ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಾಂತಲಾ ಭಂಡಿ ಕವಿತೆ: ನಡುಮನೆ

ಶಾಂತಲಾ ಭಂಡಿ
ಅಲ್ಲಿ ಹಬ್ಬಕ್ಕೆ ಬಾರದ ಹಿರಿಮಗಳಿಗೆ
ಹೆಬ್ಬಾಗಿಲಲ್ಲಿ ಕಾಯುತ್ತಿದ್ದಾನೆ ಅಪ್ಪ
ನಡುವಯಸ್ಸು ಜಾರುತ್ತಿದೆ
ಯೋಚಿಸುತ್ತಿದ್ದಾನೆ ಕರೆಯಲು ಮರೆತೆನೋ ಹೇಗೆ? 

ಇಲ್ಲಿ ಅಳಿಯನಿಗೆ ಅಲ್ಲಲ್ಲಿ ಬಿಳಿಕೂದಲು
ಮಗಳು ಹೇಳಿದ್ದಾಳೆ
ಬುದ್ಧಿ ಮಾಗುತ್ತಿದೆ ಕಣೋ… ಅಂತ
ನಡುಮನೆಯಲ್ಲಿ ನಿಂತು
ಮುಹೂರ್ತಮುಂಡಿಗೆಯ ಮೂಲೆಯಲ್ಲಿ
ಸಣ್ಣಗೆ ಹಚ್ಚಿಟ್ಟ ದೀಪ ಓಲಾಡಿ ನಗುತ್ತಲಿದೆ

ಬಿಳಿಕೂದಲ ಗಂಡನ ಜೊತೆ
ಮಗಳಿಗೇನೋ ಸಂಭ್ರಮ
ನಡುಮನೆಯಲ್ಲಿ ನಿಂತು ಹೇಳಿದ್ದಾಳೆ
ನಾನಿವತ್ತು ಮಲಗುವುದು ತಡವೆಂದು,
ಊದ್ದನೆಯ ಕಾದಂಬರಿ ಓದುತ್ತ
ಕಾಯುತ್ತಿದ್ದಾನೆ ಅವನೂ ನಡುಮನೆಯಲ್ಲೇ

ಬಂದವಳು ಕಳೆದುಹೋಗಿದ್ದಾಳೆ
ಅವನ ಬಿಸಿಯಪ್ಪುಗೆಯಲ್ಲಿ
ಅವನ ಬಿಳಿಕೂದಲ ಸಡಗರದಲ್ಲಿ
ಅಡಗಿಕೊಂಡಿದ್ದಾವೆ ಇವಳ ಅಷ್ಟೂ ಬೆರಳು

ಕಾಯುತ್ತಿದ್ದಾರೆ ಅಪ್ಪ ಕಾಣದ ಮಗಳಿಗೆ
ಈ ಹಬ್ಬಕ್ಕೆ ಬಂದರೂ ಬಂದಾಳೆಂದು
ಕಾಯದಿರಿ ಅಪ್ಪ ಮತ್ತೆ
ಕಳೆದುಹೋದವಳನ್ನ
ಇದ್ದಲ್ಲೇ ದೀಪ ಹಚ್ಚಿದ್ದೇನೆ
ಹಬ್ಬ-ಹರಿದಿನಗಳಲಿ
ಪುರುಸೊತ್ತಿಲ್ಲ ನಡುಮನೆಗೆ ಅಪ್ಪಾ…
ನಾನೀಗ ನಡುಮನೆಯಲ್ಲಿದ್ದೇನೆ
ಮತ್ತೆ ಮರಳಲಾರೆನಪ್ಪಾ…
ಹುಡುಕಬೇಡಿ ನನ್ನ
ನೀವಾಗಿ ನೀವೆ ಕೊಟ್ಟು ಕಳೆದುಕೊಂಡವಳನ್ನ

 

‍ಲೇಖಕರು G

14 December, 2011

5 Comments

  1. Manjula.N.

    tumba chennagide

  2. sandhya

    ondu nenapu, innondu nalina kanasu, ‘atta neeveleyuviri, itta naaneleyuvenu, naluguvalu naduve hudugi…’ KSN kavana nenapaytu..

  3. Chandra S Kodi

    Super….keep it Up

  4. D.RAVIVARMA

    ಕವನ ಮನಮುಟ್ಟುವಂತಿದೆ. ಮಗಳನ್ನು ಮುಪ್ಪಿನಲಿ ನೋಡುವ ಕಾತರದ ತಂದೆಯ ತಳಮಳ, ಹೋಗಲೂ ಸಾಧ್ಯವಾಗದ, ಹೋಗದಿರಲಾಗದ,, ಅಸಯಕತನ, ತಂದೆ,ಮಗಳ ನಡುವಿನ ಕರುಳಬಲ್ಲಿಯ, ಭಾವನೆಗಳನ್ನು,ಚೆನ್ನಾಗಿ, ಬರೆದಿದ್ದೇರಿ ಜನಪದ ಹಾಡುಗಳಲ್ಲಿ ಈ ತರದ ಭಾವನೆಗಳನ್ನು ಹೊರಹಾಕಿದ ಅದ್ಬುತ ಹಾಡುಗಳಿವೆ,” ತಾಯಿ ತವರೂರ ಮಣಿ ನೋಡ ಬಂದೆ, ತಾಯಿ ನೆನಪಾಗಿ kannera ತಂದೆ,” ಆಷಾಡ ಮಾಸ ಬಂದಿತವ್ವ ಅಣ್ಣ ಬರಲಿಲ್ಲ ಕರಿಯಾಕ, ಅಣ್ಣ ಬರಲಿಲ್ಲ ಕರೀಯಕ ” ಬಳೆಗಾರ್ ಚೆನ್ನಯ್ಯ ಬಾಗಿಲಿಗೆ ಬಂದಿಹೆನು ಒಳಗೆ ಬರಲಪ್ಪನೆಯೇ, ದೊರೆಯೇ,ನವಿಲ್ಲೋರಿನಿಂದ ನುಡಿಯೊಂದು ತಂದಿಹೆನು,, ಭಾಗ್ಯದ ಬಳೆಗಾರ ಹೋಗಿಬಾ ನನ್ನ ತವರೀಗೆ , ಹೀಗೆ ಹೀಗೆ ಇನ್ನು ಹಲವು, ಬಟ್ ನಿಮ್ಮ ಕವನದ ಪಿಸುಮಾತು ನಿಜಕ್ಕೂ ಅದ್ಬುತ ಹಾಗು ಮನಮಿಡಿಯುವಂತಿದೆ.
    ಡಿ.ರವಿ ವರ್ಮ ಹೊಸಪೇಟೆ .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading