿದ ಅವನ ಕುದುರೆಯನ್ನು ಯಾರೋ ಕದ್ದೊಯ್ದಿದ್ದರು.ಅವನು ತನ್ನ ದುಃಖವನ್ನು ಎಲ್ಲರಲ್ಲೂ ಹೇಳಿಕೊಂಡ. ಅಲ್ಲ ಕುದುರೆಯನ್ನು ಅಲ್ಲಿ ಕಟ್ಟಿ ಇಲ್ಲಿ ಹೀಗೆ ಮೈಮರೆತು ನಿದ್ರಿಸಿದ್ದೀಯಲ್ಲ. ಅದು ನಿನ್ನ ತಪ್ಪು. ನೀನೆ ಜಾಗ್ರತೆ ವಹಿಸಬೇಕಿತ್ತು ಎಂದು ಅವನ ಮೇಲೆಯೇ ತಪ್ಪು ಹೊರಿಸಿದರು.ಯಾರೂ ಕಳ್ಳನ ದುಷ್ಟತನದ ಬಗೆಗೆ ಒಂದು ಮಾತೂ ಹೇಳಲಿಲ್ಲ.
ಇಂದು ನಡೆವ ದಾರಿಯಲ್ಲಿ , ವಾಹನದಲ್ಲಿ, ಹಾಡುಹಗಲಿನಲ್ಲಿ, ಇರುಳಿನ ಮಬ್ಬಿನಲ್ಲಿ, ಎಲ್ಲಿ ಯಾರಿಂದ ಬೇಕಾದರೂ ಅತ್ಯಾಚಾರಗಳು ನಡೆಯಬಹುದು. ಇದಕ್ಕೆ ವಯಸ್ಸಿನ ಬೇಧವಿಲ್ಲ. ಹೆಣ್ಣು ಎಂದಾದರಾಯಿತು.ತಿಂಗಳು ತುಂಬದ ಪುಟ್ಟ ಹಸುಳೆಯಿಂದ ಹಿಡಿದು ಬೆನ್ನು ಬಾಗಿದ ಹಿರಿಯ ಜೀವ ದವರೆಗೆ ಯಾರು ಬೇಕಾದರೂ ಇಂತಹ ಪರಿಸ್ಥಿತಿಗೆ ಬಲಿಯಾಗಬಹುದು.ಇದಕ್ಕೆ ಕಾರಣಗಳು ಎಂದು ಹೆಣ್ಣಿನ ಉಡುಗೆ ತೊಡುಗೆ ಬಿಂಕ ಬಿಗುಮಾನಗಳಿಗೆ ಬಯ್ದು ಸುಮ್ಮನಾಗುವುದನ್ನು ಕಾಣುತ್ತೇವೆ.
ಆದರೆ ಈ ರೀತಿಯ ಅಪರಾಧಗಳು ಏಕಾಏಕಿ ಘಟಿಸುವುದಿಲ್ಲ. ಆ ಮನುಷ್ಯನಲ್ಲಿರುವ ರಾಕ್ಷಸತನ ಆಗಷ್ಟೇ ಜನ್ಮ ತಳೆದಿರುವುದಲ್ಲ. ಅವರ ವಿಕೃತಿಗಳು ಮೊದಲಿಗೇ ಬೆಳಕಿಗೆ ಬಂದಿದ್ದರೂ ‘ದುಷ್ಟರಿಂದ ದೂರವಿರು’ ಎಂದು ನಮಗೆ ನಾವೇ ಬೇಲಿ ಹಾಕಿಕೊಂಡು ಅವರನ್ನು ಹೊರಗೆ ಆರಾಮವಾಗಿ ತಿರುಗಾಡಲು ಬಿಟ್ಟು ಬಿಡುತ್ತೇವೆ. ಆತ ಅವಕಾಶಕಾಗಿ ಕಾಯುತ್ತಿದ್ದು ಅಮಾಯಕರು ಬಲಿಯಾಗಿ ಮಾನ ಪ್ರಾಣ ಹರಣವಾದಾಗ ” ನಮಗೆ ಗೊತ್ತಿತ್ತು ಅವರ ಬುದ್ಧಿ, ಹಾಗಾಗಿ ನಮ್ಮ ಜಾಗರೂಕತೆಯಲ್ಲಿ ನಾವಿದ್ದೆವು” ಎಂದು ನಾವು ಪಾರಾದುದನ್ನು ಹೇಳಿಕೊಳ್ಳುತ್ತೇವೆ. ಅಂತಹ ಘಟನೆಗಳು ನಮ್ಮಲ್ಲಾಗಲಿಲ್ಲ ಎಂದು ಸಮಾಧಾನಿಕೊಳ್ಳುತ್ತಾ ಒಂದು ನಾಲ್ಕು ದಿನ ಅದರ ಬಗ್ಗೆ ಮಾತನಾಡಿ ಮರೆತುಬಿಡುತ್ತೇವೆ.
ಪರಿಹಾರೋಪಾಯಗಳು ಕೂಡಾ ಹೀಗಿರುತ್ತವೆ. ಒಬ್ಬಳೇ ಹೋಗಬೇಡ, ಕರಾಟೆ ಕಲಿ,ಕೆಲಸ ಏನೇ ಇದ್ರೂ ನಿಲ್ಲಿಸಿ ಬೇಗನೆ ಮನೆಗೆ ಬಾ, ಅವರಿವರ ಜೊತೆ ಮಾತಾಡಬೇಡ.. ಹೀಗೆ ಪಟ್ಟಿ ಹೆಚ್ಚುತ್ತಾ ಹೋಗುತ್ತದೆ. ಯಾರಾದರೂ ಗಂಡಿಗೆ,’ಹೆಣ್ಣನ್ನು ಗೌರವಿಸು, ಅವಳ ಸ್ಥಾನದಲ್ಲಿ ನಿನ್ನ ತಾಯಿಯನ್ನೋ, ಒಡಹುಟ್ಟುಗಳನ್ನೋ ಕಲ್ಪಿಸಿಕೋ, ನಿನ್ನಂತೆ ಒಬ್ಬ ಜೀವಿ ಎಂಬುದನ್ನುತಿಳಿದುಕೋ’ ಎಂದೇನಾದರು ಹೇಳುವುದನ್ನು ಕೇಳಿದ್ದೀರಾ..?
ಇಲ್ಲ ..ಯಾಕೆಂದರೆ ಗಂಡುಗಳಿಗೆ ಕಳೆದುಕೊಳ್ಳುವುದಕ್ಕೇನೂ ಇರುವುದಿಲ್ಲ ಎಂಬುದು ಎಲ್ಲರೂ ನಂಬಿಕೊಂಡು ಬಂದ ತತ್ವ. ‘ ಶೀಲ ಕಳೆದುಕೊಳ್ಳುವುದು’ ಎನ್ನುವ ಕಾನ್ಸೆಪ್ಟ್ ಸ್ತ್ರೀಯರಿಗೆ ಮಾತ್ರವೇ ಮೀಸಲು ಎಂದುಕೊಂಡಿದ್ದೇವೆ.ಅತ್ಯಾಚಾರ ಘಟಿಸಿದಾಗ ಹೆಣ್ಣನ್ನು ಅನುಕಂಪದಿಂದ ನೋಡುತ್ತೇವೆ.ಇಲ್ಲವೇ ಅವಹೇಳನ ಮಾಡುತ್ತೇವೆ. ಆಕ್ಸಿಡೆಂಟ್ ಆದಾಗ ‘ಅಯ್ಯೋ ಗಾಬರಿ ಆಗುವಂತಹುದೇನಿಲ್ಲ. ಬೇಗನೇ ಗಾಯ ವಾಸಿಯತ್ತೆ ಬಿಡು’ ಎನ್ನುವ ಚಿಂತನೆಯನ್ನೇ ಇಲ್ಲಿಯೂ ಮಾಡಿದರೇನು..ದೇಹ ಮತ್ತು ಮನಸ್ಸುಗಳ ಮೇಲಾದ ಆಘಾತಗಳ ಪರಿಣಾಮವನ್ನು ತಗ್ಗಿಸುವ ಪ್ರಯತ್ನವೇಕೆ ಮಾಡಬಾರದು?

‍ಲೇಖಕರು avadhi

9 July, 2013

9 Comments

  1. basavaraja.kp

    samaaja badallagabeekide.adu nammindale praarambhavaagabeekide.

  2. ಜಿ.ಎನ್ ನಾಗರಾಜ್

    ಶೀಲ ಎಂಬುದು ಕೇವಲ ಶೀಲ ಮಾತ್ರವಲ್ಲ. ಶೀಲ ಕನ್ಯಾದಾನದ ಜೊತೆಗೆ,ಪಾತಿವ್ರತ್ಯದ ಜೊತೆಗೆ, ಎಲ್ಲಕ್ಕಿಂತ ಮುಖ್ಯವಾಗಿ ಅಪ್ಪನ ಆಸ್ತಿಯ ಉತ್ತರಾಧಿಕಾರಿಯ ಜೆನುಯಿನ್ ನೆಸ್ ಜೊತೆಗೆ ಹೆಣೆದುಕೊಂಡಿದೆ. ಆದ್ದರಿಂದಲೇ ಪುರುಷರಿಗೆ ಶೀಲವಿಲ್ಲ. ಆದ್ದರಿಂದಲೇ ವಿಧವೆಯರಿಗೆ ಪುನರ್ವಿವಾಹವಿಲ್ಲ ಮಾತ್ರವಲ್ಲ ” ಚಿಕ್ಕ ತಿಲಕ ಬಟ್ಟು ಇಕ್ಕದಿರು ಎಲೆ ಹೆಣ್ಣೆ, ಎಂಟೆಂಟು ದಿನಕ್ಯಾಕೆ ಸಂತೆಯು ಎಲೆ ಹೆಣ್ಣೆ ” ಎಂಬ ಕಟ್ಟಳೆಗಳು.ಅದೇ ಆಸ್ತಿಯಿಲ್ಲದ ಬುಡುಕಟ್ಟು ಜನರಲ್ಲಿ ಶೀಲದ ಕಟ್ಟಳೆಯಿಲ್ಲ. ಆಸ್ತಿ ಕಡಿಮೆಯಿದ್ದ ಕೆಳ ಜಾತಿಗಳಲ್ಲಿ ವಿಧವಾ ವಿವಾಹ- ಉಡಿಕೆ-ಸೀರುಡಿಕೆಗಳು ಮೊನ್ನೆಯವರಿಗೆ ವ್ಯಾಪಕವಾಗಿದ್ದವು.ನಿಮಗೆ ಗೊತ್ತೆ ಋತುಮತಿಯಾದ ಮೇಲೆ ಮದುವೆಯಾದರೆ ಮದುವೆಯ ಮೂರು ತಿಂಗಳ ನಂತರ ಪ್ರಸ್ತ ಇಟ್ಟುಕೊಳ್ಳುವ ಪದ್ಧತಿ ಇತ್ತೇಕೆ ಎಂಬುದು. ಈ ಎಲ್ಲ ಗಂಟುಗಳನ್ನೂ ಬಿಚ್ಚಿ ಬಿಸಾಕಲು ತಯಾರಾದಾಗ ಮಾತ್ರ ಶೀಲ ಒಂದು ಪ್ರಶ್ನೆಯಾಗುವುದಿಲ್ಲ.ಇಂದಿಗೂ ವಯಸ್ಸಿಗೆ ಬಂದ ಹೆಣ್ಣು ಮಕ್ಕಳ ಮೇಲೆ ಇರುವ ನಿರ್ಬಂಧಗಳೆಲ್ಲಾ ಶೀಲಕ್ಕೆ ಸಂಬಂಧಿಸಿದುವೇ ಅಲ್ಲವೇ.

  3. santosh

    tumba oleya vichar mdm

  4. bharathi b v

    ide ide prashne nannannoo kaadutte anitha

  5. yash

    ಆಕ್ಸಿಡೆಂಟ್ ಆದಾಗ ‘ಅಯ್ಯೋ ಗಾಬರಿ ಆಗುವಂತಹುದೇನಿಲ್ಲ. ಬೇಗನೇ ಗಾಯ ವಾಸಿಯತ್ತೆ ಬಿಡು’ ಎನ್ನುವ ಚಿಂತನೆಯನ್ನೇ ಇಲ್ಲಿಯೂ ಮಾಡಿದರೇನು..ದೇಹ ಮತ್ತು ಮನಸ್ಸುಗಳ ಮೇಲಾದ ಆಘಾತಗಳ ಪರಿಣಾಮವನ್ನು ತಗ್ಗಿಸುವ ಪ್ರಯತ್ನವೇಕೆ ಮಾಡಬಾರದು?
    ನಿಜ…

  6. ತ.ನಂ.ಜ್ಞಾನೇಶ್ವರ

    ಯಾರಾದರೂ ಗಂಡಿಗೆ,’ಹೆಣ್ಣನ್ನು ಗೌರವಿಸು, ಅವಳ ಸ್ಥಾನದಲ್ಲಿ ನಿನ್ನ ತಾಯಿಯನ್ನೋ, ಒಡಹುಟ್ಟುಗಳನ್ನೋ ಕಲ್ಪಿಸಿಕೋ, ನಿನ್ನಂತೆ ಒಬ್ಬ ಜೀವಿ ಎಂಬುದನ್ನುತಿಳಿದುಕೋ’ ಎಂದೇನಾದರು ಹೇಳುವುದನ್ನು ಕೇಳಿದ್ದೀರಾ..? ಕೇಳುವ ಕಾಲ ಬರಲಿ

  7. ತ.ನಂ.ಜ್ಞಾನೇಶ್ವರ

    ಲಜ್ಜೆ ಸ್ತ್ರೀಯರಲ್ಲಿರಬೇಕಾದ ಗುಣ
    ಹೀಗೆಂದು ತಿಳಿದಿದ್ದಾರೆ ಜನ
    ಆದರದು ಸರಿಯಲ್ಲವೆನ್ನುತ್ತದೆ ನನ್ನ ಮನ
    ಪುರುಷರಲ್ಲಿಯೂ ಇರಬೇಕು ಲಜ್ಜೆಯ ಗುಣ
    – ಸ್ವಾಮಿ ಪುರುಷೋತ್ತಮಾನಂದ

  8. M Shashikala

    ಆಕ್ಸಿಡೆಂಟ್ ಆದಾಗ ‘ಅಯ್ಯೋ ಗಾಬರಿ ಆಗುವಂತಹುದೇನಿಲ್ಲ. ಬೇಗನೇ ಗಾಯ ವಾಸಿಯತ್ತೆ ಬಿಡು’ ಎನ್ನುವ ಚಿಂತನೆಯನ್ನೇ ಇಲ್ಲಿಯೂ ಮಾಡಿದರೇನು..ದೇಹ ಮತ್ತು ಮನಸ್ಸುಗಳ ಮೇಲಾದ ಆಘಾತಗಳ ಪರಿಣಾಮವನ್ನು ತಗ್ಗಿಸುವ ಪ್ರಯತ್ನವೇಕೆ ಮಾಡಬಾರದು? …
    ಖಂಡಿತ ಸರಿ
    ಯಾವೊದೋ ತಮಿಳು ಸಿನೆಮಾದಲ್ಲಿ ಅತ್ಯಾಚಾರಕ್ಕೆ ಒಳಗಾದ ಮಗಳಿಗೆ ಅಮ್ಮ ತಲೆಸ್ನಾನ ಮಾಡಿಸುತ್ತ ಇನ್ನು ಯಾವುದೇ ಕಳಂಕವಿಲ್ಲ ಎಂದು ಮಗಳಿಗೆ ಹೇಳಿತ್ತಿರುವ ದೃಶ್ಯ ನೆನಪಾಗುತಿದೆ

  9. dinakar

    Houdu… nimma maatu satya…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading