ವೈ ಕೆ ಸಂಧ್ಯಾಶರ್ಮ

ಕ್ರೌರ್ಯ
ಹಸಿರುಗಿಡದ ಮೇಲೆ
ಸ್ವಚ್ಛಂದ ನಗುವ ಹೂವಿನ
ನಗುವನು ಚಿವುಟಿ
ಆತ್ಮನ ಕಿತ್ತು
ನರಳಿಸುವ ಈ ಪೂಜೆ
ಅಲಂಕರಣ
ಯಾವ ದೇವರಿಗೆ ಪ್ರೀತಿ?

ಮುನಿಸು
ಮುಗಿಲ ಸುಂದರಿ
ತನ್ನ ಚಿಕ್ಕೆಗಣ್ಣ ಮುಚ್ಚಿ
ಕಾರ್ಮುಗಿಲ ಸೆರಗ ಮುಸುಕಿಕ್ಕಿ
ಮುಸು ಮುಸು ಅತ್ತದ್ದು
ಇಳೆಗೆ ತುಂತುರು ಮಳೆ

ಕತ್ತಲೆ ಯಾರಿಗೆ?
ಮುಸ್ಸಂಜೆ ಹೊತ್ತಲ್ಲಿ
ಪೂಜೆಯ ಕೋಣೆಯೊಳಗೆ
ಇಡುಗಿದ್ದ ಕತ್ತಲ ಕಂಡು
ಅಯ್ಯೋ ಪ್ರಮಾದವಾಯಿತೇ
ಪಾಪ ದೇವರು
ಕತ್ತಲಲ್ಲಿದ್ದಾನೆಂದು
ಲೊಚಗುಡುತ ಮುಚ್ಚಟೆಯಿಂದ
ತುಪ್ಪದ ದೀಪವ
ಬೆಳಗಿಸುವ ಮಂದಿಗೆ
ಗೊತ್ತಿಲ್ಲ ತಾವಿರುವುದು
ಕತ್ತಲೆಯಲಿ ಎಂದು!






chennagive
channagide madam
nice..very nice mam